ಕರ್ನಾಟಕ

karnataka

By

Published : Jun 9, 2023, 5:54 PM IST

Updated : Jun 9, 2023, 7:07 PM IST

ETV Bharat / state

Cyclone Biparjoy: ಬಿಪರ್‌ಜಾಯ್​ ಚಂಡಮಾರುತದಿಂದಾಗಿ ಮಂಗಳೂರಿಗೆ ತಂಪೆರೆದ ಮಳೆರಾಯ; ನಾಳೆ ಕರ್ನಾಟಕಕ್ಕೆ ಮುಂಗಾರು ಆಗಮನ ನಿರೀಕ್ಷೆ

ನಿನ್ನೆ ಮುಂಗಾರು ಮಳೆ ಕೇರಳ ಪ್ರವೇಶಿಸಿದೆ. ನಾಳೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದೆ.

Rain has started in Mangalore due to Cyclone Bipor Joy
ಬಿಪೊರ್ ಜಾಯ್ ಚಂಡಮಾರುತದಿಂದ ಮಂಗಳೂರಿನಲ್ಲಿ ಮಳೆ ಶುರುವಾಗಿರುವುದು

ಬಿಪರ್‌ಜಾಯ್​ ಚಂಡಮಾರುತದಿಂದಾಗಿ ಮಂಗಳೂರಿಗೆ ತಂಪೆರೆದ ಮಳೆರಾಯ

ಮಂಗಳೂರು: ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಮುಂಗಾರು ಮಳೆಯ ಆಗಮನವಾಯಿತು. ವಾಡಿಕೆಯಂತೆ ಜೂನ್ 1ಕ್ಕೆ ಬರಬೇಕಿದ್ದ ಮುಂಗಾರು ತೀವ್ರ ವಿಳಂಬವಾಗಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಇಂದು ಬೆಳಗ್ಗೆ ಆರಂಭವಾದ ಮಳೆ ಖುಷಿ ಕೊಟ್ಟಿತು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಬಿಪರ್‌ಜಾಯ್​ ಚಂಡಮಾರುತದ ಪ್ರಭಾವದಿಂದ ಇಂದಿನಿಂದ ಮಳೆ ಆರಂಭವಾಗಿದೆ. ಕೇರಳ ಭಾಗದಿಂದ ಉತ್ತರಕ್ಕೆ ಚಲಿಸುತ್ತಿರುವ ಬಿಪರ್‌ಜಾಯ್ ಚಂಡಮಾರುತದ ಪ್ರಭಾವದಿಂದ ಬುಧವಾರದಿಂದ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ಎರಡು ದಿನಗಳ ಕೆಲ ಹೊತ್ತು ಮೋಡಗಳು, ಹನಿ ಮಳೆ ಬಿಟ್ಟರೆ ಭಾರಿ ಮಳೆ ಬಂದಿರಲಿಲ್ಲ. ಆದರೆ ಇಂದು ಮುಂಜಾನೆಯಿಂದ ಮಳೆ ಸಿಂಚನವಾಗಿದೆ.

ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದರು. ಮಂಗಳೂರು ‌ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ಹಲವೆಡೆ ಎತ್ತರದ ಪ್ರದೇಶಗಳಿಗೆ ನೀರಿನ ಸರಬರಾಜು ಆಗುವಲ್ಲಿ ವ್ಯತ್ಯಯ ಆಗಿದೆ. ಜೂನ್ 1 ರಂದು ಮುಂಗಾರು ಆಗಮನವಾಗಿದ್ದರೆ, ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಅಕಾಲಿಕ ಮಳೆ ಕೈಕೊಟ್ಟಿದ್ದರಿಂದ ಗದ್ದೆಗಳನ್ನು ಬಿತ್ತನೆಗೆ ಸಜ್ಜು ಮಾಡಲು ಆಗಿಲ್ಲ. ಆದರೆ ಮುಂಗಾರು ವಿಳಂಬವಾಗಿದ್ದು, ಕೃಷಿ ಚಟುವಟಿಕೆ ಹಮ್ಮಿಕೊಳ್ಳಲು ಮಳೆಗಾಗಿ ರೈತರು ಕಾಯುತ್ತಿದ್ದಾರೆ.

