ಕರ್ನಾಟಕ

karnataka

By ETV Bharat Karnataka Team

Published : Nov 10, 2023, 4:59 PM IST

Updated : Nov 10, 2023, 7:12 PM IST

ETV Bharat / state

ಮಂಗಳೂರು: ದೀಪಾವಳಿಗೆ ರಂಗು ರಂಗಿನ ಹಣತೆಗಳನ್ನು ಸಿದ್ಧಪಡಿಸಿದ ವಿಶೇಷ ಚೇತನರು

ಸಾನಿಧ್ಯ ವಿಶೇಷ ಮಕ್ಕಳ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳು ಹಣತೆಗಳಿಗೆ ರಂಗು ರಂಗಿನಿನ ಬಣ್ಣ ಬಳೆಯುವ ಮೂಲಕ ದೀಪಾವಳಿ ಹಬ್ಬದ ಮೆರುಗು ಹೆಚ್ಚಿಸುತ್ತಿದ್ದಾರೆ.

Etv Bharatspecially-abled-colorful-lamps-for-dipawali-in-mangaluru
ಮಂಗಳೂರು: ದೀಪಾವಳಿಗೆ ರಂಗು ರಂಗಿನ ಹಣತೆಗಳು ಸಿದ್ಧಪಡಿಸಿದ ವಿಶೇಷ ಚೇತನರು

ದೀಪಾವಳಿ ಹಣತೆಗಳಿಗೆ ಬಣ್ಣದ ಸ್ಪರ್ಶ ನೀಡಿದ ವಿಶೇಷ ಚೇತನರು

ಮಂಗಳೂರು:ನಾಡಿನೆಲ್ಲೆಡೆ ದೀಪಾವಳಿ ಹಬ್ಬಕ್ಕೆ ಬಿರುಸಿನ ತಯಾರಿ ನಡೆಯುತ್ತಿದೆ. ದೀಪಾವಳಿ ದಿನ ಪಟಾಕಿ ಸಿಡಿಸುವುದರ ಜೊತೆಗೆ ಹಣತೆಯ ಮೂಲಕ ದೀಪವನ್ನು ಬೆಳಗುವುದು ಸಾಮಾನ್ಯ. ದೀಪಾವಳಿ ದಿನ ಹೀಗೆ ಬೆಳಗುವ ಹಣತೆಗೆ ಮಂಗಳೂರಿನಲ್ಲಿ ವಿಶೇಷ ಚೇತನರು ವಿಶೇಷ ರಂಗು ನೀಡುತ್ತಿದ್ದಾರೆ. ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯ ಸಾನಿಧ್ಯ ಸ್ಕಿಲ್ ಡೆವಲಪ್ಮೆಂಟ್ ವಿಭಾಗದಲ್ಲಿನ ಇಪ್ಪತ್ತೈದು ವರ್ಷ ಮೇಲ್ಪಟ್ಟ ವಿಶೇಷ ಚೇತನರು ಹಣತೆಗಳಿಗೆ ರಂಗು ರಂಗಿನಿನ ಬಣ್ಣ ಬಳೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಕುಂಬಾರರಿಂದ ನೇರವಾಗಿ ಖರೀದಿಸಿದ ಮಣ್ಣಿನ ಹಣತೆಗಳನ್ನು ಈ ವಿಶೇಷ ಚೇತನರು ಮೊದಲಿಗೆ ನೀರಿನಿಂದ ತೊಳೆದು ಅದಕ್ಕೆ ಬಣ್ಣ ಹಚ್ಚುತ್ತಾರೆ. ಆ ಬಳಿಕ ಅವುಗಳಿಗೆ ಟಿಕಿಲಿಗಳನ್ನು ಅಂಟಿಸಿ ಚಂದಗಾಣಿಸುತ್ತಾರೆ. ಬಳಿಕ ವಿಶೇಷ ಚೇತನ ವಿದ್ಯಾರ್ಥಿಗಳೇ ಬಾಕ್ಸ್​ಗೆ ತುಂಬಿಸಿ ಪ್ಯಾಕ್ ಮಾಡುತ್ತಾರೆ. ಶಾಲೆಯಲ್ಲಿ ಇವರು ಸದಾ ಚಟುವಟಿಕೆಯಿಂದ ಇರಲು ಈ ರೀತಿಯ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಈ ವಿಶೇಷ ಚೇತನ ವಿದ್ಯಾರ್ಥಿಗಳ ಹಣತೆಗಳಿಗೆ ಸ್ಥಳೀಯವಾಗಿ ಉತ್ತಮ ಬೇಡಿಕೆಯೂ ಇದೆ.

