ಕರ್ನಾಟಕ

karnataka

Pilikula Park Mangaluru: ಅರಣ್ಯ ಇಲಾಖೆ ಸುಪರ್ದಿಗೆ ಹೋಗಲಿದೆ ಪಿಲಿಕುಳ ಜೈವಿಕ‌ ಉದ್ಯಾನವನ

By

Published : Jun 13, 2023, 2:09 PM IST

Updated : Jun 13, 2023, 3:00 PM IST

ನಿರ್ವಹಣೆಯ ಸಮಸ್ಯೆಯಿಂದ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯ ಅರಣ್ಯ ಇಲಾಖೆಯೂ ಸೂಕ್ತವಾಗಿ ಸ್ಪಂದಿಸಿ ಆದೇಶವನ್ನು ಹೊರಡಿಸಿದೆ.

ಪಿಲಿಕುಳ ಜೈವಿಕ ಉದ್ಯಾನವನ
ಪಿಲಿಕುಳ ಜೈವಿಕ ಉದ್ಯಾನವನ

ಪಿಲಿಕುಳ ಜೈವಿಕ‌ ಉದ್ಯಾನವನ

ಮಂಗಳೂರು(ದಕ್ಷಿಣ ಕನ್ನಡ):ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯ ದೇಶದ ಅತೀದೊಡ್ಡ ಹಾಗೂ ಪ್ರತಿಷ್ಠಿತ ಮೃಗಾಲಯದಲ್ಲಿ ಒಂದಾಗಿದೆ. ಈ ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಡಿ ಪಿಲಿಕುಳ ಜೈವಿಕ ಉದ್ಯಾನವನದ ಮೃಗಾಲಯವಿದೆ. ಈ ಉದ್ಯಾನವನ 150 ಎಕರೆ ವ್ಯಾಪ್ತಿಯಲ್ಲಿದೆ. ದೇಶದಲ್ಲಿ ಅತೀ ದೊಡ್ಡ 18 ಮೃಗಾಲಯಗಳಿದ್ದು, ಅದರಲ್ಲಿ ಪಿಲಿಕುಳ ಜೈವಿಕ ಉದ್ಯಾನವನ ಕೂಡ ಒಂದಾಗಿದೆ.

ಈ ಮೃಗಾಲಯದಲ್ಲಿ 1,440 ಪ್ರಾಣಿ ಪಕ್ಷಿಗಳಿದ್ದು, ಇದರ ನಿರ್ವಹಣೆಯೇ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ದೊಡ್ಡ ಸವಾಲಾಗಿದೆ. ಪಿಲಿಕುಳ ಮೃಗಾಲಯಕ್ಕೆ ತಿಂಗಳಿಗೆ 30 ಲಕ್ಷದಂತೆ ವರ್ಷಕ್ಕೆ 3.60ಕೋಟಿ ರೂ. ನಿರ್ವಹಣೆ ವೆಚ್ಚವಾಗುತ್ತಿದೆ. ಟಿಕೆಟ್ ಕೌಂಟರ್ ಮೂಲಕ 2.5 ಕೋಟಿಯಿಂದ 3 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಉಳಿದ ಮೊತ್ತವನ್ನು ಸಂಗ್ರಹಿಸುವುದೇ ಸವಾಲಾಗಿದೆ.

ಮೃಗಾಲಯದ ಅಭಿವೃದ್ಧಿಗೆ ಈಗಾಗಲೇ ಎಂಆರ್‌ ಪಿಎಲ್, ಕುದುರೆಮುಖ, ರಿಲಯನ್ಸ್‌ ಸೇರಿದಂತೆ ನಾನಾ ಕಾರ್ಪೊರೇಟ್ ಕಂಪನಿಗಳು ಸಿಎಸ್ಆರ್ ಅನುದಾನ ನೀಡುವ ಮೂಲಕ ಪ್ರೋತ್ಸಾಹವನ್ನು ನೀಡಿವೆ. ಇದು ಮಾತ್ರವಲ್ಲದೆ ದಾನಿಗಳು, ಸೆಲೆಬ್ರಿಟಿಗಳು ಪ್ರಾಣಿಗಳ ದತ್ತು ತೆಗೆದುಕೊಂಡು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.

ಆದರೂ ಮೃಗಾಲಯವನ್ನು ಪ್ರಸ್ತುತ ಸ್ಥಿತಿಯಲ್ಲಿಯೇ ಮುಂದುವರಿಸುವುದು ಕಷ್ಟವಾಗಿದೆ. ಇದನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಳ್ಳುವಂತೆ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದಕ್ಕೆ ರಾಜ್ಯ ಅರಣ್ಯ ಇಲಾಖೆಯೂ ಸೂಕ್ತವಾಗಿ ಸ್ಪಂದಿಸಿ ಆದೇಶವನ್ನು ಹೊರಡಿಸಿದೆ.

