ಕರ್ನಾಟಕ

karnataka

ETV Bharat / state

ವಾರಾಂತ್ಯ ವಹಿವಾಟಿಗೆ ಅವಕಾಶ ಕೊಡಿ: ವಿವಿಧ ವ್ಯವಹಾರಗಳ ಮುಖಂಡರ ಆಗ್ರಹ - ಮಂಗಳೂರಿನಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಳ

ದಿನನಿತ್ಯದ ಸಾಮಗ್ರಿಗಳನ್ನು ಬಿಟ್ಟು ಎಲ್ಲವನ್ನೂ ಬಂದ್ ಮಾಡಿ ಎಂದರೆ ಅವರೆಲ್ಲಾ ಬದುಕುವುದು ಹೇಗೆ?, ಅದೇ ರೀತಿ ನಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಆನ್​ಲೈನ್​ ವ್ಯವಹಾರವನ್ನು ತೆರೆದಲ್ಲಿಯೂ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಸಂಘಟನೆಯ ಸದಸ್ಯ ಸಂತೋಷ್ ಕಾಮತ್ ಅಳಲು ತೋಡಿಕೊಂಡರು.

Santosh Kamath
ಸಂತೋಷ್ ಕಾಮತ್

By

Published : Jan 14, 2022, 7:39 PM IST

ಮಂಗಳೂರು:ಒಮಿಕ್ರಾನ್ ಸೋಂಕು ಭೀತಿಯಿಂದ ಸರ್ಕಾರ ಅವೈಜ್ಞಾನಿಕ ಲಾಕ್​ಡೌನ್​ ಜಾರಿಗೊಳಿಸುತ್ತಿರುವ ಪರಿಣಾಮ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ, ವಾರಾಂತ್ಯ ಲಾಕ್​ಡೌನ್​ ಮಾಡದೆ ಬೇರೆ ದಿನಗಳಲ್ಲಿ ಲಾಕ್​ಡೌನ್​ ಮಾಡಿ ನಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರುಗೊಳಿಸಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವ್ಯಾಪಾರ ವ್ಯವಹಾರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.


ಸಂಘಟನೆಯ ಸದಸ್ಯ ಸಂತೋಷ್ ಕಾಮತ್ ಮಾತನಾಡಿ, ನಾವು ಲಾಕ್​ಡೌನ್​​ ವಿರೋಧಿಸುತ್ತಿಲ್ಲ. ದಿನನಿತ್ಯದ ಅವಶ್ಯಕ ಅಂಗಡಿಗಳಿಗೆ ಎಲ್ಲಾ ದಿನಗಳಲ್ಲಿ ಅವಕಾಶ ಕೊಡುವಂತೆ ವಾರಾಂತ್ಯದ ದಿನಗಳಲ್ಲಿಯೇ ವಹಿವಾಟುಗಳಾಗುವ ಇತರ ಉದ್ದಿಮೆ, ವ್ಯವಹಾರಗಳಿಗೆ ಅವಕಾಶ ನೀಡಿ ವಾರದ ಇತರ ದಿನಗಳಲ್ಲಿ ಲಾಕ್​ಡೌನ್​ ಮಾಡಿ. ಈ ರೀತಿಯಲ್ಲಿ ದಿನ ಬಿಟ್ಟು ದಿನ ವ್ಯವಹಾರಕ್ಕೆ ಅವಕಾಶ ನೀಡಿದ್ದಲ್ಲಿ ನಮ್ಮ ವ್ಯವಹಾರ ತಕ್ಕಮಟ್ಟಿಗೆ ನಡೆಯಲು ಸಾಧ್ಯ. ಇಲ್ಲದಿದ್ದಲ್ಲಿ ಒಂದು ಬಾರಿ ನಮ್ಮ ವ್ಯವಹಾರ ನೆಲಕಚ್ಚಿದ್ದಲ್ಲಿ ಮತ್ತೆ ಮೇಲೇಳುವುದು ಕಷ್ಟಸಾಧ್ಯ ಎಂದರು.

