ಕರ್ನಾಟಕ

karnataka

ETV Bharat / state

ಮಂಗಳೂರು: ಬೆಂಗಳೂರು ಅಯ್ಯಂಗಾರ್‌ ಬೇಕರಿ ಅಂಗಡಿ ಮಾಲೀಕ ಆತ್ಮಹತ್ಯೆ!

ಹಾಸನದ ಮೂಲದ ಬೇಕರಿ ಮಾಲೀಕನೊಬ್ಬ ಮಂಗಳೂರಿನ ಉಳ್ಳಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

By ETV Bharat Karnataka Team

Published : Aug 22, 2023, 7:33 AM IST

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಳ್ಳಾಲ (ದಕ್ಷಿಣಕನ್ನಡ):ಬೇಕರಿ ಅಂಗಡಿಗಳ ಮಾಲೀಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕುತ್ತಾರು ಸಮೀಪದ ಮುಂಡೋಳಿ ಎಂಬಲ್ಲಿ ಸೋಮವಾರ ಸಂಜೆ ವೇಳೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಹಳೇಬೀಡು ರಸ್ತೆಯ ಬಲ್ಲೇನಹಳ್ಳಿ ನಿವಾಸಿ ರುದ್ರೇಶ್‌ (36) ಆತ್ಮಹತ್ಯೆ ಮಾಡಿಕೊಂಡವರು. ಮೃತ ರುದ್ರೇಶ್‌ ಅವರು ಎರಡು ಬೇಕರಿ ಅಂಗಡಿಗಳ ಮಾಲೀಕರಾಗಿದ್ದರು.

ಪತ್ನಿ ಹೇಮಲತಾ ಮತ್ತು ಇಬ್ಬರು ಮಕ್ಕಳ ಜೊತೆಗೆ ಮುಂಡೋಳಿ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಈ ಹಿಂದೆ ಅವರು ಸಂತೋಷ ನಗರದಲ್ಲಿದ್ದರು. ಕೆಲ ದಿನಗಳ ಹಿಂದಷ್ಟೇ ಇಲ್ಲಿನ ಬಾಡಿಗೆ ಮನೆಗೆ ಬಂದಿದ್ದರು. ಹಾಸನದಿಂದ 12 ವರ್ಷಗಳ ಹಿಂದೆ ಉಳ್ಳಾಲಕ್ಕೆ ಬಂದಿದ್ದ ರುದ್ರೇಶ್‌ ಕುತ್ತಾರು ಹಾಗೂ ಯೆನೆಪೋಯ ಆಸ್ಪತ್ರೆ ಬಳಿ ಬೆಂಗಳೂರ್‌ ಅಯ್ಯಂಗಾರ್‌ ಬೇಕರಿಯನ್ನು ನಡೆಸುತ್ತಾ ಬಂದಿದ್ದರು. ಸೋಮವಾರ ಬೆಳಗ್ಗೆ ಬೇಕರಿಯಿಂದ ಮನೆಗೆ ಚಹಾ ಕುಡಿಯಲೆಂದು ಬಂದವರು ವಾಪಸ್​ ಹೋಗಿರಲಿಲ್ಲ.

ಮನೆಯಲ್ಲಿ ಪತಿ ರುದ್ರೇಶ್‌ ಒಂದು ಕೋಣೆಯಲ್ಲಿ ಮಲಗಿದ್ದರೆ, ಪತ್ನಿ ಹೇಮಲತಾ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಓರ್ವ ಮಗಳು ಬೇಕರಿಗೆ ತೆರಳಿದ್ದರೆ ಇನ್ನೊಬ್ಬಳು ಮನೆಯಲ್ಲಿಯೇ ಇದ್ದಳು. ಸಂಜೆ ವೇಳೆ ಪತ್ನಿ ಹೇಮಲತಾ ನಿದ್ರೆಯಿಂದ ಎದ್ದಾಗ ಪತಿ ಏಳದೇ ಇರುವುದನ್ನು ಗಮನಿಸಿ ಬಾಗಿಲು ತೆಗೆಯಲು ಯತ್ನಿಸಿದ್ದಾರೆ. ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ರುದ್ರೇಶ್‌ ಕೋಣೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರುದ್ರೇಶ್‌ ಹೃದಯಸಂಬಂಧಿ ಕಾಯಿಲೆಗೆ ಆಗಾಗ್ಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಪತ್ನಿ ಹೇಮಲತಾ ಕೆಲ ದಿನಗಳ ಹಿಂದೆಯಷ್ಟೇ ಕಿವಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ರುದ್ರೇಶ್‌ ಸಹೋದರಿ ಕೂಡ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದವರು ಸಹೋದರನ ಮನೆಯಲ್ಲಿ ಪುತ್ರನ ಜತೆಗೆ ಎರಡು ದಿನಗಳಿಂದ ಉಳಿದುಕೊಂಡಿದ್ದರು. ಘಟನೆ ವೇಳೆ ಸಹೋದರಿ ಮತ್ತು ಕಿರಿಯ ಮಗಳು ಯೆನೆಪೋಯ ಆಸ್ಪತ್ರೆ ಬಳಿಯ ಬೇಕರಿಯಲ್ಲಿದ್ದರೆ, ಸಹೋದರಿಯ ಪುತ್ರ ಕುತ್ತಾರು ಬೇಕರಿಯಲ್ಲಿ ಇದ್ದರು. ದೊಡ್ಡ ಮಗಳು ಹಾಗೂ ಪತ್ನಿ ಹೇಮಲತಾ ಮನೆಯಲ್ಲೇ ಇದ್ದರು. ಮೃತರು ಎಲ್ಲರೊಂದಿಗೆ ಆತ್ಮೀಯತೆಯಿಂದಿದ್ದು, ಕೆಲ ವರ್ಷಗಳಲ್ಲೇ ಹಲವರ ಸ್ನೇಹ ಸಂಪಾದಿಸಿದ್ದರು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: ಬೆಂಗಳೂರು: ಕಳ್ಳತನ ಆರೋಪ, ನೊಂದು ಡೆತ್‌ನೋಟ್ ಬರೆದಿಟ್ಟು ಚಾಲಕ ಆತ್ಮಹತ್ಯೆ

ಡೆತ್​ ನೋಟ್​ ಬರೆದು ಚಾಲಕ ಆತ್ಮಹತ್ಯೆ:ಕಳ್ಳತನ ಆರೋಪ ಎದುರಿಸಿದ ಕಾರು ಚಾಲಕನೊಬ್ಬ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಕೇರಳ ಮೂಲದ‌ ಜೊಮೊನ್ ವರ್ಗಿಸ್ ಆತ್ಮಹತ್ಯೆಗೆ ಶರಣಾದವರು. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರೀನ್ ವ್ಯೂ ಅಪಾರ್ಟ್​ಮೆಂಟ್ ಟೆರೇಸ್​ನಲ್ಲಿರುವ ಕಿಟಕಿಗೆ ಸೀರೆ ಕಟ್ಟಿ ಜೊಮೊನ್ ವರ್ಗಿಸ್ ನೇಣು ಬಿಗಿದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಮನೆ ಮಾಲೀಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸಾವಿಗೂ ಮುನ್ನ ಮಲಯಾಳಂನಲ್ಲಿ ಡೆತ್ ನೋಟ್ ಬರೆದಿದ್ದಾರೆ.

ABOUT THE AUTHOR

...view details