ಕರ್ನಾಟಕ

karnataka

By

Published : Mar 2, 2023, 1:14 PM IST

ETV Bharat / state

ಪತ್ರ ಬರೆದು ಯಕ್ಷಗಾನ ಭಾಗವತ ದಿ.ಬಲಿಪ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

ಇತ್ತೀಚೆಗೆ ಇಹಲೋಕ ತ್ಯಜಿಸಿದ ದಿ.ಬಲಿಪ ನಾರಾಯಣ ಭಾಗವತರು- ಪತ್ರ ಬರೆದು ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ.

Prime Minister Modi paid tributes
ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

ಮಂಗಳೂರು (ದಕ್ಷಿಣ ಕನ್ನಡ) :ತೆಂಕುತಿಟ್ಟು ಯಕ್ಷಗಾನದ ದಂತಕತೆ, ಬಲಿಪ ಪರಂಪರೆಯ ಮೇರು ಶಿಖರವಾಗಿದ್ದ ದಿ.ಬಲಿಪ ನಾರಾಯಣ ಭಾಗವತರು ಇತ್ತೀಚೆಗೆ ಇಹಲೋಕ ತ್ಯಜಿಸಿದರು. ಇದೀಗ ಪ್ರಧಾನಿ ಮೋದಿಯವರು ಶ್ರದ್ಧಾಂಜಲಿ ಅರ್ಪಿಸಲು ಪತ್ರಯೊಂದನ್ನು ಬರೆದಿದ್ದು, ಈ ಪತ್ರವನ್ನು ದಿ. ಬಲಿಪ ಭಾಗವತರ ಪುತ್ರ ಬಲಿಪ ಶಿವಶಂಕರ ಭಾಗವತರಿಗೆ ಪ್ರಧಾನಿ ಮೋದಿ ಅವರು ಬರೆದಿದ್ದಾರೆ.

ಫೆ.21ರಂದು ಬರೆದಿರುವ ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದೆ. "ಶ್ರೀ ಬಲಿಪ ಭಾಗವತರ ನಿಧನವು ನನಗೆ ಅತೀವ ನೋವನ್ನು ಉಂಟು ಮಾಡಿದೆ. ಅವರ ಕುಟುಂಬದವರಿಗೆ ಅತೀವ ಸಂತಾಪ ಸೂಚಿಸುತ್ತಿದ್ದೇನೆ" ಎಂದು ಮೋದಿಯವರು ಪತ್ರದಲ್ಲಿ ಬರೆದಿದ್ದಾರೆ. "ಬಲಿಪ ಭಾಗವತರು ಅವರ ಇಡೀ ಜೀವನವನ್ನೇ ಯಕ್ಷಗಾನ ಕಲೆಗೆ ಮುಡಿಪಾಗಿಟ್ಟವರು. ಬಲಿಪ ಶೈಲಿಯ ಭಾಗವತಿಕೆಯಿಂದಲೇ ಅವರು ಜನಮನ್ನಣೆ ಪಡೆದು ಕಲಾ ರಸಿಕರ ಮೆಚ್ಚುಗೆಯನ್ನು ಗಳಿಸಿದ್ದರು. ಯಕ್ಷಗಾನ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಮಹತ್ತರವಾದುದಾಗಿದೆ.

ಬಲಿಪ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

ಆದ್ದರಿಂದ ಕಲಾ ರಸಿಕರ ಅತೀವ ದುಃಖವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈಗ ಭಾಗವತರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಮೌಲ್ಯ, ಆದರ್ಶ ನಮಗೆ ದಾರಿದೀಪವಾಗಲಿದೆ. ಅವರ ಅಗಲುವಿಕೆಯಿಂದ ದುಃಖ ತಪ್ತರಾಗಿರುವ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಯಕ್ಷಗಾನ ಕಲಾ ರಸಿಕರಿಗೆ ದೇವರು ಶಕ್ತಿ ನೀಡಲಿ" ಎಂದು ಪ್ರಧಾನಿ ನರೇಂದ್ರ ಮೋದಿಯವರು ಪತ್ರದಲ್ಲಿ ಬರೆದಿದ್ದಾರೆ.

