ಮಂಗಳೂರು:ಇಲ್ಲಿನ ಕಡಲತೀರದಲ್ಲಿ ಸಿರಿಯಾ ದೇಶದ ಹಡಗಿನಲ್ಲಿ ದೋಷ ಕಂಡುಬಂದ ಪರಿಣಾಮ ಅಪಾಯದಲ್ಲಿದ್ದ 15 ಮಂದಿ ವಿದೇಶಿಗರನ್ನು ಮಂಗಳವಾರ ರಕ್ಷಿಸಲಾಗಿತ್ತು. ಇದೀಗ ಅವರು ಕೋಸ್ಟ್ ಗಾರ್ಡ್ ಸುಪರ್ದಿಯಲ್ಲಿದ್ದಾರೆ. ಮಂಗಳೂರಿನ ಉಳ್ಳಾಲದ 5 ರಿಂದ 6 ನಾಟಿಕಲ್ ಮೈಲ್ ದೂರದಲ್ಲಿ MV PRINCESS MIRAL ಎಂಬ ಸಿರಿಯಾ ದೇಶದ ಹಡಗಿನಲ್ಲಿ ದೋಷ ಕಾಣಿಸಿಕೊಂಡಿತ್ತು. ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕಾಯಿಲ್ನ್ನು ಒಮನ್ನಿಂದ ಈಜಿಪ್ಟ್ಗೆ ಸಾಗಿಸಲಾಗುತ್ತಿತ್ತು.
ಮಂಗಳೂರು ಕಡಲತೀರದಲ್ಲಿ ಪ್ರಯಾಣ ಬೆಳೆಸುವಾಗ ಈ ಹಡಗಿನ ಒಳಭಾಗದ ಸಣ್ಣ ರಂಧ್ರದ ಮೂಲಕ ನೀರು ಬರಲು ಆರಂಭಿಸಿತ್ತು. ಇದರಿಂದ ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು.