ಕರ್ನಾಟಕ

karnataka

ಮೋದಿ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ ಧರಿಸಿದ ಸಾರ್ವಜನಿಕರು.. ಬಟ್ಟೆ ಬಿಚ್ಚಿಸಿದ ಭದ್ರತಾ ಪಡೆ

By

Published : Sep 2, 2022, 9:27 PM IST

ಮೋದಿಯವರ ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿರುವ ಎಸ್​ಪಿಜಿ ವಾಹನವು ಡಿವೈಡರ್ ಏರಿದ ಘಟನೆ ನಡೆದಿದೆ.

ಮೋದಿ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ ಧರಿಸಿದ ಸಾರ್ವಜನಿಕರು
ಮೋದಿ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ ಧರಿಸಿದ ಸಾರ್ವಜನಿಕರು

ಮಂಗಳೂರು: ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಕಪ್ಪುಬಟ್ಟೆ ತೊಟ್ಟು ಬಂದವರನ್ನು ಭದ್ರತಾ ಪಡೆಯವರು ತಡೆದು ಬಟ್ಟೆ ತೆಗೆಸಿದ ಘಟನೆ ನಡೆದಿದೆ.

ನಗರದ ಕೂಳೂರಿನಲ್ಲಿ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು‌ ಬಂದಿದ್ದ ಕೆಲವರು ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಪ್ರಧಾನಮಂತ್ರಿ ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಬರುವವರಿಗೆ ಎಸ್​ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಕೆಲವೊಂದು ನಿಯಮಗಳನ್ನು ವಿಧಿಸಿತ್ತು. ಅದರಂತೆ ಬೆಂಕಿ ಪೊಟ್ಟಣ, ಲೈಟರ್, ಕರಪತ್ರ, ಕಪ್ಪುಬಟ್ಟೆಗಳನ್ನು ಸೇರಿ ನಿಷೇಧಿತ ವಸ್ತುಗಳನ್ನು ತರದಂತೆ ಸೂಚಿಸಲಾಗಿತ್ತು. ನಿನ್ನೆ ಎಡಿಜಿಪಿ ಅಲೋಕ್ ಕುಮಾರ್ ಅವರು ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದರು.

ಪ್ರಧಾನಿ ಮೋದಿ ಅವರ ಕಾರಿನ ಬಳಿಗೆ ಬಂದ ಯುವಕನನ್ನು ತಡೆದ ಪೊಲೀಸ್​ ಸಿಬ್ಬಂದಿ

ಈ ನಿಯಮದಂತೆ ಕಪ್ಪುಬಟ್ಟೆಗಳನ್ನು ತೊಟ್ಟು ಬಂದವರಿಗೆ ಕಾರ್ಯಕ್ರಮ ನಡೆಯುವ ಮೈದಾನಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಆದ್ದರಿಂದ ಕಪ್ಪುಬಟ್ಟೆ ತೊಟ್ಟು ಬಂದವರು ಅಲ್ಲಿಯೇ ಬಟ್ಟೆ ಬಿಚ್ಚಿ ಬೇರೆ ಬಣ್ಣದ ಬಟ್ಟೆಯನ್ನು ತೊಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಯುವಕನನ್ನು ಎಳೆದುಹಾಕಿದ ಸಿಬ್ಬಂದಿ:ನಗರದ ಕೂಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ವೇಳೆ ಅವರ ಕಾರಿನತ್ತ ಓಡಿದ ಯುವಕನನ್ನು ಪೊಲೀಸರು ಎಳೆದು ಹಾಕಿರುವ ಘಟನೆ ನಡೆದಿದೆ.

ಪ್ರಧಾನಿ ಮೋದಿಯವರು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮತ್ತೆ ಎನ್ಎಂಪಿಎನತ್ತ ಭದ್ರತಾ ಪಡೆಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೋದಿ ಅವರು ತೆರಳುತ್ತಿದ್ದ ವೇಳೆ ಪೊಲೀಸರು ಜನರ ಗುಂಪನ್ನು ಬದಿಗೆ ಸರಿಸಿ ಕಾರು ಸುಗಮವಾಗಿ ಹೋಗುವಂತೆ ಅನುವು ಮಾಡುತ್ತಿದ್ದರು. ಈ ವೇಳೆ ಹಿಂಭಾಗದಿಂದ ಮೋದಿ ಕಾರಿನತ್ತ ಯುವಕನೊಬ್ಬ ಓಡಿ ಬಂದಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಯುವಕನನ್ನು ಎಳೆದು ಹಾಕಿದ್ದಾರೆ.

