ಕರ್ನಾಟಕ

karnataka

By

Published : Oct 17, 2020, 5:13 PM IST

ETV Bharat / state

ಬಿಜೆಪಿ ಬೆಂಬಲವಿಲ್ಲದೇ ದೇಶದ ಶ್ರೀಮಂತರು ವಿಶ್ವದಲ್ಲೇ 3 - 4ನೇ ಸ್ಥಾನಕ್ಕೇರುವುದು ಅಸಾಧ್ಯ: ಶಾಸಕ ಖಾದರ್

ಜನ ಸಾಮಾನ್ಯರು ಯಾರೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇನ್ನೂ ತಳಮಟ್ಟಕ್ಕೆ ಇಳಿದಿದ್ದಾರೆ. ದೇಶದ ಮೂವರು ಶ್ರೀಮಂತರು ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 30-40ನೇ ಸ್ಥಾನದಲ್ಲಿದ್ದರು‌. ಅವರೀಗ ಕೇವಲ ಮೂರು - ನಾಲ್ಕು ವರ್ಷಗಳಲ್ಲಿ ವಿಶ್ವದ 2-3 ನೇ ಸ್ಥಾನಕ್ಕೆ ಬಂದಿದ್ದಾರೆ. ಬಿಜೆಪಿಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಈ ಸ್ಥಾನಕ್ಕೆ ಬರಲು‌ ಸಾಧ್ಯವೇ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಶಾಸಕ ಯು.ಟಿ.ಖಾದರ್
ಶಾಸಕ ಯು.ಟಿ.ಖಾದರ್

ಮಂಗಳೂರು: ದೇಶದ ಮೂವರು ಶ್ರೀಮಂತರು ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 30 - 40ನೇ ಸ್ಥಾನದಲ್ಲಿದ್ದರು‌. ಅವರೀಗ ಕೇವಲ ಮೂರು - ನಾಲ್ಕು ವರ್ಷಗಳಲ್ಲಿ ವಿಶ್ವದ 2-3 ನೇ ಸ್ಥಾನಕ್ಕೆ ಬಂದಿದ್ದಾರೆ. ಇದಕ್ಕೆ ಬಿಜೆಪಿಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಬೆಂಬಲವಿಲ್ಲದೇ ಈ ಸ್ಥಾನಕ್ಕೆ ಬರಲು‌ ಸಾಧ್ಯವೇ ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದರು.

ಶಾಸಕ ಯು.ಟಿ.ಖಾದರ್ ಹೇಳಿಕೆ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನ ಸಾಮಾನ್ಯರು ಯಾರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇನ್ನೂ ತಳಮಟ್ಟಕ್ಕೆ ಇಳಿದಿದ್ದಾರೆ. ಆದರೆ, ಶ್ರೀಮಂತರು ಮಾತ್ರ ಬಿಜೆಪಿಯವರ ದೊಡ್ದ ಮಟ್ಟದ ಆಶೀರ್ವಾದ ಇಲ್ಲದೇ ಈ ಸ್ಥಾನಕ್ಕೆ ಬರಲು ಅಸಾಧ್ಯ ಅನ್ನುವುದು ಸ್ಪಷ್ಟ ಎಂದು ಹೇಳಿದರು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ರೀತಿಯ ಸ್ಪಷ್ಟ ತೀರ್ಮಾನ ಕೈಗೊಳ್ಳದ ಕಾರಣ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಎಲ್ಲರೂ ಗೊಂದಲದಲ್ಲಿದ್ದಾರೆ. ಈ ನಿರ್ಲಕ್ಷ್ಯ ಯಾಕೆ ಎಂಬುದಕ್ಕೆ ಸರ್ಕಾರ ಉತ್ತರ ನೀಡಲಿ. ಕೊರೊನಾ ನೆಪವೊಡ್ಡಿ ಯಾವುದೇ ರೀತಿಯಲ್ಲಿ ಸರಿಯಾದ ಮಾಹಿತಿ ಕೊಡದೆ ಗೊಂದಲಕ್ಕೆ ಸಿಲುಕಿಸಿದೆ. ಆದ್ದರಿಂದ ಕೋವಿಡ್ ಕಾಲದಲ್ಲಿ ಶಾಲೆಯ ವಿಚಾರವಾಗಿ ಸರ್ಕಾರ ತನ್ನ ತೀರ್ಮಾನವನ್ನು ಅತೀ ಶೀಘ್ರದಲ್ಲಿಯೇ ಪ್ರಕಟಿಸಲಿ ಎಂದು ರಾಜ್ಯದ ವಿದ್ಯಾರ್ಥಿಗಳ ಪರವಾಗಿ ಕೇಳುತ್ತಾನೆ ಎಂದು ಖಾದರ್ ಮನವಿ ಮಾಡಿದರು.