ವಾರಾಂತ್ಯ ದಿನಗಳಲ್ಲಿಯೇ ವ್ಯವಹಾರಗಳಾಗುವ ಬ್ಯೂಟಿ ಪಾರ್ಲರ್, ಫೋಟೊಗ್ರಾಫರ್ಸ್, ಶಾಮಿಯಾನ, ಗಾರ್ಮೆಂಟ್ಸ್ ಟೆಕ್ಸ್​ಟೈಲ್ಸ್, ಸೌಂಡ್ ಆ್ಯಂಡ್ ಲೈಟ್ಸ್ ಮುಂತಾದ ಉದ್ದಿಮೆಗಳನ್ನು ವಾರಾಂತ್ಯ ಕರ್ಫ್ಯೂ ನೆಪದಲ್ಲಿ ಸ್ಥಗಿತಗೊಳಿಸಿದರೆ ಇದನ್ನೇ ನಂಬಿದವರು ಆರ್ಥಿಕವಾಗಿ ದಿವಾಳಿಯಾಗುತ್ತಾರೆ. ಈಗಾಗಲೇ, ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟದಿಂದ ನೆಲಕಚ್ಚಿ ವ್ಯವಹಾರವನ್ನೇ ಸ್ಥಗಿತಗೊಳಿಸಿದ್ದಾರೆ. ಸಾಕಷ್ಟು ಮಂದಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು‌‌ ಅಳಲು ತೋಡಿಕೊಂಡರು.

ನಾವು ಯಾವತ್ತೂ ಲಾಕ್​ಡೌನ್​ ವಿರೋಧಿಗಳಲ್ಲ. ಮಾಡುವುದಿದ್ದರೆ ಶಿಸ್ತುಬದ್ಧವಾಗಿ, ವೈಜ್ಞಾನಿಕವಾಗಿ ಮಾಡಿ. ಒಂದೋ ಸಂಪೂರ್ಣ ಲಾಕ್​ಡೌನ್​ ಮಾಡಿ ಇಲ್ಲದಿದ್ದಲ್ಲಿ ದಿನ ಬಿಟ್ಟು ದಿನ ವ್ಯಾಪಾರ , ವ್ಯವಹಾರಕ್ಕೆ ಅವಕಾಶ ಕೊಟ್ಟರೂ ಪರವಾಗಿಲ್ಲ. ಲಾಕ್​ಡೌನ್​ನಿಂದ ಸೋಂಕು ಹರಡುವ ಚೈನ್ ಕಟ್ ಆಗಬೇಕು. ಅದು ಬಿಟ್ಟು ಅವೈಜ್ಞಾನಿಕ ಲಾಕ್​ಡೌನ್​ ಮಾಡಿ ಯಾವುದೇ ಪ್ರಯೋಜನವಿಲ್ಲ.

ದಿನನಿತ್ಯದ ಸಾಮಗ್ರಿಗಳನ್ನು ಬಿಟ್ಟು ಇತರೆಲ್ಲರನ್ನು ಬಂದ್ ಮಾಡಿ ಎಂದರೆ ಅವರೆಲ್ಲಾ ಬದುಕುವುದು ಹೇಗೆ?. ಅದೇ ರೀತಿ ನಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಆನ್​ಲೈನ್​ ವ್ಯವಹಾರವನ್ನು ತೆರೆದಲ್ಲಿಯೂ ನಮ್ಮ ವ್ಯಾಪರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ, ಅದನ್ನೂ ಬಂದ್ ಮಾಡಿ. ಆ ಬಳಿಕ ಯಾವ ರೀತಿಯ ಸಹಕಾರ ಬಯಸುತ್ತದೋ ಅದನ್ನು ಕೊಡಲು ನಾವು ತಯಾರಿದ್ದೇವೆ ಎಂದು ಸಂತೋಷ್​ ಕಾಮತ್ ಹೇಳಿದರು.

ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಮಾತನಾಡಿ, ಈ ಬಗ್ಗೆ ತಜ್ಞರ ಸಲಹಾ ಮಂಡಳಿಯನ್ನು ರಚಿಸಬೇಕು. ಅದರಲ್ಲಿ ಆರ್ಥಿಕ ತಜ್ಞರು, ವ್ಯಾಪಾರ ವಹಿವಾಟು ಉದ್ದಿಮೆದಾರರು, ಸಾರ್ವಜನಿಕರನ್ನು ಪ್ರತಿನಿಧಿಸುವವರೂ ಇರಬೇಕು‌. ಈ ತಜ್ಞರ ಸಲಹಾ ಮಂಡಳಿ ಜಿಲ್ಲಾ ಮಟ್ಟದಲ್ಲಿಯೂ ಆಗಲಿ ಎಂದು ಹೇಳಿದರು.

ಇದನ್ನೂ ಓದಿ:ಅನಾರೋಗ್ಯದಿಂದ ಕವಿ ನಾಡೋಜ ಚನ್ನವೀರ‌ ಕಣವಿ ಆಸ್ಪತ್ರೆಗೆ ದಾಖಲು

ABOUT THE AUTHOR

...view details