ಶಿಕ್ಷಕರ ಮಾರ್ಗದರ್ಶನದಲ್ಲಿ ಇವರು ಹಣತೆಗೆ ವಿಶೇಷ ಟಚ್ ನೀಡುತ್ತಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳು ಕ್ಯಾಂಡಲ್​ಗಳನ್ನು ತಯಾರಿಸುತ್ತಾರೆ.‌ ದೀಪಾವಳಿಗೆ ಗ್ರೀಟಿಂಗ್ ಕಾರ್ಡ್, ರಕ್ಷಾ ಬಂಧನಕ್ಕಾಗಿ ರಾಕಿಯನ್ನು ತಯಾರಿಸುತ್ತಾರೆ. ಆರಂಭದಲ್ಲಿ ಮಕ್ಕಳಿಗೆ ಮಣ್ಣಿನ ಹಣತೆಗಳನ್ನು ಮಾಡಿಸಲಾಗಿತ್ತು. ಆದರೆ, ಆಕಾರ ಸರಿಬಾರದಿದ್ದರಿಂದ ತುಂಬಾ ತಡವಾಗಿ ತಯಾರು ಮಾಡುತ್ತಿದ್ದರಿಂದ ಸದ್ಯ ಮಾರುಕಟ್ಟೆಯಿಂದಲೇ ಹಣತೆಗಳನ್ನು ಖರೀದಿಸಿ ಅವುಗಳಿಗೆ ಬಣ್ಣ ಬಳೆಯಲಾಗುತ್ತಿದೆ. ಈ ಬಾರಿ ಎರಡು ಸಾವಿರಕ್ಕೂ ಅಧಿಕ ಹಣತೆಗಳು ಮಾರಾಟವಾಗಿದ್ದು, ಮತ್ತಷ್ಟು ಹಣತೆಗಳಿಗೆ ಬೇಡಿಕೆಯಿದೆ.

ಸಾನಿಧ್ಯ ಶಾಲೆಯ ಮುಖ್ಯಸ್ಥ ವಸಂತ ಶೆಟ್ಟಿ ಮಾತನಾಡಿ, "ಸಾನಿಧ್ಯ ವಿಶೇಷ ಚೇತನ ಮಕ್ಕಳು ದೀಪಾವಳಿ ಹಣತೆಗಳನ್ನು ಸುಂದರಗೊಳಿಸುತ್ತಿದ್ದಾರೆ. 25 ವರ್ಷ ಮೀರಿದ ಭಿನ್ನ ಸಾಮರ್ಥ್ಯದವರಿಗೆ ಉದ್ಯೋಗ ನೀಡುವ ಕೆಲಸ ಸರ್ಕಾರದಿಂದ ಆಗಬೇಕಾಗಿದೆ. ಈ ವೃತ್ತಿಪರ ತರಬೇತಿ ಕೇಂದ್ರದಲ್ಲಿ ಬೇರೆ ಬೇರೆ ರೀತಿಯ ವಸ್ತುಗಳನ್ನು ತಯಾರಿಸಿ ಇವರಿಗೆ ಪ್ರೋತ್ಸಾಹ ನೀಡುತ್ತೇವೆ. ಇದೀಗ ಹಣತೆಗೆ ಬೇಡಿಕೆಯಿದೆ. ಈ ಮೂಲಕ ಮಕ್ಕಳ ಕೌಶಲ್ಯ ಪ್ರದರ್ಶಿಸಿದಂತಾಗುವುದರ ಜೊತೆಗೆ ಈ ಭಿನ್ನ‌ಸಾಮರ್ಥ್ಯದ ಮಕ್ಕಳನ್ನು ‌ಮುಖ್ಯವಾಹಿನಿಗೆ ತರುವ ಪ್ರಯತ್ನ ಆಗಿದೆ" ಎಂದು ಹೇಳಿದರು.

ಸಾನಿಧ್ಯ ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥೆ ಸುಮಾ ಡಿಸಿಲ್ವಾ ಮಾತನಾಡಿ, "ಇವರು ಕರಕುಶಲ ವಿಭಾಗದಲ್ಲಿ ಅನೇಕ ತರಬೇತಿ ಪಡೆದುಕೊಂಡಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಹಣತೆ ತಯಾರಿ ಮಾಡುತ್ತಿದ್ದಾರೆ. ಹಣತೆ ಸುಂದರಗೊಳಿಸುವ ಕಾರ್ಯ ಮಕ್ಕಳು ‌ಮಾಡುತ್ತಿದ್ದಾರೆ. ನಮ್ಮ ಹಿತೈಷಿಗಳು ಇದನ್ನು ಖರೀದಿಸುತ್ತಿದ್ದು, ಇದು ಮಕ್ಕಳಿಗೆ ಅವರಿಂದ ಸಿಗುವ ಬೆಂಬಲವಾಗಿದೆ. ಇದನ್ನು ಹತ್ತು ವರ್ಷದಿಂದ ಮಾಡುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ" ಎಂದರು.

ಇದನ್ನೂ ಓದಿ:ಸುಪ್ರೀಂ ಕೋರ್ಟ್​ ​ಆವರಣದಲ್ಲಿ ವಿಶೇಷಚೇತನರಿಂದಲೇ ನಡೆಸಲ್ಪಡುವ 'ಮಿಟ್ಟಿ ಕೆಫೆ' ಉದ್ಘಾಟಿಸಿದ ಸಿಜೆಐ: ವಿಡಿಯೋ

Last Updated : Nov 10, 2023, 7:12 PM IST

ABOUT THE AUTHOR

...view details