ಈ ವರ್ಷ ಕನಿಷ್ಠ ಸಿಲೆಬಸ್ ಎಷ್ಟಿದೆ ಎಂಬುವುದನ್ನಾದರೂ ಸರ್ಕಾರ ತಿಳಿಸಲಿ. ಎಸ್ಎಸ್ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ಇದೆಯೇ ಅನ್ನುವುದನ್ನು ಹೇಳಲಿ. ಆದರೆ ಸರ್ಕಾರ ಇದಾವುದನ್ನೂ ಹೇಳದೆ ಕೊರೊನಾ ಭೀತಿಯನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದ್ದರಿಂದ ಸರಕಾರ ಇದಕ್ಕೊಂದು ಸರಿಯಾದ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತ ಬಂದಿದೆ. ಆದರೆ, ಆ ಬಳಿಕ ದ.ಕ.ಜಿಲ್ಲೆಯಲ್ಲಿ ಯಾರಿಗೂ ಮರಳುಗಾರಿಕೆ ನಡೆಸಲು ಅಧಿಕೃತವಾಗಿ ಪರವಾನಗಿ ನೀಡಿಲ್ಲ. ಇದರಿಂದ ಅನಧಿಕೃತವಾಗಿ 18 - 20 ಸಾವಿರ ರೂ.ನಲ್ಲಿ ಮರಳು ದಂಧೆ ನಡೆಯುತ್ತಿದೆ. ಆದರೆ ಜನಪ್ರತಿನಿಧಿಗಳು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ಬದಲು, ಪ್ರತ್ಯೇಕ ಮರಳು ನೀತಿ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ನೀತಿ ಸರಿಯಾಗಿ ಅನುಷ್ಠಾನವಾಗಲು ಎರಡು ವರ್ಷಗಳಾಗುತ್ತದೆ. ಮರಳು ದೊರಕದಿದ್ದಲ್ಲಿ ಕಾರ್ಮಿಕರು, ಮೇಸ್ತ್ರಿಗಳು, ಗುತ್ತಿಗೆದಾರರು, ಇಂಜಿನಿಯರ್, ಸಿಮೆಂಟ್, ಸ್ಟೀಲ್ ಉದ್ಯಮಗಳಿಗೂ ತೊಂದರೆಯಾಗುತ್ತದೆ. ಇವರ ನೋವು ಸರ್ಕಾರಕ್ಕೆ ತಿಳಿಯುವುದಿಲ್ಲವೇ. ಆದ್ದರಿಂದ ಜನರ ಸಮಸ್ಯೆ ನಿವಾರಣೆಗೆ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಸಂಸದರು, ಗಣಿ ಅಧಿಕಾರಿಗಳು, ಜನಪ್ರತಿನಿಧಿಗಳು, ಮರಳು ವ್ಯಾಪಾರಸ್ಥರ ಪ್ರಮುಖರ ಸಭೆ ಕರೆದು ಸುದೀರ್ಘ ಸಭೆ ನಡೆಸಿ ಪರಿಹಾರ ಒದಗಿಸಲಿ ಎಂದು ಖಾದರ್ ಆಗ್ರಹಿಸಿದರು.

For All Latest Updates

ABOUT THE AUTHOR

...view details