ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಂಡರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ನ ತುಘಲಕ್ ದರ್ಬಾರ್ ಆರಂಭವಾಗಿದೆ. ಮಹಾತ್ಮ ಗಾಂಧೀಜಿಯೇ ಗೋ ಸಂತತಿಯ ಉಳಿವಿನ ಬಗ್ಗೆ ಮಾತನಾಡಿದ್ದರು. ಗೋವು ತಾಯಿಯ ಸ್ವರೂಪ. ಗೋವು ಉಳಿದರೆ ಕೃಷಿ ಉಳಿಯುತ್ತದೆ ಎಂದರು.
ಸ್ವಾತಂತ್ರ್ಯಾ ನಂತರ ಎಲ್ಲ ರಾಜ್ಯಗಳಲ್ಲೂ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿತ್ತು. ಕಾಂಗ್ರೆಸ್ ತುಷ್ಠೀಕರಣ ನೀತಿಯಿಂದ ಕಾಯಿದೆ ವಾಪಸ್ ಆಗಿದೆ. ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಗೋಹತ್ಯೆಗಳಾಗಿವೆ. ಗೋ ಹಂತಕರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡಿದೆ ಎಂದು ಆರೋಪಿಸಿದರು. 200 ಯೂನಿಟ್ ವಿದ್ಯುತ್ ಫ್ರೀ ಕೊಡುತ್ತೇವೆ ಎಂದ ಕಾಂಗ್ರೆಸ್ ಚುನಾವಣೆ ಗೆದ್ದ ಬಳಿಕ ಅದಕ್ಕೆ ಮಾನದಂಡ ಹಾಕುವ ಕೆಲಸ ಮಾಡಿತು. ಇದೀಗ ಅದೆಲ್ಲವನ್ನೂ ಮೀರಿ ವಿದ್ಯುತ್ ಬೆಲೆಯೇರಿಕೆ ಮಾಡುವಂತಹ ಕಾರ್ಯದಲ್ಲಿ ತೊಡಗಿದೆ. ಅಂದರೆ ಸುಳ್ಳು ಹೇಳಿ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನಸಾಮಾನ್ಯರಿಗೆ ಹೊರೆಯಾಗುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಆರ್ಎಸ್ಎಸ್ ನಿಷೇಧ ಮಾಡುವ ಅಧಿಕಾರ ಕಾಂಗ್ರೆಸ್ಗೆ ಇಲ್ಲ. ಸಿದ್ಧರಾಮಯ್ಯನ ಮುತ್ತಾತನಿಗೇ ಆರ್ಎಸ್ಎಸ್ ನಿಷೇಧ ಮಾಡಲು ಸಾಧ್ಯವಾಗಿಲ್ಲ. ತಾಕತ್ ಇದ್ದರೆ ಮೊದಲು ಪಾಕ್ ಪರ ಘೋಷಣೆ ಕೂಗಿದರವನ್ನು ಅರೆಸ್ಟ್ ಮಾಡಲಿ ಎಂದು ಸವಾಲೆಸೆದರು.
ರಾಷ್ಟ್ರಭಕ್ತ ಸೂಲಿಬೆಲೆಯವರನ್ನು ಬಂಧನ ಮಾಡುವುದಾಗಿ ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಮೆರವಣಿಗೆ ಸಭೆಯಲ್ಲಿ ಪಾಕ್ಗೆ ಜೈಕಾರ ಹಾಕಲಾಗುತ್ತಿದೆ. ಇದರ ಮೇಲೆ ಯಾವುದೇ ಕ್ರಮ ಇಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕಿಳಿದಿದೆ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಈ ರಾಜ್ಯದ ಬಹುಜನರ ಬೇಡಿಕೆಯಾಗಿದೆ. ಕಾಂಗ್ರೆಸ್ಗೆ ಚುನಾವಣೆ ಸಂದರ್ಭದಲ್ಲಿ ರಾಮ - ಹನುಮನ ನೆನಪಾಗುತ್ತದೆ. ಆ ಬಳಿಕ ಹಿಂದೂ ಭಾವನೆಗಳನ್ನು ಧಿಕ್ಕರಿಸುತ್ತಿದೆ. ಇದರ ಬಗ್ಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದರು.