ಕರ್ನಾಟಕ

karnataka

16 ವರ್ಷಗಳ ಹಿಂದೆ ಪುತ್ತೂರಿನ ಮನೆಯಿಂದ ಚಿನ್ನಾಭರಣ ಕದ್ದ ಪ್ರಕರಣ: ಅಪರಾಧಿಗೆ 9 ವರ್ಷ ಜೈಲು ಶಿಕ್ಷೆ

By

Published : Mar 5, 2022, 9:03 AM IST

16 ವರ್ಷಗಳ ಹಿಂದೆ ಪುತ್ತೂರಿನ ಮನೆಯಿಂದ ಚಿನ್ನಾಭರಣ ಕದ್ದ ಪ್ರಕರಣ ಸಂಬಂಧ ಅಪರಾಧಿಗೆ 9 ವರ್ಷ ಜೈಲು ಶಿಕ್ಷೆಯನ್ನು ಪುತ್ತೂರಿನ ನ್ಯಾಯಾಲಯ ಪ್ರಕಟಿಸಿದೆ.

offender sentenced to nine years in prison
ನಾಗರಾಜ್ ಬಳೆಗಾರ ಶಿಕ್ಷೆಗೊಳಗಾದ ಅಪರಾಧಿ

ಪುತ್ತೂರು:16 ವರ್ಷಗಳ ಹಿಂದೆ ಪುತ್ತೂರಿನ ಹೊರವಲಯ ಮೊಟ್ಟೆತಡ್ಕ ನಿವಾಸಿಯೊಬ್ಬರ ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ಆರೋಪಿಗೆ ಪುತ್ತೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಮಂಗಳೂರು ತಾಲೂಕಿನ ಸುರತ್ಕಲ್‌ ಬಳಿಯ ವಿದ್ಯಾನಗರ ಹೊನ್ನಕಟ್ಟೆಯ ನಾಗರಾಜ್ ಬಳೆಗಾರ ಶಿಕ್ಷೆಗೊಳಗಾದ ಅಪರಾಧಿ. ಪ್ರಸ್ತುತ ಈತ ಬೇರೊಂದು ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

2006ರ ಮಾ.14 ರಿಂದ ಮಾ.16ರ ಮಧ್ಯೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದ ಮಹೇಂದ್ರ ಕುಮಾರ್ ಎಂಬುವರ ಮನೆಯ ಬಾಗಿಲಿನ ಬೀಗ ಮುರಿದು 43,000 ರೂ. ಮೌಲ್ಯದ 50.930 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಅಂದಿನ ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕರಾದ ತಿಲಕ್ ಚಂದ್ರ ನೇತೃತ್ವದ ತಂಡ ಮಾಡಿದ್ದು, ಸಂತೋಷ ಮತ್ತು ನಾಗರಾಜ್ ಬಳೆಗಾರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ಬಗ್ಗೆ ಪುತ್ತೂರು ನಗರ ಠಾಣೆ ಎಸ್​ಐ ಕೃಷ್ಣ ನಾಯ್ಕ್ ಅವರು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು.

ಆರೋಪಿಗಳ ಪೈಕಿ ಸಂತೋಷ್‌ ಪ್ರಕರಣ ನಡೆದ ಸಂದರ್ಭ 12 ವರ್ಷದ ಬಾಲಕನಾಗಿದ್ದ. ಹೀಗಾಗಿ ಈತನ ಪ್ರಕರಣದ ವಿಚಾರಣೆ ಬಾಲ ನ್ಯಾಯಾಲಯದಲ್ಲಿ ನಡೆದಿತ್ತು. ಆದರೆ, ಮತ್ತೊಬ್ಬ ಆರೋಪಿ ನಾಗರಾಜ್ ಬಳೆಗಾರ ಕೃತ್ಯ ನಡೆದ ಸಂದರ್ಭ 18 ವಯಸ್ಸಿನ ಯುವಕನಾಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಒಂದನೇ ಆರೋಪಿ ನಾಗರಾಜ್ ಬಳೆಗಾರ ಅಪರಾಧ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ.

ಅಪರಾಧಿಗೆ 457 ಐಪಿಸಿ ಕಲಂ ಅನ್ವಯ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 5,000 ರೂ.ದಂಡವನ್ನು ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಘೋಷಿಸಲಾಗಿದೆ. ಇನ್ನು ಐಪಿಸಿ ಕಲಂ 380ರಲ್ಲಿ ಮಾಡಿದ ಅಪರಾಧಕ್ಕೆ ಸಂಬಂಧಿಸಿದಂತೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ 4,000 ರೂ ಗಳ ದಂಡ ತಪ್ಪಿದ್ದಲ್ಲಿ 5 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ.

ಇದನ್ನೂ ಓದಿ:ಅಕ್ಕಪಕ್ಕದ ಮನೆ ಮಹಿಳೆಯರ ಫೋಟೋ, ವಿಡಿಯೋ ಚಿತ್ರೀಕರಿಸುತ್ತಿದ್ದ 60ರ ವೃದ್ಧ ಪೊಲೀಸರ ಬಲೆಗೆ

ABOUT THE AUTHOR

...view details