ಕರ್ನಾಟಕ

karnataka

ಸುಳ್ಯ: ಪುಟ್ಟದೊಂದು ಮನೆ ಕಟ್ಟಿಕೊಟ್ಟು ಮಾನವೀಯತೆ ಮೆರೆದ ಅಧಿಕಾರಿಗಳು

By

Published : Jul 23, 2020, 7:04 PM IST

ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಪರಿವಾರ ಪಂಚಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಆಶ್ರಯ ರಹಿತ ಮಹಿಳೆಗೆ ಮನೆ ನಿರ್ಮಿಸಿಕೊಡುವಲ್ಲಿ ನೆರವಾಗಿದ್ದಾರೆ.

Sullia
ಸುಳ್ಯ: ಪುಟ್ಟದೊಂದು ಮನೆ ಕಟ್ಟಿಕೊಟ್ಟು ಮಾನವೀಯತೆ ತೋರಿಸಿದ ಅಧಿಕಾರಿಗಳು

ಸುಳ್ಯ:ಸುಮಾರು 8 ವರ್ಷಗಳಿಂದಲೂ ರಸ್ತೆ ಬದಿಯಲ್ಲೇ ಮಲಗುತ್ತಾ ಅಲ್ಲೇ ಅನ್ನಾಹಾರ ತಯಾರಿಸಿ, ಜೀವನ ಸಾಗಿಸುತ್ತಿದ್ದ ಪಂಜ ಗ್ರಾಮದ ಮಹಿಳೆಯೋರ್ವರಿಗೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಪರಿವಾರ ಪಂಚಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಅವರ ಶ್ರಮದಿಂದ ಒಂದು ಸಣ್ಣ ಮನೆಯನ್ನು ಕಟ್ಟಿಕೊಡಲಾಗಿದೆ.

ಇವರ ಹೆಸರು ಚಂದ್ರಾವತಿ ನಾಯರಕೆರೆ. ವಯಸ್ಸು ಮೀರಿದ್ದರೂ ಮದುವೆಯಾಗದ ಈ ಮಹಿಳೆಗೆ ಅವರದ್ದೇ ಆದ ಸ್ವಲ್ಪ ಜಾಗ ಇದೆ. ತಮ್ಮಂದಿರೂ ಇದ್ದಾರೆ. ಆದರೆ ಇದುವರೆಗೆ ಅವರಿಗೊಂದು ವಾಸಕ್ಕೆ ಸೂರು ಇರಲಿಲ್ಲ. ಕೆಲ ದಿನ ತಮ್ಮಂದಿರ ಮನೆಯಲ್ಲಿ ಕೂತರೂ ಮತ್ತೆ ರಸ್ತೆ ಬದಿಯೇ ಇರುವುದು ಇವರ ದಿನಚರಿಯಾಗಿತ್ತು. ಹಾಗಾಗಿ ಇವರ ಜಾಗದಲ್ಲೇ ಮನೆ ಕಟ್ಟಿಕೊಡಲು ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಅವರು ಯೋಚಿಸಿದರು. ನಂತರದಲ್ಲಿ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ ಅವರ ನೆರವು ಪಡೆದು ಇವರ ಮನವೊಲಿಸಿ ಅವರ ಜಾಗದಲ್ಲೇ ಮನೆ ಕಟ್ಟಿಕೊಡುವ ಬಗ್ಗೆ ತಿಳಿಹೇಳಿದರು‌. ಆದರೆ ಈ ಮಹಿಳೆಗೆ ಮನೆ ಕಟ್ಟಲು ಅಭ್ಯಂತರವಿಲ್ಲ, ಖರ್ಚಾದ ಹಣ ತಾನೇ ನೀಡುವುದಾಗಿ ಷರತ್ತು ಹಾಕಿದ್ದರು. ಅವರ ಒಪ್ಪಿಗೆ ಸಿಗುತ್ತಲೇ ಕೇವಲ ಮೂರರಿಂದ ನಾಲ್ಕು ದಿನದಲ್ಲೇ ಪುಟ್ಟದೊಂದು ಮನೆ ಸಿದ್ಧವಾಗಿದೆ.

ಇಂದು ಬೆಳಗ್ಗೆ ಈ ಮನೆಯ ಗೃಹ ಪ್ರವೇಶ ನೆರವೇರಿದ್ದು, ಈ ವೇಳೆ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ, ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಪಂಜ ಪಂಚಲಿಂಗೇಶ್ವರ ದೇಗುಲದ ಅರ್ಚಕರಾದ ನಾಗರಾಜ್ ಭಟ್, ಮನೆಕಟ್ಟುವಲ್ಲಿ ಶ್ರಮಿಸಿದ ಕಾರ್ಮಿಕರು ಹಾಗೂ ಕೆಲ ಗ್ರಾಮಸ್ಥರು ಉಪಸ್ಥಿತರಿದ್ದರು.

ಬೇರೊಬ್ಬರ ನೋವಲ್ಲಿ ಪಾಲುದಾರರಾದ ಆಡಳಿತಾಧಿಕಾರಿ ಹಾಗೂ ಸುಬ್ರಹ್ಮಣ್ಯ ಠಾಣಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details