ಕರ್ನಾಟಕ

karnataka

By

Published : Jul 26, 2020, 6:48 PM IST

ETV Bharat / state

ರಾಜ್ಯಾದ್ಯಂತ ಹೇಗಿತ್ತು ಭಾನುವಾರದ ಲಾಕ್ ಡೌನ್​; ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾನುವಾರದ ಲಾಕ್ ಡೌನ್​ ಹೇಗಿತ್ತು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ...

Sunday Lockdown Update
ರಾಜ್ಯಾದ್ಯಂತ ಹೇಗಿತ್ತು ಭಾನುವಾರದ ಲಾಕ್ ಡೌನ್

ಕೊರೊನಾ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರತೀ ಭಾನುವಾರ ಲಾಕ್​ ಡೌನ್​ ಘೋಷಿಸಿದೆ. ಕಳೆದ ವಾರ ಲಾಕ್ ಡೌನ್​ ಸಂಪೂರ್ಣ ತೆರವುಗೊಳಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಘೋಷಿಸಿದ್ದರೂ, ಭಾನುವಾರದ ಲಾಕ್ ಡೌನ್ ಮಾತ್ರ ಮುಂದುವರೆದಿದೆ. ಇಂದು ಭಾನುವಾರವಾದ್ದರಿಂದ ರಾಜ್ಯಾದ್ಯಂತ ಲಾಕ್ ಡೌನ್​ ಜಾರಿಯಲ್ಲಿತ್ತು. ಕೆಲ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಇನ್ನೂ ಕೆಲವೆಡೆ ನೀರಸವಾಗಿತ್ತು. ಹಾಗಾದರೆ ರಾಜ್ಯಾದ್ಯಂತ ಇಂದಿನ ಲಾಕ್ ಡೌನ್​ ಹೇಗಿತ್ತು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾವೇರಿ/ವಿಜಯಪುರ/ರಾಯಚೂರು

ಹಾವೇರಿಯಲ್ಲಿ ಸಂಡೇ ಲಾಕ್ ಡೌನ್​ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತವಾಗಿತ್ತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್​ ಆಗಿದ್ದವು. ಪೊಲೀಸ್​ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಸಿಪಿಐಗಳಾದ ಮಂಜಣ್ಣ ಮತ್ತು ಪ್ರಭಾವತಿ ನೇತೃತ್ವದಲ್ಲಿ ಅನಗತ್ಯ ಓಡಾಟ ನಡೆಸಿದವರನ್ನು ತಡೆದ ಪೊಲೀಸರು ಇನ್ನೂರರಿಂದ ಐನೂರು ರೂ.ವರೆಗೆ ದಂಡ ವಿಧಿಸಿದರು.

ವಿಜಯಪುರದಲ್ಲಿ ಭಾನುವಾರದ ಲಾಕ್ ಡೌನ್​ ಯಶಸ್ವಿಯಾಯಿತು. ನಗರದ ಹೃದಯಭಾಗವಾದ ಗಾಂಧಿಚೌಕ್ ಸಂಪೂರ್ಣ ಸ್ತಬ್ಧವಾಗಿತ್ತು. ಲಾಲ್ ಬಹದ್ದೂರ್​ ಶಾಸ್ತ್ರೀ ಮಾರುಕಟ್ಟೆ ಬಂದ್​ ಆಗಿದ್ದವು. ಸಾರಿಗೆ ಬಸ್​ಗಳು ಹಾಗೂ ಖಾಸಗಿ ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಖಾಲಿ ಖಾಲಿಯಾಗಿದ್ದವು.

ಸ್ತಬ್ದವಾದ ವಿಜಯಪುರ ನಗರ

ಬಿಸಿಲ ನಗರಿ ರಾಯಚೂರು ಸಂಡೇ ಲಾಕ್​ ಡೌನ್​ ಹಿನ್ನೆಲೆ ಸ್ತಬ್ಧವಾಗಿತ್ತು. ಅಗತ್ಯ ಸೇವೆಗಳು ಹೊರತುಪಡಿಸಿದರೆ, ಇನ್ನುಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್​ ಆಗಿದ್ದವು. ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್​ ಹಾಕಿ ಅನಗತ್ಯ ಒಡಾಟ ನಡೆಸುವವರ ಮೇಲೆ ನಿಗಾ ಇಟ್ಟಿದ್ದರು. ಅನಾವಶ್ಯಕವಾಗಿ ರಸ್ತೆಗಿಳಿಯುವವರನ್ನು ವಾಪಸ್​ ಕಳಿಸಿದರು.

ಮಂಗಳೂರು/ ಚಿಕ್ಕಮಗಳೂರು/ ಕಾರವಾರ

ಲಾಕ್​ ಡೌನ್​ ಹಿನ್ನೆಲೆ ಕಡಲ ನಗರಿ ಮಂಗಳೂರು ಮೌನವಾಗಿತ್ತು. ಕೆಲವೊಂದು ಖಾಸಗಿ ವಾಹನಗಳ ಸಂಚಾರ ಹೊರತುಪಡಿಸಿದರೆ, ಇತರ ಯಾವುದೇ ಖಾಸಗಿ, ಸರ್ಕಾರಿ ಬಸ್​ಗಳ ಓಡಾಟವಿರಲಿಲ್ಲ. ಪೊಲೀಸರು ಬ್ಯಾರಿಕೇಡ್​ ಹಾಕಿ ರಸ್ತೆಗಳನ್ನು ಬಂದ್​ ಮಾಡಿದ್ದರು. ಹೆದ್ದಾರಿಗಳಲ್ಲಿ ಮಾತ್ರ ಸರಕು ಸಾಗಾಟದ ಲಾರಿಗಳು, ಮಿನಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಚಿಕ್ಕಮಗಳೂರಿನಲ್ಲಿ ಭಾನುವಾರದ ಲಾಕ್ ಡೌನ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಲಾಕ್​ ಡೌನ್​ ಹಿನ್ನೆಲೆ ನಗರ ಬಹುತೇಕ ಸ್ಥಬ್ಧವಾಗಿದ್ದರೂ, ಕೆಲವೆಡೆ ವಾಹನ ಸಂಚಾರವಿತ್ತು. ಜನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಈ ಕುರಿತು ನಗರದ ಹನುಮಂತಪ್ಪ ವೃತ್ತದಿಂದ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ಚಿಕ್ಕಮಗಳೂರಿನಲ್ಲಿ ಲಾಕ್​ ಡೌನ್​ಗೆ ನೀರಸ ಪ್ರತಿಕ್ರಿಯೆ

ಲಾಕ್ ಡೌನ್ ನಡುವೆಯೂ ಕಾರವಾರದಲ್ಲಿ ಜನ ಮೀನು ಖರೀದಿಗಾಗಿ ಮುಗ್ಗಿ ಬಿದ್ದಿದ್ದರು. ನಗರದ ಕೊಡಿಭಾಗ್ ರಸ್ತೆ, ಬಿಲ್ಟ್ ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೀನು ಮಾರಾಟ ಬಲು ಜೋರಾಗಿತ್ತು. ಜನ ಲಾಕ್​ ಡೌನ್​ ಪರಿವೆಯೇ ಇಲ್ಲದೆ ಗುಂಪು ಸೇರಿದ್ದರೂ ಯಾರೂ ಕೇಳುವವರಿರಲಿಲ್ಲ.

