ಮಂಗಳೂರು : ನಗರದಲ್ಲಿ ನಡೆದ ಎರಡು ದರೋಡೆ ಪ್ರಕರಣಗಳ ಬೆನ್ನತ್ತಿದ್ದ ಪೊಲೀಸರಿಗೆ ಭೂಗತ ಪಾತಕಿ ರವಿ ಪೂಜಾರಿ ಬೆಂಬಲಿಗರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ನಗರದ ನೀರುಮಾರ್ಗ ಮತ್ತು ಕುಲಶೇಖರದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಇಬ್ಬರನ್ನು ದರೋಡೆ ಮಾಡಿ ಬೈಕ್ ಸಮೇತ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದಾಗ, ಆರೋಪಿಗಳು ರವಿ ಪೂಜಾರಿ ಬೆಂಬಲಿಗರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಬಯಲಾಗಿದೆ. ಕುಲಶೇಖರ ನಿವಾಸಿ ದೀಕ್ಷಿತ್ (32), ಸೋಮೇಶ್ವರದ ಚಂದ್ರಹಾಸ್ (34), ಕೋಟೆಕಾರ್ನ ಪ್ರಜ್ವಲ್, ಸುರತ್ಕಲ್ ಚೇಳಾರ್ನ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು (38) ಬಂಧಿತರು. ಈ ಪೈಕಿ ಚಂದ್ರಹಾಸ ಎಂಬಾತ ಮುಂಬೈನಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ 8 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಬಂಧಿತರೆಲ್ಲರೂ ಕೊಲೆ, ಕೊಲೆಯತ್ನ, ಹಲ್ಲೆ, ಗಾಂಜಾ, ಅಕ್ರಮ ಮರಳು ಸಾಗಣೆ ಪ್ರಕರಣಗಳಲ್ಲಿ ಭಾಗಿಯಾದವರು. ಇವರು ಅಪರಾಧ ಚಟುವಟಿಕೆಗಳನ್ನು ಮಾಡಿರುವ ಸುಮಾರು 15-20 ಮಂದಿಯ ಗ್ಯಾಂಗ್ ಕಟ್ಟಿಕೊಂಡಿದ್ದಾರೆ ಎಂದರು.
ಆರೋಪಿಗಳು, ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ದರೋಡೆ ಮಾಡಿದಾಗ ಪೊಲೀಸರಿಗೆ ದೂರು ನೀಡಿದರೆ ಜೈಲಿನಿಂದ ಹೊರಬಂದ ಬಳಿಕ ಪ್ರತೀಕಾರ ತೀರಿಸುವ ಬೆದರಿಕೆ ಹಾಕಿದ್ದರು. ಆರಂಭದಲ್ಲಿ ದೂರು ನೀಡಲು ದರೋಡೆಗೊಳಗಾದವರು ಹಿಂದೇಟು ಹಾಕಿದ್ದರು. ಆದರೆ, ಪೊಲೀಸರು ಧೈರ್ಯ ತುಂಬಿದ ಬಳಿಕ ದೂರು ದಾಖಲಿಸಿದ್ದಾರೆ. ಅದರಂತೆ ಆರೋಪಿಗಳನ್ನು ಪತ್ತೆ ಹಚ್ಚಿದಾಗ ಇವರಿಗೆ ಮುಂದೆ ಬೇರೆ ಬೇರೆ ಅಪರಾಧ ಚಟುವಟಿಕೆಗಳನ್ನು ನಡೆಸಲು ದ್ವಿಚಕ್ರ ವಾಹನಗಳು ಬೇಕಾಗಿದ್ದವು. ಅದಕ್ಕಾಗಿ ದ್ವಿಚಕ್ರ ವಾಹನಗಳನ್ನು ದರೋಡೆ ಮಾಡಿದ್ದರು ಎಂದು ತಿಳಿಸಿದರು.