ಯಕ್ಷಗಾನದ ದಂತಕಥೆ :ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ, 'ಬಲಿಪ' ಪರಂಪರೆಯ ಸಮರ್ಥ ಕೊಂಡಿ ಬಲಿಪ ನಾರಾಯಣ ಭಾಗವತರು ಆರೋಗ್ಯ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಬಲಿಪ ಭಾಗವತರನ್ನು ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಫೆ‌.16ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ತಮ್ಮ ತಂದೆ ಮಾಧವ ಭಟ್ಟರಿಂದ ಯಕ್ಷಗಾನ ಭಾಗವತಿಕೆ ಕಲಿತ ಬಲಿಪ ನಾರಾಯಣ ಭಾಗವತರು, ಅನಂತರ ತಮ್ಮ ಅಜ್ಜ ಬಲಿಪ ಭಾಗವತರಿಂದ ಭಾಗವತಿಕೆ, ಯಕ್ಷಗಾನ ನಡೆಯ ಪಟ್ಟುಗಳನ್ನು ಕರಗತ ಮಾಡಿಕೊಂಡರು. 1952ರಲ್ಲಿ ಮುಲ್ಕಿ ಮೇಳದಲ್ಲಿ ಸಂಗೀತಗಾರರಾಗಿ ಯಕ್ಷ ಪಯಣ ಆರಂಭಿಸಿದ ಇವರು, ಬಳಿಕ ಕೂಡ್ಲು ಮೇಳದಲ್ಲಿ ಸಂಗೀತಗಾರರಾಗಿ ತಿರುಗಾಟ ಮಾಡಿದರು.

1953ರಲ್ಲಿ ಭಗವತಿ ಮೇಳದಲ್ಲಿ ಭಾಗವತರಾಗಿ ಸೇರ್ಪಡೆಗೊಂಡ ಬಲಿಪ ಭಾಗವತರು ಬಳಿಕ ಪೆಡ್ರೆ ಜಟಾಧಾರಿ ಮೇಳ, ಕೂಡ್ಲು, ಇರಾ, ರೆಂಜಾಳ, ಸೌಕೂರು, ಧರ್ಮಸ್ಥಳ, ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. 1972ರಲ್ಲಿ ಕಟೀಲು ಮೇಳ ಸೇರಿದ ಅವರು 2003ರವರೆಗೆ ದೀರ್ಘಾವಧಿ ಕಾಲ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು.

ಆಟ-ಕೂಟ-ಗಾನ ವೈಭವ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದ ಬಲಿಪ ನಾರಾಯಣ ಭಾಗವತರು‌, ಕಿರಿಯ ಬಲಿಪರೆಂದೇ ಪ್ರಸಿದ್ಧರಾದವರು‌. ತಮ್ಮ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು ಹಾಕಿಕೊಟ್ಟ ತೆಂಕುತಿಟ್ಟು ಯಕ್ಷಗಾನದ 'ಬಲಿಪ ಶೈಲಿ'ಯನ್ನು ಸಮರ್ಥವಾಗಿ ಮುನ್ನಡೆಸಿದವರು‌. ಇಂತಹ ಮಹಾನ್​ ವ್ಯಕ್ತಿಯ ಆಗಲಿಕೆಯಿಂದ ಯಕ್ಷಗಾನಕ್ಕೆ ಭಾರಿ ನಷ್ಟ ಉಂಟಾಗಿದೆ. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :ಬಲಿಪ ನಾರಾಯಣ ಭಾಗವತ ನಿಧನ: ಮರೆಯಾದ 'ಬಲಿಪ' ಪರಂಪರೆಯ ದೊಡ್ಡ ಕೊಂಡಿ

ABOUT THE AUTHOR

...view details