ಮಂಗಳೂರು: ಮದುವೆಯೆಂದರೆ ಅದ್ಧೂರಿಯಾಗಿ ಎಲ್ಲರ ಗಮನ ಸೆಳೆಯಬೇಕು ಎಂದು ಬಯಸುವವರೇ ಅಧಿಕ. ಆದರೆ, ಮಂಗಳೂರಿನಲ್ಲಿ ನಡೆದ ಸರಳ ಮದುವೆಯೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಚಕರ ಪೂಜೆಗಳು, ಮಂತ್ರಘೋಷಗಳಿಲ್ಲದೇ ಮಂತ್ರಮಾಂಗಲ್ಯದ ಮೂಲಕ ವಿವಾಹವಾಗಿ ಕಡಲತಡಿಯ ಜೋಡಿಯೊಂದು ಗಮನ ಸೆಳೆದಿದೆ.
ಸುರತ್ಕಲ್ನ ಹೋಂ ಸ್ಟೇಯಲ್ಲಿ ವಿವೇಕ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬುವವರು ನಾಡಗೀತೆ, ಪರಿಸರ ಸ್ನೇಹಿ ಆದರ್ಶಗಳ ಜೊತೆ ಹೊಸಜೀವನ ಆರಂಭಿಸಿದರು. ಲ್ಯಾಂಡ್ ಲಿಂಕ್ಸ್ನ ವಿವೇಕಗೌಡ ಛಾಯಾಗ್ರಾಹಣ ಮತ್ತು ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಶಿವಾನಿ ಶೆಟ್ಟಿ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ವಿವಾಹ ಸಮಾರಂಭದಲ್ಲಿ ಕೇವಲ 100 ಮಂದಿಗೆ ಮಾತ್ರ ಆಹ್ವಾನವಿತ್ತು.
ಬಂದವರೆಲ್ಲರೂ ಮದುವೆಯಲ್ಲಿ ಭಾಗವಹಿಸುವ ಜೊತೆಗೆ ಆದರ್ಶಗಳನ್ನು ಕಾಣುವಂತಾಗಿದೆ. ವಧು - ವರರು ತಾವು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳ್ವೆ ನಡೆಸುವ, ತಮ್ಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಕನ್ನಡದಲ್ಲಿ ಪ್ರತಿಜ್ಞೆ ತೆಗೆದುಕೊಂಡು ಹಾರ ಬದಲಾವಣೆ, ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ಸಾಮಾಜಿಕ ಚಿಂತಕ ವಿವೇಕಾನಂದ ಎ.ಚ್.ಕೆ ವಿವಾಹ ಕಾರ್ಯ ನಡೆಸಿಕೊಟ್ಟರು.
ಬಸವಣ್ಣ, ಕುವೆಂಪು ಆದರ್ಶ:ವರ ವಿವೇಕ್ ಗೌಡ ಬಸವಣ್ಣ, ಕುವೆಂಪು ಅವರ ಆದರ್ಶಗಳನ್ನು ಪಾಲಿಸುವವರು. ಅವರ ಚಿಂತನೆಯನ್ನು ಮೈಗೂಡಿಸಿಕೊಂಡವರು. ಕುವೆಂಪು ಅವರು ಪ್ರತಿಪಾದಿಸಿದ ಮಂತ್ರಮಾಂಗಲ್ಯದ ವಿಶಿಷ್ಟ ಶೈಲಿಯಲ್ಲಿ ಮದುವೆಯಾದ ಅವರು ಈ ಮದುವೆಯಲ್ಲಿ ನಾಡಗೀತೆ ಹಾಡುವ ಮೂಲಕ ವಿಶಿಷ್ಟತೆ ಮೆರೆದರು.