ಕರ್ನಾಟಕ

karnataka

ETV Bharat / state

ಗಾಂಜಾ ಮಾರಾಟ ಯತ್ನ ಆರೋಪ ಸಾಬೀತು: ಅಪರಾಧಿಗೆ 10 ವರ್ಷ ಕಠಿಣ ಸಜೆ, 1 ಲಕ್ಷ ರೂ. ದಂಡ - Mangalore

ಕಾವೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ರಹೀಂ, ರಾಜೀವ್ ಎ.ಪಿ.ಕಲಂದರ್ ಶಾಫಿ ಸಹಿತ ಬೈಕ್ ಮಾಲೀಕ ರಫೀಕ್ ಮಂಡ್ಯೂರು ಮೇಲೆ ಪ್ರಕರಣ ದಾಖಲಾಗಿತ್ತು.‌ ಪ್ರಕರಣದ ತನಿಖೆ ನಡೆಸಿದ ಕಾವೂರು ಪೊಲೀಸ್ ಠಾಣೆಯ ನಿರೀಕ್ಷಕ ರಫೀಕ್ ಕೆ.ಎಂ. ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Mangalore
ಮಂಗಳೂರು

By

Published : Jul 17, 2021, 7:53 PM IST

ಮಂಗಳೂರು: ನಗರದ 4ನೇ ಮೈಲು ಪ್ರದೇಶದಲ್ಲಿ ರಿಕ್ಷಾದಲ್ಲಿ 42.230 ಕೆಜಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲಿನ ಆರೋಪ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ 10 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಬಂಟ್ವಾಳ ತಾಲೂಕಿನ ಕಾರ್ಯಾಡಿ ಮನೆ, ಉರಿಮಜಲು ಕ್ವಾಟರ್ಸ್, ಕುಳ ಗ್ರಾಮ ನಿವಾಸಿ ಅಬ್ದುಲ್ ರಹೀಂ (29) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ವಿವರ:

ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕನೇ ಮೈಲು ರಸ್ತೆಯ ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿಗೆ ಹೋಗುವ ಖಾಲಿ‌ ಜಾಗವೊಂದರಲ್ಲಿ 2018 ಸೆ.8ರಂದು ಮಧ್ಯಾಹ್ನ 1.45 ಸುಮಾರಿಗೆ ಆರೋಪಿಗಳಾದ ಅಬ್ದುಲ್ ರಹೀಂ, ರಾಜೀವ್ ಎ.ಪಿ. ಹಾಗೂ ಕಲಂದರ್ ಶಾಫಿ ಆಟೋ ರಿಕ್ಷಾ ಹಾಗೂ ಬೈಕ್​​ನಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದರು.

ಈ ಸಂದರ್ಭ ಅಂದು ಕರ್ತವ್ಯದಲ್ಲಿದ್ದ ಕಾವೂರು ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ್ ಹಾಗೂ ಸಿಬ್ಬಂದಿ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ರಿಕ್ಷಾದಲ್ಲಿ 42.230 ಕೆಜಿಯ 20 ಪ್ಯಾಕೇಟ್ ಗಾಂಜಾ ಪತ್ತೆಯಾಗಿತ್ತು. ತಕ್ಷಣ ಅಬ್ದುಲ್ ರಹೀಂ ಹಾಗೂ ರಾಜೀವ್ ಎ.ಪಿ.ಯನ್ನು ಬಂಧಿಸಿದ ಪೊಲೀಸರು ಗಾಂಜಾ ಸಹಿತ ರಿಕ್ಷಾ ಹಾಗೂ ಬೈಕ್ ಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಬೈಕ್ ನಲ್ಲಿದ್ದ ಆರೋಪಿ‌ ಕಲಂದರ್ ಶಾಫಿ ತಪ್ಪಿಸಿಕೊಂಡಿದ್ದ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ರಹೀಂ, ರಾಜೀವ್ ಎ.ಪಿ.ಕಲಂದರ್ ಶಾಫಿ ಸಹಿತ ಬೈಕ್ ಮಾಲೀಕ ರಫೀಕ್ ಮಂಡ್ಯೂರು ಮೇಲೆ ಪ್ರಕರಣ ದಾಖಲಾಗಿತ್ತು.‌ ಪ್ರಕರಣದ ತನಿಖೆ ನಡೆಸಿದ ಕಾವೂರು ಪೊಲೀಸ್ ಠಾಣೆಯ ನಿರೀಕ್ಷಕ ರಫೀಕ್ ಕೆ.ಎಂ. ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಘೋಷಿಸಿದೆ. ಈ ನಡುವೆ ಆರೋಪಿ ರಾಜೀವ್ ಎ.ಪಿ. ಮೃತಪಟ್ಟಿದ್ದು, ರಫೀಕ್ ಮಂಡ್ಯೂರು ಹಾಗೂ ಕಲಂದರ್ ಶಾಫಿ ತಲೆ ಮರೆಸಿಕೊಂಡಿದ್ದ.

ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಬಿ. ಅವರು ಸೆಕ್ಷನ್ 8C 20(B)(ll)(C) ಎನ್​ಡಿಪಿಎಸ್ ಕಾಯ್ದೆಯಡಿ ಆರೋಪಿ ಅಬ್ದುಲ್ ರಹೀಂಗೆ 10 ವರ್ಷಗಳ ಕಾಲ ಕಠಿಣ ಸಜೆ, 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ದಂಡ ತೆರಲು ತಪ್ಪಿದ್ದಲ್ಲಿ 1ವರ್ಷ ಸಾದಾ‌ ಸಜೆ ಅನುಭವಿಸಬೇಕು. ತಲೆ ಮರೆಸಿಕೊಂಡ ಆರೋಪಿಗಳ ಕೇಸ್​​ ವಿಭಜಿಸಿ ಮುಂದುವರಿಸಲಾಗುತ್ತದೆ. ಸರ್ಕಾರಿ ಅಭಿಯೋಜಕರಾದ ರಾಜು ಪೂಜಾರಿ ಬನ್ನಾಡಿ ಹಾಗೂ ಬಿ.ಶೇಖರ್‌ ಶೆಟ್ಟಿ ಸರ್ಕಾರದ ಪರವಾಗಿ ವಾದಿಸಿದ್ದಾರೆ.

ABOUT THE AUTHOR

...view details