ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವು (ಚಾರ್ಟರ್ಡ್ ಅಕೌಂಟೆನ್ಸಿ) ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಿದೆ. ಅಖಿಲ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆಯಲ್ಲಿ ಮಂಗಳೂರು ಸಮೀಪದ ಹೊಸಬೆಟ್ಟುವಿನ ರಮ್ಯಶ್ರೀ ಅವರು ದೇಶದಲ್ಲೇ ಎರಡನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಒಟ್ಟು 800 ರಲ್ಲಿ 617 ಅಂಕಗಳನ್ನು ಪಡೆದಿದ್ದಾರೆ.
ಎಲ್ಐಸಿ ಉದ್ಯೋಗಿ ರಮೇಶ್ ಅವರ ಪುತ್ರಿಯಾಗಿರುವ ರಮ್ಯಶ್ರೀ ಅವರು ಸುರತ್ಕಲ್ನ ವಿದ್ಯಾದಾಯಿನಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು. ಬಳಿಕ ಎಸ್ಎಸ್ಎಲ್ಸಿಯಲ್ಲಿ ಮೂರನೇ ರ್ಯಾಂಕ್ ಪಡೆದರು. ಪದವಿ ಜತೆಗೆ ಸಿಎ ಅಖಿಲ ಭಾರತ ಇಂಟರ್ ಪರೀಕ್ಷೆಯಲ್ಲಿ 16ನೇ ರ್ಯಾಂಕ್ ಗಳಿಸಿದ್ದರು. ಜೊತೆಗೆ ಮಂಗಳೂರಿನ ಕಾಮತ್ ಆ್ಯಂಡ್ ರಾವ್ ಸಂಸ್ಥೆಯಲ್ಲಿ ದಯಾಕರ ರಾವ್ ಅವರಿಂದ ಮತ್ತು ಇತ್ತೀಚೆಗೆ ಎಂಆರ್ಪಿಎಲ್ನಲ್ಲಿ ತರಬೇತಿ ಪಡೆದಿದ್ದಾರೆ.
ತಮ್ಮ ಸಾಧನೆಯ ಕುರಿತು ಮಾತನಾಡಿದ ರಮ್ಯಶ್ರೀ, ನನ್ನ ಕುಟುಂಬದ ಎಲ್ಲ ಸದಸ್ಯರ ಮತ್ತು ಹಿರಿಯಣ್ಣನ ಪ್ರೋತ್ಸಾಹ, ಗುರು, ಹಿರಿಯರ ಆಶೀರ್ವಾದದಿಂದ ರ್ಯಾಂಕ್ ಪಡೆಯಲು ಸಾಧ್ಯವಾಗಿದೆ. ಮುಂದೆ ಯಾವುದಾದರೂ ಸಂಸ್ಥೆಯಲ್ಲಿ ದುಡಿಯುತ್ತೇನೆ. ಎರಡನೇ ರ್ಯಾಂಕ್ ಪಡೆಯಲು ನನ್ನ ಮೇಲೆ ನನಗೆ ಬಹಳ ವಿಶ್ವಾಸವಿತ್ತು ಎಂದಿದ್ದಾರೆ.
ಸಿಎ ಫೈನಲ್ ಪರೀಕ್ಷೆಯಲ್ಲಿ ಶೇಕಡಾ 11.09 ರಷ್ಟು ಅಭ್ಯುರ್ಥಿಗಳು ಪಾಸ್: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಬಿಡುಗಡೆ ಮಾಡಿದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಶೇಕಡಾ 12.72 ಅಭ್ಯರ್ಥಿಗಳು ಉತ್ತೀರ್ಣರಾದರೆ, ಸಿಎ ಫೈನಲ್ ಪರೀಕ್ಷೆ ಪರೀಕ್ಷೆಯಲ್ಲಿ ಶೇಕಡಾ 11.09 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.