ಕರ್ನಾಟಕ

karnataka

By

Published : May 7, 2021, 11:03 PM IST

ETV Bharat / state

ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ನಳಿನ್ ಕುಮಾರ್ ಭೇಟಿ: ಅನಗತ್ಯ ಓಡಾಟ ನಡೆಸದಿರಲು ಜನರಿಗೆ ಮನವಿ

ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿರುವ ದ.ಕ.ಜಿಲ್ಲಾ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ನೂತನವಾಗಿ ಆರಂಭವಾಗುವ ಆಕ್ಸಿಜನ್ ಪ್ಲಾಂಟ್​ನ ಕಾಮಗಾರಿ ವೀಕ್ಷಿಸಿದರು

nalin kumar kateelu
nalin kumar kateelu

ಮಂಗಳೂರು: ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿರುವ ದ.ಕ.ಜಿಲ್ಲಾ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪರಿಶೀಲನೆ ನಡೆಸಿದರು. ನೂತನವಾಗಿ ಆರಂಭವಾಗುವ ಆಕ್ಸಿಜನ್ ಪ್ಲಾಂಟ್​ನ ಕಾಮಗಾರಿ ವೀಕ್ಷಿಸಿದರು. ಬಳಿಕ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಬಗ್ಗೆ ವೆನ್ಲಾಕ್ ಡಿಎಂಒ ಡಾ.ಸದಶಿವರೊಂದಿಗೆ ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲು, ಈ ಒಂದು ವರ್ಷದಲ್ಲಿ ವೆನ್ಲಾಕ್ ಆಸ್ಪತ್ರೆ ಹಾಗೂ ತಾಲೂಕಿನ ಆಸ್ಪತ್ರೆಗಳನ್ನು ಉನ್ನತೀಕರಿಸುವ ಕಾರ್ಯ ರಾಜ್ಯಸರ್ಕಾರ ಹಾಗೂ ಕೇಂದ್ರ ಸರಕಾರದಿಂದ ನಡೆದಿದೆ. ಯಾವುದೇ ರೀತಿಯ ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಮಂಗಳೂರಿನಲ್ಲಿ‌ ಆಗಿಲ್ಲ.‌ ಆದರೂ ಜನರ ಸಹಕಾರ ಬಹಳಷ್ಟು ಅಗತ್ಯವಿದೆ. ಕೋವಿಡ್ ಸೋಂಕು ಅತಿ ಹೆಚ್ಚು ವೇಗದಲ್ಲಿ ಹರಡುತ್ತಿರುವುದರಿಂದ ಜನರು ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಬೇಕು. ಆದ್ದರಿಂದ ಕಟ್ಟುನಿಟ್ಟಿನ ಲಾಕ್ ಡೌನ್ ನ ಅನಿವಾರ್ಯತೆ ಇದೆ. ಸರಕಾರ ಜಾರಿಗೊಳಿಸುತ್ತಿರುವ ನಿಯಮಗಳನ್ನು ಪಾಲಿಸಬೇಕಾಗಿರೋದು ಜನರ ಜವಾಬ್ದಾರಿ ಎಂದು ಹೇಳಿದರು.

ಕೋವಿಡ್ ಆಸ್ಪತ್ರೆಗೆ ನಳಿನ್ ಕುಮಾರ್ ಭೇಟಿ

ಬೆಂಗಳೂರಿನಲ್ಲಿ ನಡೆದಿರುವ ಬೆಡ್ ಬ್ಲಾಕಿಂಗ್ ಪ್ರಕರಣವನ್ನು ರಾಜಕೀಕರಣ, ಮತೀಯಕರಣ ಮಾಡುತ್ತಿರುವುದು ಸರಿಯಲ್ಲ.ಯಾರು ತಪ್ಪುಮಾಡಿದರೂ ಅವರು‌ ತಪ್ಪಿತಸ್ಥರೇ. ಅದರಲ್ಲಿ ಜಾತಿ, ಮತ, ಪಂಥ ಬೇಡ. ಜನರ ಜೀವದ ಜೊತೆಗೆ ಚೆಲ್ಲಾಟವಾಡುವುದು ಬೇಡ. ಅದು ಬಿಟ್ಟು ಜನರ ಜೀವ ರಕ್ಷಣೆಗೆ ಪಕ್ಷ ಬೇಧ ಮರೆತು ಕೆಲಸ ಮಾಡುವ ಅನಿವಾರ್ಯತೆ ಇದೆ. ತಪ್ಪಿತಸ್ಥರನ್ನು ಹಿಡಿಯುವ ಕಾರ್ಯ ಆಗಿದ್ದು ಸರಕಾರ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆ. ತನಿಖೆ ಮಾಡಿ, ಅವರು ತಪ್ಪಿತಸ್ಥರಾದಲ್ಲಿ ಮಾತ್ರ ಶಿಕ್ಷೆಯಾಗುತ್ತದೆ. ಆದ್ದರಿಂದ ಇದರಲ್ಲಿ ರಾಜಕಾರಣ ಬೇಡ ಎಂದು ಹೇಳಿದರು.

ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ ಡಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಎಲ್ಲರೂ ಲಾಕ್ ಡೌನ್ ಅನಿವಾರ್ಯ ಎಂದು ಹೇಳುತ್ತಿದ್ದಾರೆ. ಸರಕಾರ ಕೋವಿಡ್ ನಿಯಂತ್ರಣಕ್ಕೆ ಕಠೋರವಾದ ಕಾನೂನು ಕೈಗೊಂಡಾಗ ಜನರು ಪೂರಕವಾಗಿ ಸ್ಪಂದಿಸಬೇಕು. ಅನವಶ್ಯಕ ತಿರುಗಾಟ ಬೇಡ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ನಳಿನ್ ಕುಮಾರ್ ಕಟೀಲು ಅವರು ಹೇಳಿದರು.

ABOUT THE AUTHOR

...view details