ಸುಳ್ಯ (ದಕ್ಷಿಣ ಕನ್ನಡ): ನನ್ನ ಪತಿ ಆರೋಪಿಯಲ್ಲ. ಅವರನ್ನು ಮನೆಯಿಂದ ತನಿಖೆ ಇದೆ ಎಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಇದೀಗ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಶಫೀಕ್ ಪತ್ನಿ ಅನ್ಸಿಫಾ ಆರೋಪ ಮಾಡಿದ್ದಾರೆ. ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯ ತನಿಖೆಯು ಪ್ರಗತಿಯಲ್ಲಿದೆ. ಇಬ್ಬರು ಆರೋಪಿಗಳಾದ ಝಕೀರ್ ಮತ್ತು ಶಫೀಕ್ ಅವರ ಬಂಧನವನ್ನು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಎಸ್ಪಿ ರಿಷಿಕೇಶ್ ಸೋನಾವಣೆ ದೃಢಪಡಿಸಿದ್ದಾರೆ.
ಈ ನಡುವೆ ಶಫೀಕ್ ಬೆಳ್ಳಾರೆ ಅವರ ಪತ್ನಿ ಅನ್ಸಿಫಾ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದು, ನನ್ನ ಪತಿ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಆರೋಪಿಯಲ್ಲ. ಅವರನ್ನು ಉದ್ದೇಶ ಪೂರ್ವಕವಾಗಿ ಆರೋಪಿಯನ್ನಾಗಿ ಮಾಡಲಾಗಿದೆ. ಮನೆಯಲ್ಲಿದ್ದ ಅವರನ್ನು ತನಿಖೆ ಇದೆ ಎಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಮಗೆ ಅವರನ್ನು ನೋಡಲೂ ಸಹ ಬಿಡುತ್ತಿಲ್ಲ. ಅವರನ್ನು ಕರೆದುಕೊಂಡು ಬಂದು 24 ಗಂಟೆಗಳು ಕಳೆದಿದೆ. ಇದೀಗ ಆರೋಪಿ ಎನ್ನುತ್ತಿದ್ದಾರೆ. ಅವರು ಕೊಲೆ ಆರೋಪಿಯಲ್ಲ ಎಂದು ಅನ್ಸಿಫಾ ಹೇಳಿದ್ದಾರೆ.