ಬೆಳಗಾವಿ/ ಕಲಬುರಗಿ/ ಚಿತ್ರದುರ್ಗ
ಭಾನುವಾರದ ಲಾಕ್​ ಡೌನ್​ಗೆ ಕುಂದಾನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಕೇಂದ್ರ ಬಸ್ ನಿಲ್ದಾಣ, ರವಿವಾರ ಪೇಟೆ, ಚನ್ನಮ್ಮ ವೃತ್ತ, ಖಡೇಬಜಾರ ತರಕಾರಿ ಮಾರುಕಟ್ಟೆಗಳು ಜನರಿಲ್ಲದೆ ಬೀಕೋ ಎನ್ನುತ್ತಿತ್ತು. ಬೆಂಗಳೂರು, ಔರಾದ್​, ಮೈಸೂರು ಹಾಗೂ ಕಲಬುರಗಿ ಸೇರಿದಂತೆ ಕೆಲ ಕಡೆಗಳಿಂದ ಬಸ್​ಗಳು ಆಗಮಿಸಿದರೂ ಬೆರಳಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು. ಇನ್ನು, ರಸ್ತೆಗಳು ಖಾಲಿಯಾಗಿದ್ದರಿಂದ ಪ್ರಾಣಿ ಪಕ್ಷಿಗಳು ವಿಹರಿಸುತ್ತಿರುವುದು ಕಂಡು ಬಂತು. ಸದಾ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ಪಾರಿವಾಳ, ಮುಂಗುಸಿ, ದನಗಳು ಓಡಾಡುತ್ತಿದ್ದವು.

ಕಲಬುರಗಿಯಲ್ಲಿ ಭಾನುವಾರದ ಲಾಕ್​ ಡೌನ್​ಗೆ ಜನ ಅಷ್ಟೊಂದು ಮನ್ನಣೆ ಕೊಟ್ಟಿರಲಿಲ್ಲ. ಸಾರಿಗೆ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತಾದರೂ, ದ್ವಿಚಕ್ರ ವಾಹನ, ಆಟೋಗಳ ಸಂಚಾರ ಎಂದಿನಂತೆ ಇದ್ದವು. ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು. ಆದರೆ, ಕೆಲವೆಡೆ ಹೋಟೆಲ್​ಗಳು ಎಂದಿನಂತೆ ತೆರೆದಿದ್ದವು, ಜನ ಹೋಟೆಲ್​ಗಳ ಮುಂದೆ ಸಾಮಾಜಿಕ ಅಂತರ ಮರೆತು ಗುಂಪು ಸೇರಿರುವುದು ಕಂಡು ಬಂತು.

ತರಕಾರಿ ಮಾರುಕಟ್ಟೆಯಲ್ಲಿ ಜನ ಜಂಗುಳಿ : ಲಾಕ್​ ಡೌನ್​ಗೆ ಕ್ಯಾರೆ ಅನ್ನದೆ ನಗರದ ಶಹಾಬಜಾರ್ ನಾಕದಲ್ಲಿ ರಸ್ತೆ ಬದಿ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದರು.

ಕೋಟೆ ನಾಡು ಚಿತ್ರದುರ್ಗದಲ್ಲಿ ಲಾಕ್​ ಡೌನ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳು ಬಂದ್​ ಆಗಿ, ವಾಹನ ಸಂಚಾರವಿಲ್ಲದೆ ನಗರ ಸಂಪೂರ್ಣ ಸ್ತಬ್ದವಾಗಿತ್ತು. ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಾ ಅನಗತ್ಯ ಓಡಾಟ ನಡೆಸುವವರ ಮೇಲೆ ನಿಗಾ ಇಟ್ಟಿದ್ದರು.

ರಾಜ್ಯಾದ್ಯಂತ ಹೇಗಿತ್ತು ಭಾನುವಾರದ ಲಾಕ್ ಡೌನ್

ಮೈಸೂರು/ತುಮಕೂರು/ ಚಾಮರಾಜನಗರ

ಲಾಕ್ ಡೌನ್​ಗೆ ಸಾಂಸ್ಕೃತಿಕ ನಗರಿ ಸ್ತಬ್ಧವಾಗಿತ್ತು. ನಗರದ ದೇವರಾಜ ಮಾರುಕಟ್ಟೆ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ ಸೇರಿದಂತೆ ಎಲ್ಲಾ ವಾಣಿಜ್ಯ ಕೇಂದ್ರಗಳು ಸಂಪೂರ್ಣ ಬಂದ್ ಆಗಿದ್ದವು.

