ಕರ್ನಾಟಕ

karnataka

By ETV Bharat Karnataka Team

Published : Oct 17, 2023, 7:38 PM IST

ETV Bharat / state

ಪುತ್ತೂರು: ಪ್ರೇತದ ವೇಷದಲ್ಲಿ ತಿರುಗಾಡುವ ರಿಕ್ಷಾ ಚಾಲಕ: ದಿನವಿಡೀ ವ್ರತಾಚರಣೆ.. ಏನಿವರ ವಿಶೇಷತೆ

ಪುತ್ತೂರು ನಗರದಲ್ಲಿ ಪ್ರೇತ ವೇಷ ತೊಟ್ಟ ರಿಕ್ಷಾ ಚಾಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Etv Bharat
Etv Bharat

ಪ್ರೇತದ ವೇಷದಲ್ಲಿ ತಿರುಗಾಡುವ ರಿಕ್ಷಾ ಚಾಲಕ

ಪುತ್ತೂರು (ದಕ್ಷಿಣ ಕನ್ನಡ) :ರಾಜ್ಯಾದ್ಯಂತ ವಿಜಯದಶಮಿಯ ಸಂಭ್ರಮ ಮನೆ ಮಾಡಿದೆ. ಮೈಸೂರಿನಂತೆ ಮಂಗಳೂರಿನಲ್ಲೂ ದಸರಾ ವೈಭವಕ್ಕೆ ಕೊರತೆ ಏನಿಲ್ಲ.ಮಂಗಳೂರು ದಸರಾಕ್ಕೆ ಈಗಾಗಲೇ ಭರ್ಜರಿಯಾಗಿಯೇ ಚಾಲನೆ ಸಿಕ್ಕಿದ್ದು, ನವರಾತ್ರಿ ದಿನಗಳಲ್ಲಿ ವಿವಿಧ ಬಗೆಯ ವೇಷ ತೊಟ್ಟು ರಸ್ತೆಯಲ್ಲಿ ಓಡಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಪ್ರೇತ ವೇಷ ತೊಟ್ಟಿರುವ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮಧ್ಯೆ ದಿಢೀರನೆ ಪ್ರತ್ಯಕ್ಷಗೊಂಡು ಹಲವರನ್ನು ಏಕಾಏಕಿ ಬೆಚ್ಚಿ ಬೀಳುವಂತೆ ಮಾಡುತ್ತಿದ್ದಾರೆ.

ಚಿಕ್ಕಮುಡ್ನೂರು ಗ್ರಾಮದ ನಿವಾಸಿ ಆಪದ್ಭಾಂದವ ಹೆಸರಿನ ರಿಕ್ಷಾ ನಡೆಸುವ ಚಾಲಕ ದಿವಾಕರ ದೇವಾಡಿಗ ಕಳೆದ 12 ವರ್ಷಗಳಿಂದ ನವರಾತ್ರಿಯ ನಿಮಿತ್ತ ವಿವಿಧ ವೇಷ ಧರಿಸಿ ಹಬ್ಬದ ಆಚರಣೆಯನ್ನು ವಿಶೇಷವಾಗಿ ಆಚರಿಸುತ್ತಾ ಬಂದಿದ್ದಾರೆ. ಕಳೆದ ಸುಮಾರು 6 ವರ್ಷಗಳಿಂದ ಪ್ರೇತದ ವೇಷ ಧರಿಸಿ ಜನರಿಗೆ ಮನರಂಜನೆ ನೀಡುತ್ತಿದ್ದು, ರಸ್ತೆ ಬದಿ, ಕರೆಂಟ್ ಕಂಬದಲ್ಲಿ ನಿಂತುಕೊಂಡು ವಿಚಿತ್ರ ಶಬ್ದ ಮಾಡುತ್ತಾ ನೋಡುಗರ ಕುತೂಹಲಕ್ಕೆ ಕಾರಣವಾಗಿದ್ದಾರೆ.

ಸುಮಾರು 55 ವರ್ಷ ಪ್ರಾಯದ ದಿವಾಕರ ದೇವಾಡಿಗ ಅವರು ದಿನವಿಡೀ ವ್ರತಾಚರಣೆಯೊಂದಿಗೆ ನವರಾತ್ರಿ ದಿನಗಳಲ್ಲಿ ಪ್ರೇತದ ವೇಷದಲ್ಲಿ ತಿರುಗಾಡಲಿದ್ದಾರೆ. ನಾಗ ಆರ್ಟ್ಸ್ ಅವರು ದಿವಾಕರ ಅವರಿಗೆ ಪ್ರತಿ ದಿನ ಬೆಳಗ್ಗೆ ಪ್ರೇತದ ವೇಷ ಹಾಕುತ್ತಿದ್ದು, ತಾನು ಮೂರನೇ ತರಗತಿಯಲ್ಲಿರುವಾಗ ಪಠ್ಯದಲ್ಲಿದ್ದ ವ್ಯಕ್ತಿಯ ದೇಹದ ಚಿತ್ರಣವನ್ನು ಕಲ್ಪಿಸಿಕೊಂಡು ಈ ವೇಷ ಹಾಕಲು ಆರಂಭಿಸಿದ್ದೇನೆ ಎನ್ನುತ್ತಾರೆ ಅವರು. ಪ್ರತಿ ಸಲ 4 ದಿನಗಳ ವರೆಗೆ ವೇಷ ಹಾಕುವುದಕ್ಕೆ ಅವಕಾಶ ನೀಡುತ್ತಿದ್ದರು. ಆದರೆ ಈ ಬಾರಿ 9 ದಿನಗಳ ಕಾಲ ಕೂಡ ವೇಷ ಹಾಕುವುದಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

ಹಗಲಿನಲ್ಲಿ ಮಾತ್ರ ವೇಷ ಧರಿಸಿ ಸಂಜೆ 6 ಗಂಟೆಗೆ ಮನೆಗೆ ಹೋಗುತ್ತೇನೆ. ಯಾರೊಬ್ಬರಿಗೂ ಕಿರಿಕಿರಿ ಮಾಡಿಲ್ಲ. ಅಲ್ಲದೇ, ಯಾರಲ್ಲೂ ಹಣ ಕೇಳುವುದಿಲ್ಲ, ಕೊಟ್ಟವರಿಂದ ತೆಗೆದುಕೊಳ್ಳುತ್ತೇನೆ. ಇಷ್ಟವಿಲ್ಲ, ಬರಬೇಡಿ ಎಂದರೆ ಮತ್ತೆ ಅಲ್ಲಿಗೆ ಹೋಗುವುದಿಲ್ಲ. ಹಲವು ಮಂದಿ ಅವರೇ ಕರೆಸಿಕೊಂಡು ಹಣ ನೀಡುತ್ತಾರೆ. 9 ದಿನಗಳ ಕಾಲ ಉಪವಾಸ ಮಾಡುತ್ತೇನೆ ಎಂದು ದಿವಾಕರ ದೇವಾಡಿಗ ಅವರು ಹೇಳಿದರು.

ಇದನ್ನೂ ಓದಿ :ಮನೆಯೊಳಗೆ ದಸರಾ ವೈಭವ: ಗೊಂಬೆಗಳ ಮೂಲಕ ನವರಾತ್ರಿ - ದಸರಾ ಆಚರಣೆ

ABOUT THE AUTHOR

...view details