ಉಪ್ಪಿನಂಗಡಿ: ನಗರದ ರೆಸಾರ್ಟ್ವೊಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿರುವುದಾಗಿ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆಯಾದರೂ ಅದನ್ನು ಪೊಲೀಸ್ ಇಲಾಖೆ ಖಚಿತಪಡಿಸಿಲ್ಲ. ಹಾಗಾಗಿಯೂ ಕುಶಾಲನಗರದ ಲೋಹಿತ್ ಮತ್ತು ವಿಟ್ಲದ ಶರೀಪ್ ಪೊಲೀಸ್ ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಯುವತಿಯರು ಸೇರಿ ಒಟ್ಟು 7 ಜನರ ತಂಡ ಈ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ.
ದಂಧೆಕೋರರು ಮಂಗಳೂರು ಮೂಲದ ಯುವತಿಯರನ್ನು ಬಳಸಿ ಈ ದಂಧೆ ನಡೆಸುತ್ತಿದ್ದು, ಆರೋಪಿಗಳಿಗೆ ಸೇರಿದ ಮನೆಯೊಂದು ಪುತ್ತೂರಿನ ಸಾಲ್ಮರದಲ್ಲಿ ಇದೆ. ಆರೊಪಿಗಳು ತಮ್ಮ ಸಂಪರ್ಕಕ್ಕೆ ಬರುವ ಯುವಕರನ್ನು ಸಾಲ್ಮರದ ತಮ್ಮ ಮನೆಗೆ ಕರೆಯಿಸಿಕೊಂಡು ಅಲ್ಲಿ ತಮ್ಮಲ್ಲಿರುವ ಯುವತಿಯರನ್ನು ಜೋಡಿಯಾಗಿಸಿ ಬಳಿಕ ಅವರನ್ನು ಉಪ್ಪಿನಂಗಡಿಯ ರೆಸಾರ್ಟ್ಗೆ ಕಳುಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಬಳಿಕ ಜೋಡಿಗಳು ತಂಗಿರುವ ಕೊಠಡಿಗೆ ಈ ದಂಧೆಕೋರರು ದಾಳಿ ನಡೆಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಡಿಸುತ್ತಿದ್ದರು ಎನ್ನಲಾಗುತ್ತಿದೆ. ಇಂತಹುದೇ ಒಂದು ಕೃತ್ಯ ಜ.8 ರಂದು ನಡೆದು ಅದು ಕೇರಳ ಪೊಲೀಸರ ಮೂಲಕ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಅವರು ದಾಳಿ ನಡೆಸಿದಾಗ ಈ ದಂಧೆ ಬಹಿರಂಗವಾಗಿದೆ. ಆರೋಪಿಗಳ ಪೈಕಿ ಲೋಹಿತ್ ಹಾಗೂ ಷರೀಫ್ ಪೊಲೀಸ್ ವಶದಲ್ಲಿದ್ದರೆ, ವಿಟ್ಲದ ಜಮಾಲ್ ,ಜೀವನ್ ಹಾಗೂ ನೌಶಾದ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.