ಮಂಗಳೂರು: ತೀರ ಹತ್ತಿರದಲ್ಲಿರುವ ಆಸ್ಪತ್ರೆಗಳಿಗೆ ರೋಗಿಯನ್ನು ದಾಖಲಿಸುವುದು, ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವುದು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಆದರೆ, ಮಂಗಳೂರಿನ ಮೂಡಬಿದಿರೆಯಿಂದ ಉತ್ತರ ಪ್ರದೇಶದ ಮೊರದಾಬಾದ್ಗೆ ಸುಮಾರು 2700 ಕಿ ಮೀ ದೂರಕ್ಕೆ ರೋಗಿಯನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರ ಮಾಡಿದ ಘಟನೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದಿದೆ.
ಮಹಾಂದಿ ಹಸ್ಸನ್ ಎಂಬುವರು ಮೂಡಬಿದಿರೆಯ ಮಾಸ್ತಿಕಟ್ಟೆಯ ಅಡಿಕೆ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಿದ್ದು ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿ ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಉತ್ತರ ಪ್ರದೇಶದ ಮೊರದಾಬಾದ್ನವರಾಗಿದ್ದು, ಇವರ ಕುಟುಂಬ ಮೊರದಾಬಾದ್ನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿ ಆಸ್ಪತ್ರೆ ವೈದ್ಯರ ಒಪ್ಪಿಗೆ ಪಡೆದು ಮೊರದಾಬಾದ್ಗೆ ಸ್ಥಳಾಂತರಿಸಲು ನಿರ್ಧರಿಸಿದ್ದರು.
ಅದರಂತೆ ಶುಕ್ರವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಹೋಗಲು ನಿರ್ಧರಿಸಲಾಗಿತ್ತು. ಮಹಾಂದಿ ಹಸನ್ ಅವರ ತಂದೆ ಮೂಡಬಿದಿರೆಯ ಐರಾವತ ಆಂಬ್ಯುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರನ್ನು ಆಸ್ಪತ್ರೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿಸುವಂತೆ ಕೋರಿಕೊಂಡಿದ್ದರು.
ಆ್ಯಂಬುಲೆನ್ಸ್ ನ ಚಾಲಕ ಅಶ್ವತ್ಥ್ ಅದರಂತೆ ಶುಕ್ರವಾರ (ಸೆ. 9) ರೋಗಿಯನ್ನು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದ ವೇಳೆ ವಿಮಾನಯಾನ ಸಂಸ್ಥೆ ವೈದ್ಯರು ಮತ್ತು ದಾದಿಯರಿಲ್ಲದೆ ವಿಮಾನದಲ್ಲಿ ಕೊಂಡೊಯ್ಯಲು ನಿರಾಕರಿಸಿತು. ಬಳಿಕ ರೋಗಿಯನ್ನು ಮೂಡಬಿದಿರೆಯ ಆಸ್ಪತ್ರೆಗೆ ಮತ್ತೆ ದಾಖಲಿಸಲಾಯಿತು.
ರೋಗಿ ಮೆಹಂದಿ ಹಸನ್ ತಂದೆ ಬಬ್ಬು ಶನಿವಾರ ಬೆಳಗ್ಗೆ ಆಂಬ್ಯುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರಿಗೆ ಫೋನ್ ಮಾಡಿ ಆಂಬ್ಯುಲೆನ್ಸ್ನಲ್ಲಿ ಮೊರದಾಬಾದ್ಗೆ ತಲುಪಿಸಲು ಕೋರಿದ್ದರು. ಆ ಬಳಿಕ ಆಂಬ್ಯುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರು ಪೊಲೀಸರಿಗೆ ಮಾಹಿತಿ ನೀಡಿ, ಮೂಡಬಿದಿರೆಯಿಂದ ಮೊರದಾಬಾದ್ಗೆ ರೋಗಿಯ ಹಸ್ತಾಂತರಕ್ಕೆ ಒಪ್ಪಿದ್ದಾರೆ.
ಆ್ಯಂಬುಲೆನ್ಸ್ ನ ಚಾಲಕ ಅಶ್ವತ್ಥ್ ಅವರೊಂದಿಗೆ ಅನಿಲ್ ರೂಬನ್ ಮೆಂಡೋನ್ಸಾ ಕುಳಿತು ರೋಗಿ ಮಹಾಂದಿ ಹಸ್ಸನ್ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ದರು. ಈ ಸಂದರ್ಭದಲ್ಲಿ ಮಹಾಂದಿ ಹಸನ್ ಅವರ ತಂದೆ ಮತ್ತು ಸ್ನೇಹಿತರು ಜೊತೆಗಿದ್ದರು. ಶನಿವಾರ (ಸೆ.10) ಮೂಡಬಿದಿರೆಯಿಂದ ಹೊರಟ ಆಂಬ್ಯುಲೆನ್ಸ್ ಸೋಮವಾರ (ಸೆ. 12) ಬೆಳಗ್ಗೆ ಮೊರದಾಬಾದ್ ತಲುಪಿದೆ.
ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ಆಂಬ್ಯುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರು, ಮೂಡಬಿದಿರೆಯಿಂದ ಮೊರದಾಬಾದ್ಗೆ ತಲುಪಿಸುವಂತೆ ಮಹಾಂದಿ ಹಸನ್ ಅವರ ತಂದೆಯ ಒತ್ತಾಯಕ್ಕೆ ಮಣಿದು ಪೊಲೀಸರಲ್ಲಿ ಮಾಹಿತಿ ನೀಡಿದ್ದೆ. ಆಸ್ಪತ್ರೆ ವೈದ್ಯರು ನಿಮ್ಮ ರಿಸ್ಕ್ನಲ್ಲಿ ಕೊಂಡೊಯ್ಯಬಹುದೆಂದು ತಿಳಿಸಿದ್ದರು.
ಜ್ಯೂಸ್ ಕುಡಿದು ವಾಹನ ಚಾಲನೆ: ಸುಮಾರು 2700 ಕಿ. ಮೀ ದೂರ ಹೋಗಿ ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ. ಡೀಸೆಲ್ ಹಾಕಲು ನಿಲ್ಲಿಸಿದ್ದು ಬಿಟ್ಟರೆ ಎಲ್ಲಿಯೂ ವಿಶ್ರಾಂತಿ ಪಡೆಯದೆ ನಿರಂತರವಾಗಿ ಚಲಿಸಿ ಗುರಿಮುಟ್ಟಿದ್ದಾರೆ. ಚಾಲಕ ಸೇರಿದಂತೆ ಯಾರು ಊಟ, ತಿಂಡಿಗೂ ವಾಹನವನ್ನು ನಿಲ್ಲಿಸಿಲ್ಲ. ರೋಗಿಗೆ ಮೂರು ಗಂಟೆಗೊಮ್ಮೆ ದ್ರವ ಆಹಾರ ನೀಡಬೇಕಿದ್ದು, ಈ ಸಂದರ್ಭದಲ್ಲಿ ವಾಹನ ಚಾಲಕ ಸನಿಹದಲ್ಲಿ ಸಿಗುವ ಜ್ಯೂಸ್ ಕುಡಿದು ವಾಹನ ಚಾಲನೆಗೆ ಸಜ್ಜಾಗುತ್ತಿದ್ದರು. ನಾವು ಮೊರದಾಬಾದ್ ತಲುಪಿದಾಗ ನೀವು ವೈದ್ಯರಿಲ್ಲದೆ ಇಷ್ಟು ದೂರ ಹೇಗೆ? ಬಂದಿರಿ ಎಂದು ಅಲ್ಲಿನ ವೈದ್ಯರು ಆಶ್ಚರ್ಯ ಚಕಿತರಾದರು. ಈ ರೋಗಿ ಕುಟುಂಬ ಸಂಪರ್ಕದಲ್ಲಿದ್ದು, ಇದೀಗ ಆತನಿಗೆ ಪ್ರಜ್ಞೆ ಬಂದು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ ಎಂದರು.
ಸಣ್ಣ ಆಂಬ್ಯುಲೆನ್ಸ್ನಲ್ಲಿ ಪ್ರಯಾಣ: ಮಧ್ಯಪ್ರದೇಶದಲ್ಲಿ ಆಂಬ್ಯುಲೆನ್ಸ್ ಹೋಗುತ್ತಿದ್ದ ವೇಳೆ ರೋಗಿಗೆ ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿತ್ತು. ಸಣ್ಣ ಮಟ್ಟಿಗೆ ಆರೋಗ್ಯ ಚಿಕಿತ್ಸೆ ಕಲಿತಿದ್ದ ಮೆಂಡೋನ್ಸಾ ಅವರು ಆಕ್ಸಿಜನ್ ಪ್ರಮಾಣ ಹೆಚ್ಚು ಮಾಡಿ ಸರಿಪಡಿಸಿದ್ದರು. ಇಷ್ಟೊಂದು ದೂರ ರೋಗಿಯನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ವೈದ್ಯರಿರುವುದು, ದೊಡ್ಡ ಆಂಬ್ಯುಲೆನ್ಸ್ನಲ್ಲಿ ಸಾಗಿಸುವುದು ಅಗತ್ಯ. ಆದರೆ ರೋಗಿಯ ಕುಟುಂಬ ಅಷ್ಟೊಂದು ಅನುಕೂಲದ ಕುಟುಂಬ ಅಲ್ಲದೆ ಇರುವುದರಿಂದ ಸಣ್ಣ ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಚಾಲಕ ಅಶ್ವತ್ಥ್ ಅವರು ವಾಹನ ಚಲಾಯಿಸಿದರೆ, ಅನಿಲ್ ಅವರು ರೋಗಿಯನ್ನು ನೋಡುವುದು, ಗೂಗಲ್ ಮ್ಯಾಪ್ ಮೂಲಕ ರಸ್ತೆಯನ್ನು ತಿಳಿಸುವುದನ್ನು ಮಾಡುತ್ತಿದ್ದರು. ಒಟ್ಟಿನಲ್ಲಿ ಆಂಬ್ಯುಲೆನ್ಸ್ ಮೂಲಕ ರೋಗಿಯನ್ನು 2700 ಕಿ. ಮಿ ದೂರಕ್ಕೆ ಸ್ಥಳಾಂತರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಓದಿ:ಕೃಷ್ಣಾ ನದಿಯಲ್ಲಿ ಸಾಹಸ ಮಾಡಿ ನಡುಗಡ್ಡೆಯಲ್ಲಿದ್ದ ರೋಗಿಗೆ ಔಷಧ ರವಾನಿಸಿದ ವೈದ್ಯರು