ಪುತ್ತೂರು: ಗಾಂಧೀಜಿ ಅವರ ವಿಚಾರಗಳು ಜಗತ್ತಿಗೆ ಮಾದರಿಯಾಗಿದ್ದು, ಎಲ್ಲರ ಸ್ಮರಣೆಯ ಕೇಂದ್ರವಾಗಿರುವ ಮಹಾತ್ಮ ಗಾಂಧೀಜಿ ಅವರ ಸ್ಮರಣೆಯ ಜೊತೆಗೆ ಗಾಂಧೀಜಿ ವಿಚಾರದೆಡೆಗೆ ಎಲ್ಲರೂ ಸಾಗಬೇಕು. ಗಾಂಧಿ ಪ್ರೇರಿತ ಸಮಾಜ ಮತ್ತೊಮ್ಮೆ ಸೃಷ್ಟಿಯಾಗಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ಗಾಂಧಿಕಟ್ಟೆಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿಕಟ್ಟೆ ಸಮಿತಿ ಹಾಗೂ ಗಾಂಧಿ ವಿಚಾರ ವೇದಿಕೆಯ ಸಹಯೋಗದಲ್ಲಿ ನಡೆದ ಹುತಾತ್ಮರ ದಿನಾಚರಣೆ ಹಾಗೂ ಗಾಂಧೀಜಿ ಪಾದಸ್ಪರ್ಶ ಮಾಡಿದ ರಾಗಿದಕುಮೇರು ಕಾಲೋನಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾತನಾಡಿದರು.
ಗಾಂಧೀಜಿ ಅವರ ಆದರ್ಶಗಳು ಇಂದಿಗೂ ದೇಶಕ್ಕೆ ಅಗತ್ಯವಿದೆ. ಸಮಾಜಕ್ಕಾಗಿ, ದೇಶಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಬಲಿದಾನಗೊಂಡ ಗಾಂಧೀಜಿಯವರಂತಹ ಹುತಾತ್ಮರು ಮಹಾತ್ಮರಾಗಿ ನಮಗೆ ದಾರಿದೀಪವಾಗುತ್ತಾರೆ. ದುಷ್ಚಟಮುಕ್ತ ಸಜ್ಜನ ಸಮಾಜ ಗಾಂಧೀಜಿ ಕನಸಾಗಿತ್ತು. ರಾಮರಾಜ್ಯದ ಕಲ್ಪನೆ ಅವರದಾಗಿತ್ತು. ಮೌಲ್ಯಾಧಾರಿತ ರಾಜಕಾರಣ ಅವರ ಪ್ರತಿಪಾದನೆಯಾಗಿತ್ತು. ಸ್ವಾಭಿಮಾನಿ ಸಮಾಜ ಅವರ ವಿಚಾರಧಾರೆಯಾಗಿತ್ತು. ಅದೆಲ್ಲವನ್ನೂ ಬದುಕಿನಲ್ಲಿ ಅಳವಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳನ್ನು ಅವಲೋಕನ ಮಾಡುವ ಜೊತೆಗೆ ರಾಷ್ಟ್ರೋತ್ಥಾನಕ್ಕೆ ಎಲ್ಲರೂ ಸಿದ್ಧರಾಗಬೇಕು. ಗಾಂಧೀಜಿ ನಮ್ಮನ್ನು ಬಿಟ್ಟು ಹೋಗಿದ್ದರೂ ಅವರ ಅವರ ತತ್ವಗಳು ಭಾರತೀಯ ತತ್ವಗಳಾಗಿ ನಮ್ಮ ಮುಂದಿವೆ. ಅವರು ತೋರಿದ ಸತ್ಯ, ಅಹಿಂಸೆಯ ದಾರಿಗಳು ಎಂದೂ ಪ್ರಸ್ತುತವಾಗಿದೆ ಎಂದು ಹೇಳಿದರು.