ಕಲ್ಪತರರು ನಾಡು ತುಮಕೂರಿನಲ್ಲಿ ಭಾನುವಾರದ ಲಾಕ್​ ಡೌನ್ ಯಶಸ್ವಿಯಾಯಿತು. ನಗರಾದ್ಯಂತ ಅಂಗಡಿ ಮುಂಗಟ್ಟುಗಳು ಬಂದ್​ ಆಗಿದ್ದವು. ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಅನಗತ್ಯವಾಗಿ ರಸ್ತೆಗಿಳಿದ ಕೆಲ ವಾಹನ ಸವಾರರಿಗೆ ದಂಡ ವಿಧಿಸಿದರು.

ತುಮಕೂರಿನಲ್ಲಿ ಲಾಕ್​ ಡೌನ್​ಗೆ ಉತ್ತಮ ಪ್ರತಿಕ್ರಿಯೆ

ನಾಲ್ಕನೇ ಭಾನುವಾರವೂ ಚಾಮರಾಜನಗರದಲ್ಲಿ ಲಾಕ್​ ಡೌನ್​ ಯಶಸ್ವಿಯಾಯಿತು. ಹಾಲು, ಔಷಧಿ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್​ ಆಗಿದ್ದವು. ವಾಹನ ಸಂಚಾರವಿಲ್ಲದೆ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಸರಕು ಸಾಗಣೆ ವಾಹನಗಳ ಸಂಚಾರ ಕೂಡ ವಿರಳವಾಗಿತ್ತು. ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ಕೆಲ ಹಿರಿಯ ನಾಗರಿಕರಿಗೆ ಪೊಲೀಸರು ತಿಳಿ ಹೇಳಿ ಮನೆಗೆ ಕಳುಹಿಸಿದರು.

ಧಾರವಾಡ/ ಕಲಘಟಗಿ/ ಗದಗ

ಧಾರವಾಡ ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ವಿಜಯೋತ್ಸವ ಆಚರಣೆ ಮಾಡಲು ಜನ ಗುಂಪಾಗಿ ಸೇರಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಾಮಾಜಿಕ ಅಂತರ ಕಾಪಾಡಿ ಎಂದು ಜನರಿಗೆ ತಿಳಿ ಹೇಳಿದರು. ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಸಲು ಜಿಲ್ಲಾಧಿಕಾರಿ ಆಗಮಿಸಿದ್ದರು. ಈ ವೇಳೆ ಜನರಿಗೆ ಸಾಮಾಜಿಕ ಅಂತರದ ಪಾಠ ಹೇಳಿದರು.

ಇನ್ನು ಕಲಘಟಗಿ ಪಟ್ಟಣದ ಮಾರುಕಟ್ಟೆ ಬಮ್ಮಿಗಟ್ಟಿ ಸರ್ಕಲ್, ಎಪಿಎಂಸಿ, ಬಸ್​ ನಿಲ್ದಾಣ ಸ್ತಬ್ಧವಾಗಿದ್ದವು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವೂ ಬಂದ್​ ಆಗಿತ್ತು.

ಗದಗ ಬೆಟಗೇರಿ ಅವಳಿ ನಗರದಲ್ಲಿ ಲಾಕ್​ ಡೌನ್​ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು, ಸರ್ಕಾರಿ ಮತ್ತು ಖಾಸಗಿ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿತ್ತು. ನಗರದ ಕೆಸಿ ರಾಣಿ ರಸ್ತೆ, ಜನತಾ ಬಜಾರ್, ಗ್ರೇನ್ ಮಾರುಕಟ್ಟೆ, ಟಾಂಗಾಕೂಟ್ ಸೇರಿದಂತೆ ಪ್ರಮುಖ ಪ್ರದೇಶಗಳು ಸ್ತಬ್ಧವಾಗಿದ್ದವು. ಇನ್ನುಳಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಾದ ಗಜೇಂದ್ರಗಡ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದದಲ್ಲಿಯೂ ಲಾಕ್​ ಡೌನ್​ ಯಶಸ್ವಿಯಾಯಿತು.

ABOUT THE AUTHOR

...view details