ಕರ್ನಾಟಕ

karnataka

By

Published : May 14, 2020, 10:30 AM IST

ETV Bharat / state

ಇದನ್ನ ತಿನ್ನೋದ್ಹೇಗ್ರೀ.. ವಲಸೆ ಕಾರ್ಮಿಕರಿಗೆ ಕೊಳೆತ ಅಕ್ಕಿ ವಿತರಣೆ.. ತನಿಖೆಗೆ ಡಿವೈಎಫ್ಐ ಆಗ್ರಹ

ಜೋಕಟ್ಟೆ ಪರಿಸರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದ ಈ ಕಾರ್ಮಿಕರು ವಾರದ ಹಿಂದೆ ಊರಿಗೆ ತಲುಪಿಸುವಂತೆ ಪ್ರತಿಭಟಿಸಿದ್ದರು. ಆಗ ಅಧಿಕಾರಗಳು ತಲಾ ಐದು ಕಿಲೋ ತೂಕದ ನೂರು ಚೀಲ ಅಕ್ಕಿ ಕಾರ್ಮಿಕರಿಗೆ ನೀಡಿದ್ದರು.

rotten rice
rotten rice

ಮಂಗಳೂರು :ಊರುಗಳಿಗೆ ತೆರಳಲು ಸರಿಯಾದ ಪ್ರಯಾಣ ವ್ಯವಸ್ಥೆ ಇಲ್ಲದೆ ಬೀದಿಗೆ ಬಿದ್ದಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಕೊಳೆತ ಅಕ್ಕಿ ವಿತರಿಸಿರುವುದು ಖಂಡನೀಯ. ಈ ಪ್ರಕರಣ ಬಯಲಿಗೆ ಬಂದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್-19 ಪರಿಹಾರ ಕ್ರಮ ಹಾಗೂ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ಬಲವಾಗುತ್ತಿದೆ. ರಾಜ್ಯ ಸರ್ಕಾರ ಈ ಕುರಿತು ಪ್ರತ್ಯೇಕ ತನಿಖೆ ನಡೆಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಜೋಕಟ್ಟೆ ಪರಿಸರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಎಂಆರ್​ಪಿಎಲ್,ಎಸ್​ಇಝಡ್​ಗಳ ಗುತ್ತಿಗೆದಾರರ ಅಧೀನದಲ್ಲಿ ದುಡಿಯುವ ಈ ಕಾರ್ಮಿಕರನ್ನು ಲಾಕ್ ಡೌನ್ ಸಂದರ್ಭ ಕಂಪನಿಗಳು ಹಾಗೂ ಗುತ್ತಿಗೆದಾರರು ಸಂಪೂರ್ಣ ಕಡೆಗಣಿಸಿದ್ದರು. ಹಸಿವಿನಿಂದ ಕಂಗೆಟ್ಟಿದ್ದ ಈ ಕಾರ್ಮಿಕರು ವಾರದ ಹಿಂದೆ ಎಂಆರ್​ಪಿಎಲ್ ಮುಂಭಾಗ ಗುಂಪು ಸೇರಿ ಊರಿಗೆ ತಲುಪಿಸುವಂತೆ ಪ್ರತಿಭಟಿಸಿದ್ದರು.

ವಲಸೆ ಕಾರ್ಮಿಕರಿಗೆ ಕೊಳೆತ ಅಕ್ಕಿ ವಿತರಣೆ..

ಪ್ರತಿಭಟನೆಯ ದಿನ ಜೋಕಟ್ಟೆಗೆ ಆಗಮಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಲಾ ಐದು ಕಿಲೋ ತೂಕದ ನೂರು ಚೀಲ ಅಕ್ಕಿ ಕಾರ್ಮಿಕರಿಗೆ ನೀಡಿದ್ದರು. ಹೆಚ್ಚಿನ ಕಾರ್ಮಿಕರು ಕೊಳೆತ ಅಕ್ಕಿಯನ್ನು ಎಸೆದಿದ್ದು, ಕೆಲವರು ಹಸಿವು ತಾಳಲಾರದೆ ಅದೇ ಅಕ್ಕಿಯನ್ನು ಬೇಯಿಸಿ ತಿಂದಿದ್ದಾರೆ. ಇನ್ನುಳಿದ ಕಾರ್ಮಿಕರಿಗೆ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ವತಿಯಿಂದ ತಾತ್ಕಾಲಿಕವಾಗಿ ಆಹಾರ, ವಸತಿಯ ಏರ್ಪಾಡು ಮಾಡಲಾಗಿತ್ತು.

ಇದೀಗ ಕೆಲವು ಕಾರ್ಮಿಕರು ತಮಗೆ ನೀಡಿರುವ ಕೊಳೆತ ಅಕ್ಕಿಯನ್ನು ಸಮಿತಿಯ ಮುಖಂಡರ ಗಮನಕ್ಕೆ ತಂದಿದ್ದಾರೆ. ಆ ಮೂಲಕ ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯ ಅವ್ಯವಸ್ಥೆ, ಅವ್ಯವಹಾರ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲಾಡಳಿತದ ಕೊರೊನಾ ನಿಯಂತ್ರಣ, ಪರಿಹಾರ ಕ್ರಮಗಳು ಆರಂಭದಿಂದಲೇ ಅವ್ಯವಸ್ಥೆಯ ಆಗರವಾಗಿದೆ. ಆಹಾರ ಕಿಟ್​ಗಳ ವಿತರಣೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.

ಇದೀಗ ಜೋಕಟ್ಟೆಯಲ್ಲಿ ಕೊಳೆತ ಅಕ್ಕಿ ಪತ್ತೆಯಾಗಿರುವುದು ಭ್ರಷ್ಟಾಚಾರ, ಅವ್ಯವಹಾರದ ಆರೋಪಗಳನ್ನು ಪುಷ್ಟೀಕರಿಸಿದೆ. ರಾಜ್ಯ ಸರ್ಕಾರ ತಕ್ಷಣ ಕೊಳೆತ ಅಕ್ಕಿ ವಿತರಣೆ ಪ್ರಕರಣವನ್ನು ಉನ್ನತ ಅಧಿಕಾರಿಗಳ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ABOUT THE AUTHOR

...view details