ಕರ್ನಾಟಕ

karnataka

ಕೊರಗಜ್ಜ ದೈವದ ನೇಮೋತ್ಸವದಲ್ಲಿ ನಡೆಯಿತೇ ಪವಾಡ!?

By

Published : Mar 26, 2021, 9:23 AM IST

ದೊಡ್ಡಡ್ಕ ರಾಜರಾಂಪುರದಲ್ಲಿನ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಆದಿಬ್ರಹ್ಮ ಮೊಗೇರ್ಕಳ 40ನೇ ವರ್ಷದ ನೇಮೋತ್ಸವ ಮತ್ತು ಮಂತ್ರಮೂರ್ತಿ ಗುಳಿಗ ದೈವದ ಕೋಲ ನಡೆಯಿತು. ಭಾನುವಾರ ಬೆಳಗ್ಗೆ ಕೊರಗಜ್ಜನ ನೇಮೋತ್ಸವವೂ ನಡೆಯಿತು. ಇದರಲ್ಲಿ 11 ಹರಕೆ ಕೋಲ ಹಾಗೂ ಒಂದು ಕಾಲಾವಧಿ ಕೋಲ ಇತ್ತು. ಆದರೆ ಸ್ವಲ್ಪ ಹೊತ್ತಲ್ಲಿ 12 ಕೊರಗಜ್ಜ ದೈವಗಳ ಬದಲು ಕೆಲವರಿಗೆ 13 ದೈವಗಳು ಕಾಣಿಸಿವೆ ಎನ್ನಲಾಗಿದೆ.

sullia
ಕೊರಗಜ್ಜ ದೈವದ ಪವಾಡ!

ಸುಳ್ಯ:ತುಳುನಾಡಿನಲ್ಲಿ ಅಲ್ಲಲ್ಲಿ ಆಗಾಗ ಕೊರಗಜ್ಜ ದೈವದ ಪವಾಡಗಳು ನಡೆಯುತ್ತಿರುತ್ತವೆ. ಇಂತದೊಂದು ಪವಾಡ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ದೊಡ್ಡಡ್ಕ ರಾಜರಾಂಪುರದಲ್ಲಿನ ಕೊರಗಜ್ಜನ ಸನ್ನಿಧಾನದಲ್ಲಿ ನಡೆದಿದೆ ಎನ್ನಲಾಗಿದೆ.

ಕಳೆದ ಶನಿವಾರ ರಾತ್ರಿ ಇಲ್ಲಿನ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಆದಿಬ್ರಹ್ಮ ಮೊಗೇರ್ಕಳ 40ನೇ ವರ್ಷದ ನೇಮೋತ್ಸವ ಮತ್ತು ಮಂತ್ರಮೂರ್ತಿ ಗುಳಿಗ ದೈವದ ಕೋಲ ನಡೆಯಿತು. ಭಾನುವಾರ ಬೆಳಗ್ಗೆ ಕೊರಗಜ್ಜನ ನೇಮೋತ್ಸವವೂ ನಡೆಯಿತು. ಇದರಲ್ಲಿ 11 ಹರಕೆ ಕೋಲ ಹಾಗೂ ಒಂದು ಕಾಲಾವಧಿ ಕೋಲ ಇತ್ತು. ಹಾಗೇನೆ 12 ಅಗೇಲಿಗೂ ತಯಾರಿ ಮಾಡಿ 12 ದೈವದ ತಲೆಗೆ ಇಡುವ ಮಡಪ್ಪಾಳೆಯನ್ನು ಹಾಗೂ ಇತರ ವಸ್ತುಗಳನ್ನು ಜೋಡಣೆಯೂ ಮಾಡಲಾಗಿತ್ತು ಎನ್ನಲಾಗಿದೆ. ಹೀಗೆ 12 ಜನ ದೈವ ಪಾತ್ರಿಗಳು ದೈವ ವೇಷ ಕಟ್ಟಿ, ನೇಮೋತ್ಸವ ಹೊರಟು ದೈವಗಳ ನರ್ತನ ಪ್ರಾರಂಭವಾಯಿತು. ಸ್ವಲ್ಪ ಹೊತ್ತಲ್ಲಿ 12 ಕೊರಗಜ್ಜ ದೈವಗಳ ಬದಲು ಕೆಲವರಿಗೆ 13 ದೈವಗಳು ಕಾಣಿಸಿವೆ ಎನ್ನಲಾಗಿದೆ. ಈ ದೈವದ ತಲೆಗೆ ಮಡಪ್ಪಾಳೆ(ಗೋಂಪಾರು) ಇರಲಿಲ್ಲ. ಮಡಪ್ಪಾಳೆಯನ್ನು ದೈವ ಕೇಳಿತು ‌ಎನ್ನಲಾಗಿದ್ದು, ಮತ್ತೆ ಮಡಪ್ಪಾಳೆ ತಯಾರಿ ಮಾಡಿ ದೈವಕ್ಕೆ ಕೊಡಲಾಯಿತು. ಹೀಗೆ ಮಡಪ್ಪಾಳೆ ತಯಾರಿ ಮಾಡಿ ಕೊಟ್ಟ ನಂತರ ಆ ಕೊರಗಜ್ಜ ದೈವ ಕುಣಿದಿದೆ ಎಂಬ ಸುದ್ದಿ ಹರಡಿದೆ.

