ಮಂಗಳೂರು: ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿನ ಖಾಸಗಿ ಕಟ್ಟಡದಲ್ಲಿ ಕೊರೊನಾ ಶಂಕಿತರನ್ನು ದಾಖಲಿಸುವ ನಿಗಾ ಕೇಂದ್ರ ಬೇಡ ಎಂದು ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಜಿಲ್ಲಾಡಳಿತ ಇಲ್ಲಿನ ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿ ಕೊರೊನಾ ಸೋಂಕಿತರ ನಿಗಾ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿರುವುದರ ವಿರುದ್ಧ ಗ್ರಾಮಸ್ಥರು ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರಿಂಜೆಯಲ್ಲಿ ಈಗಾಗಲೇ ಘನತ್ಯಾಜ್ಯ ಘಟಕವನ್ನು ನಿರ್ಮಿಸಿ, ಪೇಟೆಯ ಘನತ್ಯಾಜ್ಯದ ರಾಶಿ ತಂದು ಹಾಕಲಾಗುತ್ತಿದ್ದೆ. ಅದರಿಂದ ಸೊಳ್ಳೆ ಕಾಟ, ಸಾಂಕ್ರಾಮಿಕ ರೋಗಗಳು ಹರಡಬಹುದು ಎಂದು ಹೇಳಿದರು.
ಈಗ ಕೊರೊನಾ ಘಟಕ ತೆರೆದು, ಜನರಿಗೆ ತೊಂದರೆ ನೀಡುವುದು ಬೇಡ. ಮುಂದೆಯೂ ಇಂತಹ ಬೇರೆ ಘಟಕಗಳೂ ಬರಬಾರದು ಎಂದು ಹೇಳಿದರು.
ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಗ್ರಾಮಸ್ಥರಿಗೆ ಸಾಂತ್ವಾನ ಹೇಳಿ ಜಾಗೃತಿಯನ್ನು ನೀಡಿ ಕಾರ್ಯ ಪ್ರವೃತರಾಗಬೇಕಾಗಿತ್ತು. ಆದರೆ, ಇದನ್ನು ಮಾಡದೆ, ಗೊಂದಲವನ್ನು ನಿರ್ಮಿಸಿದ್ದಾರೆ. ಜನರು ಕೂಡಾ ಪೂರ್ವಾಪರ ತಿಳಿಯದೆ ಗೊಂದಲವನ್ನು ಮಾಡಬಾರದೆಂದು ಸಲಹೆ ನೀಡಿದರು.
ಶಾಸಕರು ಕೊರೊನಾ ನಿಗಾ ಕೇಂದ್ರವನ್ನು ಇಲ್ಲಿ ಮಾಡಲು ಅವಕಾಶವನ್ನು ನೀಡುವುದಿಲ್ಲವೆಂದು ಈಗಾಗಲೇ ನಮಗೆ ಭರವಸೆ ನೀಡಿದ್ದಾರೆ ಎಂದು ಮುಕ್ತಾನಂದ ಸ್ವಾಮೀಜಿ ಹೇಳಿದರು.