ಮಂಗಳೂರು: ನಗರದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೃಷಿಕರಿಗೆ ತಮ್ಮ ಭೂಮಿಯಲ್ಲಿ ತಾವು ಇಚ್ಛಿಸುವ ಬೆಳೆ ಬೆಳೆಯಲು ಸೂಕ್ತವೇ ಎಂಬ ಮಣ್ಣಿನ ಸಾರಸತ್ವವನ್ನು ಅರಿಯುವ 'ಅಗ್ರಿಬೋಟ್' ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾನೆ.
ನಗರದ ಎಕ್ಸ್ಪರ್ಟ್ ಪಿ.ಯು.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾರ್ಥಕ್ ಎಸ್. ಕುಮಾರ್ 'ಅಗ್ರಿಬೋಟ್' ಎಂಬ ಮೂಲಮಾದರಿ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು, ಈ ಬಗ್ಗೆ ಮಾಹಿತಿಯನ್ನು ತಿಳಿಸುವ ಆ್ಯಪ್ ಒಂದನ್ನೂ ಸ್ವತಃ ಆತನೇ ಅಭಿವೃದ್ಧಿಪಡಿಸಿದ್ದಾರೆ. ರೈತರು ಈ ಹಿಂದೆ ತಮ್ಮ ಭೂಮಿಯ ಮಣ್ಣಿನ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಿ ಅದರ ವರದಿ ಬರುವವರೆಗೆ ಕಾಯಬೇಕು. ಆ ಬಳಿಕ ಕೃಷಿ ಮಾಡಬೇಕಾಗುತ್ತದೆ. ಆದರೆ ಈ ಮೂಲಮಾದರಿ ಸಾಧನದ ಸಹಾಯದಿಂದ ರೈತ ತಾನಿರುವಲ್ಲಿಯೇ ಇದ್ದು ತಕ್ಷಣವೇ ತಮ್ಮ ಭೂಮಿಯ ಮಣ್ಣಿನ ಸಾರಸತ್ವವನ್ನು ಅರಿಯಲು ಸಾಧ್ಯವಾಗುತ್ತದೆ.
'ಅಗ್ರಿ ರೋಬೋ' ಸಾಧನ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ ಅಗ್ರಿಬೋಟ್' ಕಾರ್ಯ ಹೇಗೆ? :ಅಗ್ರಿಬೋಟ್' ಮೂಲಮಾದರಿ ಸಾಧನವು ರೈತರು ತಮ್ಮ ಭೂಮಿಯಲ್ಲಿ ತಾವು ಇಚ್ಛಿಸುವ ಬೆಳೆಯನ್ನು ಬೆಳೆಯಲು ನೀರಿನ ಅಂಶ, ಖನಿಜಾಂಶಗಳು ಇದ್ದು ಮಣ್ಣು ಸೂಕ್ತವಾಗಿವೆಯೇ ಆ್ಯಪ್ ಮೂಲಕ ತಾಳೆ ಮಾಡಿ ಗುರುತಿಸುತ್ತದೆ. ಜೊತೆಗೆ ಆ ರೈತನು ಯಾವ ರೀತಿಯಲ್ಲಿ ಕೃಷಿಯನ್ನು ಮಾಡಬೇಕು ಎಂಬುದನ್ನು ಸೂಚಿಸುತ್ತದೆ. ಇದೊಂದು ಬೃಹತ್ ವ್ಯವಸ್ಥೆಯ ಸಣ್ಣ ಮಾದರಿಯಾಗಿದ್ದು, ಸ್ವಯಂಚಾಲಿತ ಕೃಷಿ ವ್ಯವಸ್ಥೆ ಎನ್ನಬಹುದು. ಈ 'ಅಗ್ರಿಬೋಟ್' ಮೂಲಮಾದರಿ ಸಾಧನಕ್ಕೆ ಈಗಿನ ದರ ಕೇವಲ 2 ಸಾವಿರ ರೂ. ಆಗಿದೆ. ಇದನ್ನು ಸಾರ್ಥಕ್ ಅವರು 'ಎನ್ಐಟಿಕೆ'ಯಲ್ಲಿ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆಗೆಂದು ಅಭಿವೃದ್ಧಿ ಪಡಿಸಿದ್ದು, ಸುಮಾರು 15 ದಿನಗಳ ಕಾಲ ಸಮಯ ವ್ಯಯ ಮಾಡಿ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರಂತೆ.
ಈ ಹಿಂದೆಯೂ ಸಾರ್ಥಕ್ ಅವರು 'ಸ್ವಚ್ಛ ಬಿನ್' ಎಂಬ ಮೂಲಮಾದರಿ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಕಾರಿನಲ್ಲಿ ಇಡುವ ಡಸ್ಟ್ ಬಿನ್. ಸಾಧಾರಣ ಕಾರಿನಲ್ಲಿ ಚಾಲನೆ ಮಾಡುವಾಗ ಹೆಚ್ಚಿನವರು ತ್ಯಾಜ್ಯವನ್ನು ಹೊರಕ್ಕೆಸೆಯುತ್ತಾರೆ. ಆದರೆ 'ಸ್ವಚ್ಛ ಬಿನ್' ಮೂಲಮಾದರಿ ಸಾಧನವನ್ನು ಕಾರಿನಲ್ಲಿ ಇರಿಸಿಕೊಂಡು ತ್ಯಾಜ್ಯವನ್ನು ಇದಕ್ಕೆ ಹಾಕಿದ್ದಲ್ಲಿ, ಇದರಲ್ಲಿ ಅಳವಡಿಸಿರುವ ಯಂತ್ರದ ಸಹಾಯದಿಂದ ಹುಡಿ ಮಾಡುತ್ತದೆ. ಅಲ್ಲದೆ ಈ ತ್ಯಾಜ್ಯವನ್ನು ಸುಲಭವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.
ಈ ಬಗ್ಗೆ ಸಾರ್ಥಕ್ ಎಸ್.ಕುಮಾರ್ ಮಾತನಾಡಿ, "ನಾನು ಒಂಬತ್ತನೇ ತರಗತಿಯಲ್ಲಿರುವಾಗಲೇ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ತಳೆದಿದ್ದು, ಈ ಸಂದರ್ಭದಲ್ಲಿ ಪ್ರೊಟೊ ಟಿಪಿಕಲ್ ಅಗ್ರಿಕಲ್ಚರ್ ಸಿಸ್ಟಮ್ ಮಾಡಿದ್ದೆ. ಕೃಷಿಯಲ್ಲಿ ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿದ್ದಲ್ಲಿ ಕ್ರಾಂತಿ ಮಾಡಬಹುದು ಎಂದು ನನಗೆ ಆಗ ತಿಳಿಯಿತು. ಆದ್ದರಿಂದ ಈ ಮೂಲ ಮಾದರಿ ಸಾಧನವನ್ನು ಅಭಿವೃದ್ಧಿ ಮಾಡಿದ್ದೇನೆ. ಈ ಸಾಧನವನ್ನು ಅಭಿವೃದ್ಧಿ ಮಾಡುವುದಕ್ಕಿಂತ ಮೊದಲು ಕೃಷಿಯ ಬಗ್ಗೆ ಕೆಲವರು ನನಗೆ ಮಾರ್ಗದರ್ಶನ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ" ಎಂದು ತಿಳಿಸಿದರು.