ಪಿಲಿಕುಳ ನಿಸರ್ಗಧಾಮ ಸಂಸ್ಥೆಯು 2001ರಂದು ಆರಂಭವಾಗಿದ್ದು, ಇದು ಉಪ ಅರಣ್ಯ ಸಂರಕ್ಷಣಾಕಾರಿ ಮಂಗಳೂರು ವಿಭಾಗ ಆಡಳಿತ ವ್ಯಾಪ್ತಿಯಲ್ಲಿತ್ತು. ಕ್ರಮೇಣ ಪಿಲಿಕುಳ ನಿಸರ್ಗಧಾಮ ಟ್ರಸ್ಟ್‌ನ್ನು ಸಹಕಾರ ಸಂಘಗಳ ಕಾಯ್ದೆಯಡಿ ಸೊಸೈಟಿಯಾಗಿ ನೋಂದಣಿಗೊಂಡು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಮೃಗಾಲಯದ ಪರವಾನಗಿಯನ್ನು 2022 ಸೆ.27ರಂದು ನಡೆದ ಸೆಂಟ್ರಲ್ ಝೂ ಅಥಾರಿಟಿ ತಾಂತ್ರಿಕ ಸಮಿತಿ ಸಭೆಯಲ್ಲಿ ಮೂರು ವರ್ಷಗಳ ಅವಧಿಗೆ ನವೀಕರಿಸಿ ಆದೇಶ ಮಾಡಲಾಗಿತ್ತು.

ಪಿಲಿಕುಳ ನಿಸರ್ಗಧಾಮದಲ್ಲಿ ದಿನನಿತ್ಯದ ಪಾಲನೆ ಪೋಷಣೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಕಷ್ಟು ಅನುದಾನದ ಲಭ್ಯತೆ ಇಲ್ಲದೆ ಇರುವುದರಿಂದ ಹಾಗೂ ಮಾನವ-ವನ್ಯಜೀವಿ ಸಂಘರ್ಷವನ್ನು ಸಮರ್ಪಕವಾಗಿ ಪರಿಹರಿಸಿ ಉತ್ತಮ ಸಮನ್ವಯ ಕಾಯ್ದುಕೊಳ್ಳಲು ಪಿಲಿಕುಳ ಮೃಗಾಲಯವನ್ನು ಕರ್ನಾಟಕ ಅರಣ್ಯ ಇಲಾಖೆಗೆ ವರ್ಗಾಯಿಸಲು ಸೂಚಿಸಲಾಗಿತ್ತು.

ಪಿಲಿಕುಳ ಮೃಗಾಲಯದ ನಿರ್ದೇಶಕರ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಪ್ರಾಣಿಗಳ ಪಾಲನೆ- ಪೋಷಣೆ ಹಾಗೂ ಮೃಗಾಲಯ ನಿರ್ವಹಿಸುವುದು ಹಣಕಾಸಿನ ಕೊರತೆಯಿಂದ ಕಷ್ಟವಾಗಿದೆ. ಮಾನವ- ವನ್ಯಜೀವಿ ಸಂಘರ್ಷವನ್ನು ನಿಭಾಯಿಸುವ ಮೂಲ ಸೌಕರ್ಯಗಳಿಲ್ಲದ ಕಾರಣದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೃಗಾಲಯ ವನ್ನು ನಿಭಾಯಿಸುವುದರಲ್ಲಿ ಪರಿಣತಿ ಹೊಂದಿರುವುದರಿಂದ ಪಿಲಿಕುಳ ಉದ್ಯಾನವನದ ಮೃಗಾಲಯವನ್ನು ಸಾರ್ವಜನಿಕರ ಹಿತದೃಷ್ಟಿ, ಪ್ರಾಣಿಗಳ ಸಂರಕ್ಷಣೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಉಪ ಅರಣ್ಯ ಸಂರಕ್ಷಣಾಕಾರಿ ಮಂಗಳೂರು ಪ್ರಾದೇಶಿಕ ವಿಭಾಗ, ಮಂಗಳೂರು ಸುಪರ್ದಿಗೆ ಹಸ್ತಾಂತರಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಅವರು ಪಿಲಿಕುಳ ಮೃಗಾಲಯವನ್ನು ರಾಜ್ಯ ಅರಣ್ಯ ಇಲಾಖೆಗೆ ಹಸ್ತಾಂತರಿ ಸುವಂತೆ ಸೆಂಟ್ರಲ್ ಝೂ ಕೌನ್ಸಿಲ್ ಆಫ್ ಇಂಡಿಯಾ ಸೂಚನೆ ಬಂದಿದೆ. ಅದರಂತೆ ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ. ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿದ್ದು, ಎಲ್ಲವೂ ಸುಗಮವಾಗಿ ನಡೆದರೆ ಅತೀ ಶೀಘ್ರದಲ್ಲಿ ಪಿಲಿಕುಳ ಮೃಗಾಲಯ ಅರಣ್ಯ ಇಲಾಖೆಗೆ ಸುಪರ್ದಿಗೆ ಸೇರಲಿದೆ ಎಂದು ತಿಳಿಸಿದ್ದಾರೆ.

ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾತನಾಡಿ ಪಿಲಿಕುಳ ನಿಸರ್ಗಧಾಮ 500 ಎಕರೆ ವಿಸ್ತೀರ್ಣ ದಲ್ಲಿದೆ. ಮೊದಲು ರೆವಿನ್ಯೂ ಲ್ಯಾಂಡ್ ಆಗಿದ್ದ ಈ ಜಾಗವನ್ನು ‌ಜಿಲ್ಲಾಧಿಕಾರಿಗಳಾಗಿದ್ದ ಭರತ್ ಲಾಲ್ ಮೀನ ಅವರು ಇದನ್ನು ಪ್ರವಾಸಿ ಸ್ಥಳ ಮಾಡಲು ಯೋಜಿಸಿ ರೆವಿನ್ಯೂ ಲ್ಯಾಂಡ್ ಕನ್ಸರ್ಟ್ ಮಾಡಿ ಮಿನಿ ಲಾಲ್ ಭಾಗ್, ವೈಲ್ಡ್ ಲೈಪ್ ಸಫಾರಿ, ಲೇಕ್ ಗಾರ್ಡನ್ ಮಾಡಲು ಯೋಜಿಸಿದ್ದರು. ಅದರ ಭಾಗವಾಗಿ ಪಿಲಿಕುಳ ಮೃಗಾಲಯ 2004 ರಲ್ಲಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಉದ್ಘಾಟಿಸಿದ್ದರು.

ಕದ್ರಿಯಲ್ಲಿದ್ದ ಮಿನಿ ಝೂ ವನ್ನು ಅಲ್ಲಿಂದ ಇಲ್ಲಿಗೆ ಶಿಪ್ಟ್ ಮಾಡಲಾಯಿತು. ದೇಶದಲ್ಲಿರುವ 14 ಮೃಗಾಲಯದ ಪೈಕಿ 18 ದೊಡ್ಡ ಮೃಗಾಲಯ ಇದ್ದು, ಅದರಲ್ಲಿ ಪಿಲಿಕುಳ ಕೂಡ ಒಂದಾಗಿದೆ. ಈ ಮೃಗಾಲಯದಲ್ಲಿ ಸಾವಿರಾರು ಪ್ರಾಣಿಗಳಿದ್ದು, ಬೇರೆ ಬೇರೆ ಮೃಗಾಲಯದಿಂದ ಪ್ರಾಣಿಗಳ ವಿನಿಮಯ ಮಾಡಿ ತಂದಿದ್ದೇವೆ. ಭಾರತ ದೇಶದ ಯಾವುದೇ ಮೃಗಾಲಯದಲ್ಲಿ ಇಷ್ಟು ಜಾಗ ಇರುವ ಮೃಗಾಲಯ ಇಲ್ಲ.

ಇಲ್ಲಿರುವ ಅಕೇಶಿಯ ಕಡಿದು ಪಶ್ಚಿಮ ಘಟ್ಟದ ರೀತಿ ವಾತವರಣ ಮಾಡಲಾಗಿದೆ. ಇಲ್ಲಿನ ಪ್ರಾಣಿಗಳಿಗೆ ಒಳ್ಳೆ ಆಹಾರ, ನೀರು ಕೊಟ್ಟರೆ ಸಂತಾನೋತ್ಪತ್ತಿ ಯಾಗಲಿದೆ. ಪಿಲಿಕುಳ ಡೆವಲಪ್ಮೆಂಟ್ ಅಥಾರಿಟಿಯಾದ ಬಳಿಕ ಸರ್ಕಾರದ ಅನುದಾನ ಬರುವುದಿಲ್ಲ, ದೇಣಿಗೆ ನೀಡುವವರು ಬರುವುದಿಲ್ಲ. ಇದರಿಂದ ಮೃಗಾಲಯ ನಿರ್ವಹಣೆ ಮಾಡಲು ಕಷ್ಟ ಇದೆ. ಅದಕ್ಕಾಗಿ ನಾನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಇದನ್ನು ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ವಿನಂತಿಸಿದ್ದೆ. ಇದಕ್ಕೆ ಕೇಂದ್ರ ಮೃಗಾಲಯ ಒಪ್ಪಿದ್ದು, ಅರಣ್ಯಾಧಿಕಾರಿ ಹಸ್ತಾಂತರಕ್ಕೆ ಆಜ್ಞೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪಿಲಿಕುಳದಲ್ಲಿ ಹುಲಿಗಳ ಕಾಳಗ: 15 ವರ್ಷದ ಹೆಣ್ಣು ಹುಲಿ ಸಾವು

Last Updated : Jun 13, 2023, 3:00 PM IST

ABOUT THE AUTHOR

...view details