ಮಂಗಳೂರು: ಕಾರ್ಕಳದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಸಿಎಂ ಆಕಾಂಕ್ಷಿಗಳು ನನಗೆ ತನುಮನ ಧನದ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೊಸ ಹೇಳಿಕೆ ನೀಡಿದ್ದಾರೆ. ನಗರದ ಆರ್ಯ ಸಮಾಜದ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಕಾರ್ಕಳದ ಹಾಲಿ ಶಾಸಕರು ಮುಂದಿನ ಸಿಎಂ ಎಂದು ಹೇಳಲಾಗುತ್ತಿರುವುದರಿಂದ, ಸೂಟು ಬೂಟು ಹೊಲಿಸಿಕೊಂಡು ಸಾಲಾಗಿ ಸರಣಿಯಲ್ಲಿ ನಿಂತಿರುವ ಮುಖ್ಯಮಂತ್ರಿ ಆಕಾಂಕ್ಷಿಗಳು ನಾನು ಕಾರ್ಕಳದಲ್ಲಿ ಚುನಾವಣೆ ಎದುರಿಸಲು ಸಹಕಾರ ನೀಡುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಅಸಲಿ ಹಿಂದುತ್ವ ಹಾಗೂ ನಕಲಿ ಹಿಂದುತ್ವ, ಭ್ರಷ್ಟಾಚಾರ - ಪ್ರಾಮಾಣಿಕತೆ ಇವರೆಡು ವಿಚಾರವನ್ನು ಮುಂದಿಟ್ಟು ಚುನಾವಣೆ ಕಣಕ್ಕೆ ಇಳಿಯಲಿದ್ದೇನೆ. ಕಾರ್ಕಳದ ಇಂದಿನ ಶಾಸಕರು 2004ರಲ್ಲಿ ಚುನಾವಣೆ ಎದುರಿಸಿದಾಗ ಘೋಸಿರುವ ಆಸ್ತಿ ಎಷ್ಟಿತ್ತು ಹಾಗೂ 3 ಬಾರಿ ಗೆದ್ದ ಬಳಿಕ ಇಂದಿನ ಆಸ್ತಿಯ ಮೌಲ್ಯ ಎಷ್ಟು ಹೆಚ್ಚಾಗಿದೆ ನೋಡಿದಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತಿಳಿಯಲು ಸಾಧ್ಯ ಎಂದರು.
ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ: 2014ರಿಂದಲೂ ಈವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ನನಗೆ ರಾಜಕೀಯದ ಅರಿವಿರದ ಕಾರಣ ನಾನು ವಿಫಲವಾಗುತ್ತಿದ್ದೇನೆ. ಪ್ರಾಮಾಣಿಕತೆ, ನೇರಮಾತು ನನ್ನ ರಾಜಕೀಯದ ಮುಂದುವರಿಕೆಗೆ ಮುಳ್ಳಾಗಿದೆ. ಬಕೆಟ್ ಹಿಡಿದಿದ್ದಲ್ಲಿ, ಭ್ರಷ್ಟಾಚಾರ, ಡೋಂಗಿ ಹಿಂದುತ್ವಕ್ಕೆ ಸಹಕರಿಸಿದ್ದೇ ಆದಲ್ಲಿ ನಾನಿಂದು ಎಲ್ಲಿಯೋ ಹೋಗುತ್ತಿದ್ದೆ. ಆದ್ದರಿಂದ ಈ ಬಾರಿ ನಾನು ಪಕ್ಷೇತರ ಅಭ್ಯರ್ಥಿಯೆಂದು ಘೋಷಿಸಿ ನೇರವಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದು ತಿಳಿಸಿದ್ದಾರೆ.
ಬಾಡಿಗೆ ಮನೆಯಲ್ಲಿರುವ ನನ್ನಲ್ಲಿ ಚುನಾವಣೆ ಎದುರಿಸಲು ದುಡ್ಡಿಲ್ಲ, ಬ್ಯಾಂಕ್ ಖಾತೆಯಿಲ್ಲ. ಆದ್ದರಿಂದ ಜನರಲ್ಲಿ ಮತದೊಂದಿಗೆ ನೂರರ ನೋಟು ಕೊಡಿ ಎಂದು ಕೂಡಾ ಕೇಳುತ್ತಿದ್ದೇನೆ. ಸಾವಿರಾರು ಮಂದಿ ಈಗ ಸಹಕರಿಸುತ್ತಲೂ ಇದ್ದಾರೆ. ಆದ್ದರಿಂದ ನನಗೆ ದುಡ್ಡಿನ ಕೊರತೆಯಾಗುವುದಿಲ್ಲ. ಈ ಮೂಲಕ ಹಿಂದುತ್ವದ ವಿಜಯ ಕಾರ್ಕಳದಿಂದ ಹೊಸ ಇತಿಹಾಸ ಬರೆಯಲಿದೆ ಎಂದು ತಿಳಿಸಿದರು.