ಮಂಗಳೂರು ಜನರು ನಿಟ್ಟುಸಿರು:ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಹಲವು ಶಾಲಾ, ಕಾಲೇಜು, ಹಾಸ್ಟೆಲ್‌ಗಳಲ್ಲಿ ನೀರಿನ ಹಾಹಾಕಾರದಿಂದಾಗಿ ಟ್ಯಾಂಕರ್ ನೀರಿನ ಮೊರೆ ಹೋಗುವಂತಾಗಿದೆ. ಕಟೀಲು, ಶೃಂಗೇರಿ ಸೇರಿದಂತೆ ಪುಣ್ಯ ಕ್ಷೇತ್ರಗಳಲ್ಲಿ ಕೂಡ ನೀರಿಗೆ ಹಾಹಾಕಾರ ಶುರುವಾಗಿದ್ದು, ಭಕ್ತರು ಪರದಾಡುವಂತಾಗಿದೆ. ಜೂನ್ 9 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ.

ಬಿಪರ್‌ಜಾಯ್​ ಚಂಡಮಾರುತ: ಬಿಪರ್‌ಜಾಯ್​ ಚಂಡಮಾರುತದ ಪರಿಣಾಮ ಇಂದು ಮಂಗಳೂರಿಗೆ ಮಳೆ ಬಂದಿದ್ದು, ಕಡಲತಡಿಯಲ್ಲಿ ವರುಣನ ಸಿಂಚನವಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆಯ ಸಿಂಚನ ಶುರುವಾಗಿದೆ. ಮಂಗಳೂರು ‌ನಗರ ಸೇರಿ ಗ್ರಾಮಾಂತರ ಭಾಗದಲ್ಲಿ ಮಳೆ ಸುರಿದಿದೆ. ಬಂಟ್ಬಾಳ, ಉಳ್ಳಾಲ, ಬೆಳ್ತಂಗಡಿ ಭಾಗದ ಹಲವೆಡೆ ಭಾರಿ ಮಳೆ ಯಾಗಿದೆ.

ಅರಬ್ಬಿ ಸಮುದ್ರದಲ್ಲಿ ಬಿಪರ್‌ಜಾಯ್ ತೀವ್ರ:ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಬಿಪರ್‌ಜಾಯ್​ ಚಂಡಮಾರುತ ತೀವ್ರ ಸ್ವರೂಪ ಪಡೆದಿದೆ. ಮುಂದಿನ ಮೂರು-ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕ, ಕೇರಳ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಅಸ್ಸಾಂ, ಮಿಜೋರಾಂ, ಮಣಿಪುರ, ಮೇಘಾಯಲ, ಅರುಣಾಚಲ ಪ್ರದೇಶ, ಲಕ್ಷದ್ವೀಪಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಾಳೆ ಮುಂಗಾರು ಆಗಮನದ ನಿರೀಕ್ಷೆ:ಜೂನ್ 1ಕ್ಕೆ ಕೇರಳಕ್ಕೆ ಪ್ರವೇಶಿಸುವ ಮುಂಗಾರು ಮಳೆ ಈ ಬಾರಿ ವಿಳಂಬವಾಗಿದೆ. ಜೂನ್ 8 ರಂದು ಮುಂಗಾರು ಮಳೆಯ ಆಗಮನವಾಗಲಿದೆ ಎಂದು ಹೇಳಲಾಗಿದೆ. ಆದರೂ ಬಿಪರ್ ಜಾಯ್​ ಚಂಡಮಾರುತದ ಪ್ರಭಾವದಿಂದ ಮುಂಗಾರು ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿತ್ತು. ಆದರೆ ಬಿಪರ್ ಜಾಯ್​ ಚಂಡಮಾರುತದ ಪ್ರಭಾವಕ್ಕೆ ಸಿಲುಕದೆ ಮುಂಗಾರು ನಿನ್ನೆ ( ಗುರುವಾರ) ಕೇರಳ ಪ್ರವೇಶಿಸಿತ್ತು. ಅದರಂತೆ ನಾಳೆ ಮುಂಗಾರು ಕರ್ನಾಟಕ ಪ್ರವೇಶಿಸಲಿದೆ ಎಂದು‌ ನಿರೀಕ್ಷಿಸಲಾಗಿದೆ.

ಇದನ್ನೂಓದಿ:Krishna Byre Gowda: ಬಿಜೆಪಿ ಆಡಳಿತದಲ್ಲಿ ಸಂಘ ಸಂಸ್ಥೆಗಳಿಗೆ ಮಂಜೂರಾಗಿದ್ದ ಭೂಮಿ ಮರುಪರಿಶೀಲನೆ: ಸಚಿವ ಸಚಿವ ಕೃಷ್ಣ ಭೈರೇಗೌಡ

Last Updated : Jun 9, 2023, 7:07 PM IST

ABOUT THE AUTHOR

...view details