ಕರ್ನಾಟಕ

karnataka

ಬುದ್ಧಿವಾದ ಹೇಳಿದ ಸಹೋದರನನ್ನೇ ಹತ್ಯೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ

By

Published : Mar 6, 2021, 11:53 PM IST

ಬುದ್ಧಿವಾದ ಹೇಳಿದ್ದ ದೊಡ್ಡಪ್ಪನ ಮಗಗನ್ನು ಚಾಕುವಿನಿಂದ ಕೊಂದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮಂಗಳೂರು ಕೋರ್ಟ್ ಆದೇಶ ಹೊರಡಿಸಿದೆ.

mangaluru court
ಮಂಗಳೂರು ಕೋರ್ಟ್​

ಮಂಗಳೂರು: ಕುಡಿತ ಬಿಡುವಂತೆ ಬುದ್ಧಿವಾದ ಹೇಳಿದ್ದ ದೊಡ್ಡಪ್ಪನ ಮಗನನ್ನೇ ಕೊಲೆಗೈದಿರುವ ಆರೋಪಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಬಂಟ್ವಾಳ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿ ರಾಜೇಶ ಯಾನೆ ನವೀನ (27) ಶಿಕ್ಷೆಗೊಳಗಾದ ಆರೋಪಿ. ಸಾಕ್ಷಿದಾರರು ನುಡಿದ ಸಾಕ್ಷವನ್ನು ಪರಿಗಣಿಸಿ ಆರೋಪಿಯೇ ಕೊಲೆ ಮಾಡಿರುವುದನ್ನು ರುಜುವಾತಾಗಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣ ವಿವರ:ಶಿಕ್ಷೆಗೊಳಗಾದ ರಾಜೇಶ ಮತ್ತು ಕೊಲೆಯಾದ ರಂಜಿತ್‌ ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿಗಳಾಗಿದ್ದಾರೆ. ಇವರ ಮನೆಗಳು ಆಸುಪಾಸಿನಲ್ಲಿದ್ದವು. ಆರೋಪಿ ರಾಜೇಶನಿಗೆ ವಿಪರೀತ ಮದ್ಯ ಸೇವನೆ ಚಟವಿದ್ದು, ಯಾರ ಬುದ್ಧಿ ಮಾತನ್ನೂ ಕೇಳುತ್ತಿರಲಿಲ್ಲ. ಇದರಿಂದ ನೊಂದಿದ್ದ ಆತನ ಹೆತ್ತವರು ಬುದ್ಧಿ ಹೇಳುವಂತೆ ರಂಜಿತ್ ಮತ್ತು ಆತನ ತಂದೆತಾಯಿಯವರಿಗೆ ಹೇಳಿದ್ದರು. ಅದರಂತೆ ರಂಜಿತ್ ಹಲವು ಬಾರಿ ರಾಜೇಶನಿಗೆ ಬುದ್ಧಿ ಮಾತು ಹೇಳಿದ್ದ. ಇದರಿಂದ ರಂಜಿತ್ ಮೇಲೆ ರಾಜೇಶನಿಗೆ ವೈಮನಸ್ಯ ಉಂಟಾಗಿತ್ತು.

2017ರ ಮೇ 15ರಂದು ರಾತ್ರಿ ಬಿ.ಸಿ.ರೋಡ್‌ನ ಬಾರ್‌ನಲ್ಲಿ ರಾಜೇಶ್ ಆತನ ಗೆಳೆಯರೊಂದಿಗೆ ಮದ್ಯ ಸೇವಿಸುತ್ತಿದ್ದ. ಆಗ ರಂಜಿತ್ ಬುದ್ಧಿ ಮಾತು ಹೇಳಿದ. ಅಲ್ಲದೆ, ರಾಜೇಶ್‌ನು ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಆತನನ್ನು ಶೇಡಿಗುರಿ ಎಂಬಲ್ಲಿ ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದ. ಇದರಿಂದ ರಾಜೇಶ್ ಮತ್ತಷ್ಟು ಮುನಿಸಿಕೊಂಡು ಪ್ರತೀಕಾರವಾಗಿ ರಂಜಿತ್‌ನನ್ನು ಕೊಲೆ ಮಾಡಬೇಕು ಎಂದು ನಿರ್ಧರಿಸಿದ್ದಾನೆ.

ಇದನ್ನೂ ಓದಿ:'ನನ್ನನ್ನು ಕ್ಷಮಿಸಿ ಅಮ್ಮಾ': ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳಾ ಅಧಿಕಾರಿ!

ಅದೇ ದಿನ ರಾತ್ರಿ 10 ಗಂಟೆ ಸುಮಾರಿಗೆ ರಾಜೇಶ್ ಕೈಯಲ್ಲಿ ಚೂರಿ ಹಿಡಿದುಕೊಂಡು ರಂಜಿತ್‌ನ ಮನೆಗೆ ಹೋಗಿ ಚೂರಿಯಿಂದ ರಂಜಿತ್‌ನ ಗಂಟಲಿಗೆ ಬಲವಾಗಿ ತಿವಿದಿದ್ದಾನೆ. ಅದನ್ನು ತಡೆಯಲು ಮುಂದಾದ ರಂಜಿತ್ ತಂದೆ ಗಣೇಶ್ ಪೂಜಾರಿ ಅವರ ಬಲಗೈಗೂ ಗಾಯವಾಗಿತ್ತು. ಅಕ್ಕಪಕ್ಕದವರು ಬಂದು ತೀವ್ರ ಗಾಯಗೊಂಡ ರಂಜಿತ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆಗ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿದ್ದು ಪ್ರಸ್ತುತ ಬೀದರ್ ಎಸ್‌ಪಿ ಆಗಿರುವ ನಾಗೇಶ್ ಡಿ.ಎಲ್. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ವಿಚಾರಣೆ ನಡೆಸಿದರು. ಸಂತ್ರಸ್ತನ ಪರ 19 ಮಂದಿಯನ್ನು ಸಾಕ್ಷಿದಾರರಾಗಿ ವಿಚಾರಿಸಲಾಗಿತ್ತು. ಸಾಕ್ಷಿದಾರರು ನುಡಿದ ಸಾಕ್ಷವನ್ನು ಪರಿಗಣಿಸಿ ಆರೋಪಿಯೇ ಕೊಲೆ ಮಾಡಿರುವುದನ್ನು ರುಜುವಾತಾಗಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದಾರೆ.

ABOUT THE AUTHOR

...view details