ಇದನ್ನು ಓದಿ: ನಂಜನಗೂಡು ಪಂಚ ರಥೋತ್ಸವದಲ್ಲಿ ವಿಘ್ನ... ತೇರು ಎಳೆಯುವಾಗ ಪುಡಿಯಾದ ಚಕ್ರ!

ಕೊನೆಗೆ ಅಗೇಲು ಬಳಸುವ ಸಂದರ್ಭದಲ್ಲೂ 13 ದೈವಗಳ ಬದಲು 12 ದೈವಗಳು ಮಾತ್ರ ಉಳಿದು ಆ ದೈವ ಕಾಣದಂತೆ ಮಾಯವಾಗಿದೆ ಎನ್ನಲಾಗಿದೆ. ಸಂದರ್ಭದಲ್ಲಿ ಭಕ್ತರು ಮತ್ತು ಸ್ಥಳೀಯ ಸಮಿತಿಯವರ ಮಧ್ಯೆ ದೈವಗಳ ಸಂಖ್ಯೆಗಳ ಬಗ್ಗೆ ಚರ್ಚೆಯಾಗಿದೆ. ಕೆಲವರಿಗೆ 12 ದೈವಗಳು ಮಾತ್ರ ಕಾಣಿಸಿಕೊಂಡಿವೆ ಎನ್ನಲಾಗಿದೆ. ಇನ್ನೂ ಕೆಲವರಿಗೆ 13 ದೈವಗಳು ಕಾಣಿಸಿಕೊಂಡಿವೆ. ಇದು ಭಕ್ತರ ಕುತೂಹಲಕ್ಕೂ ಕಾರಣವಾಗಿದೆ.

ಕೊರಗಜ್ಜ ದೈವದ ಪವಾಡ!

ಈ ಘಟನೆ ಸ್ಥಳೀಯರ ಭಯ-ಭಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ದೈವದ ಪವಾಡದಿಂದಾಗಿ ದೈವಸ್ಥಾನದ ಸಮಿತಿಯವರು ಜ್ಯೋತಿಷ್ಯರ ಮೊರೆ ಹೋಗಿದ್ದು, ಪ್ರಶ್ನೆ ಚಿಂತನೆ ನಡೆಸಿದಾಗ ಸನ್ನಿಧಾನದಲ್ಲಿ ವಿಚಿತ್ರ ಪವಾಡಗಳು ಕಂಡು ಬರುತ್ತಿದ್ದು, ಸ್ಥಳದಲ್ಲಿಯೇ ಸೂಕ್ಷ್ಮ ಪ್ರಶ್ನೆ ಚಿಂತನೆ ನಡೆಸುವಂತೆ ಸೂಚಿಸಿದ್ದಾರೆ. ಈ ಕಾರಣದಿಂದ ಕಮಿಟಿಯವರು ಪ್ರಶ್ನೆ ಚಿಂತನೆಗೆ ದಿನ ನಿಗದಿಗೊಳಿಸಿದ್ದಾರೆ.

ಇಲ್ಲಿಯ ಕೊರಗಜ್ಜನ ಕ್ಷೇತ್ರಕ್ಕೆ ಸುಮಾರು 40 ವರ್ಷಗಳ ಇತಿಹಾಸವಿದ್ದು, ಇದು ಕಾರಣಿಕ ಕ್ಷೇತ್ರವಾಗಿದೆ. ಸುಳ್ಯ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 15 ಕಿ.ಮೀ. ಸಾಗಿದರೆ ರಾಜರಾಮ್‍ಪುರ ಕೊರಗಜ್ಜ ಕ್ಷೇತ್ರ ಬಲಭಾಗದಲ್ಲಿ ಕಾಣಸಿಗುತ್ತದೆ. ಇಲ್ಲಿಗೆ ವಿಶೇಷ ನೇಮೋತ್ಸವ ಇತರೆ ವಿಶೇಷ ಪರ್ವ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೈವದ ದರ್ಶನ ಪಡೆಕೊಂಡು ಹೋಗುತ್ತಾರೆ. ಈ ಕಾರಣಿಕ ಕೊರಗಜ್ಜನ ಪವಾಡವನ್ನು ಸಾವಿರಾರು ಜನರು ಕೊಂಡಾಡುತ್ತಿದ್ದು, ಇದೀಗ ಈ ಸಂಗತಿಗಳು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿವೆ.

ABOUT THE AUTHOR

...view details