ಮಂಗಳೂರು:ಚಾಮರಾಜನಗರ ದುರಂತದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಆಮ್ಲಜನಕದ ವ್ಯವಸ್ಥೆ ಮೇಲೆ ತೀವ್ರ ನಿಗಾ ಇಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಹಲವು ಖಾಸಗಿ ಆಸ್ಪತ್ರೆಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 4,500 ಬೆಡ್ಗಳನ್ನು ಕೋವಿಡ್ ರೋಗಿಗಳಿಗೆ ಎಂದು ಮೀಸಲಿಡಲಾಗಿದೆ. ಇದರಲ್ಲಿ 1126 ಕೊರೊನಾ ರೋಗಿಗಳು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಪೈಕಿ 6ರಲ್ಲಿ ಆಸ್ಪತ್ರೆಯಲ್ಲೇ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ಇದೆ. ಅದಕ್ಕೆ ಬೇಕಾದ ಲಿಕ್ವಿಡ್ ಆಕ್ಸಿಜನ್ ಕೂಡ ನಿರಂತರವಾಗಿ ಬರ್ತಾ ಇದೆ. ಜಿಲ್ಲೆಗೆ ಬೇಕಾದ ಆಕ್ಸಿಜನ್ ಬಳ್ಳಾರಿ ಮತ್ತು ಕೇರಳದ ಪಾಲಕ್ಕಾಡ್ನಿಂದ ಸರಬರಾಜಾಗುತ್ತಿದೆ. 80 ಶೇಕಡಾದಷ್ಟು ಬಳ್ಳಾರಿ ಮತ್ತು 10 ಶೇಕಡಾದಷ್ಟು ಪಾಲಕ್ಕಾಡ್ ಜಿಲ್ಲೆಯಿಂದ ಬರುತ್ತಿದ್ದು, 10 ಶೇಕಡಾದಷ್ಟು ಜಿಲ್ಲೆಯಲ್ಲೇ ಉತ್ಪಾದನೆ ಆಗುತ್ತಿದೆ.
ಕೇರಳದ ಪಾಲಕ್ಕಾಡ್ನಿಂದ ಸರಬರಾಜು ವ್ಯತ್ಯಯವಾಗಿದ್ದರಿಂದ ಬಳ್ಳಾರಿಯಿಂದ ಹೆಚ್ಚುವರಿ ಆಕ್ಸಿಜನ್ ತರಲಾಗುತ್ತಿದೆ. ಜಿಲ್ಲೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ಆಕ್ಸಿಜನ್ ಸಂಗ್ರಹವಿದ್ದು, ಬೇಡಿಕೆಗೆ ತಕ್ಕಂತೆ ಸರಬರಾಜಾಗುತ್ತಿದೆ. ಕೇರಳದ ಪಾಲಕ್ಕಾಡ್ನಿಂದ ಪ್ರತಿ ದಿನಕ್ಕೆ ಬರುತ್ತಿದ್ದ 6 ಟನ್ ಆಕ್ಸಿಜನ್ ವ್ಯತ್ಯಯವಾಗಿರುವುದರಿಂದ ಅಷ್ಟು ಆಕ್ಸಿಜನ್ ಬಳ್ಳಾರಿಯಿಂದ ಬರುತ್ತಿದೆ.
ಪಾಲಕ್ಕಾಡ್ನಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಕೇರಳ ಸರ್ಕಾರ ಅಲ್ಲಿಗೆ ಮೀಸಲಿಟ್ಟಿರುವುದರಿಂದ ಈ ಸಮಸ್ಯೆಯಾಗಿದೆ. ಜಿಲ್ಲೆಗೆ ಸನಿಹವಾಗಿರುವುದರಿಂದ ಪಾಲಕ್ಕಾಡ್ನಿಂದಲೇ ಕೊಡುವಂತೆ ವ್ಯವಸ್ಥೆ ಮಾಡುವಂತೆ ಕೇರಳ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಸದ್ಯಕ್ಕೆ ಮೂರು ಕಡೆ ಆಕ್ಸಿಜನ್ ವಿತರಕರಿಂದ ಜಿಲ್ಲೆಗೆ ಬೇಕಾದ ಆಮ್ಲಜನಕ ಸಿಗ್ತಾ ಇದೆ.