ಕಾರ್ಯಕ್ರಮದ ಬಳಿಕ ಮೋದಿಯವರ ವಾಹನ ಸುಗಮವಾಗಿ ತೆರಳಲು ಜನದಟ್ಟಣೆ ತೊಡಕಾಗಿತ್ತು. ಈ ವೇಳೆ, ಜನದಟ್ಟಣೆಯನ್ನು ಚದುರಿಸಲು ಮಂಗಳೂರು ಪೊಲೀಸ್ ಕಮಿಷನರ್ ಲಾಠಿ ಬೀಸಿದ ಘಟನೆ ನಡೆದಿದೆ.

ಡಿವೈಡರ್ ಏರಿದ ಎಸ್​ಪಿಜಿ ವಾಹನ:ಮೋದಿಯವರ ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿರುವ ಎಸ್​ಪಿಜಿ ವಾಹನವು ಡಿವೈಡರ್ ಏರಿದ ಘಟನೆಯು ನಡೆದಿದೆ. ವಾಹನ ದಟ್ಟಣೆಯ ನಡುವೆಯೇ ಆಗಮಿಸಿರುವ ಎಸ್​ಪಿಜಿ ವಾಹನ ಡಿವೈಡರ್ ಏರಲು ಪ್ರಯತ್ನ ಪಟ್ಟಿದೆ. ಆದರೆ, ಅದು ಅಸಾಧ್ಯವಾದ ಕಾರಣ ಡಿವೈಡರ್​ನಿಂದ ಇಳಿದು ರಸ್ತೆಯಲ್ಲಿ ಸಂಚರಿಸಿದೆ.

ದುಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಂವಾದ ನಡೆಸಿದ್ದ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿಗೆ ಪ್ರಧಾನಿ ಮೋದಿಯವರ ಮಂಗಳೂರಿನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ತಡೆದ ಪ್ರಸಂಗವೊಂದು ನಡೆದಿದೆ.

ಗೊಂದಲಕ್ಕೊಳಗಾದ ಪೊಲೀಸರು: ಹೆಚ್ಚುವರಿ ಜನರನ್ನು ರಸ್ತೆಯಲ್ಲಿಯೇ ನಿಯಂತ್ರಣ ಮಾಡುವ ಸಲುವಾಗಿ ಮಧ್ಯಾಹ್ನ 12.30 ಸುಮಾರಿಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಕಾರ್ಯಕ್ರಮಕ್ಕೆ ಬರುವವರನ್ನು ರಸ್ತೆಯಲ್ಲಿಯೇ ತಡೆಯುತ್ತಿದ್ದರು. ಇದೇ ವೇಳೆ, ಉದ್ಯಮಿ ಬಿ. ಆರ್ ಶೆಟ್ಟಿಯವರೂ ಬಂದಿದ್ದರು. ಆದರೆ ಬಿ. ಆರ್ ಶೆಟ್ಟಿಯವರೆಂದು ತಿಳಿಯದೇ ಗೊಂದಲಕ್ಕೊಳಗಾದ ಪೊಲೀಸರು ಅವರನ್ನು ತಡೆದಿದ್ದಾರೆ.

ಅಷ್ಟರಲ್ಲಿ ಸ್ಥಳದಲ್ಲಿದ್ದವರು ಬಿ. ಆರ್ ಶೆಟ್ಟಿ ಅವರನ್ನು ತಡೆಯದಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ನಂತರ ಅವರ ಬಗ್ಗೆ ತಿಳಿದ ಪೊಲೀಸರು ಅವರನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಲು ಅನುವು ಮಾಡಿದ್ದಾರೆ. ಬಳಿಕ ಅವರು ವಿವಿಐಪಿ ಆಸನದಲ್ಲಿ ಕುಳಿತು ಮೋದಿ ಅವರ ಕಾರ್ಯಕ್ರಮ ವೀಕ್ಷಿಸಿದರು.

ಓದಿ:ಮಂಗಳೂರು: ಪ್ರಧಾನಿ ಮೋದಿ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ABOUT THE AUTHOR

...view details