ಮಂಗಳೂರು: ಜೀವನದ ಮಹತ್ವದ ಘಟ್ಟಗಳಲ್ಲಿ ಮದುವೆಯೂ ಒಂದು. ಈ ದಿನವನ್ನು ಅವಿಸ್ಮರಣೀಯ ವಾಗಿಸಬೇಕೆನ್ನುವುದೇ ಎಲ್ಲರ ಕನಸು. ಅದಕ್ಕಾಗಿ ಮದುವೆಯ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಇಲ್ಲೊಬ್ಬರು ಪೊಲೀಸ್ ತಮ್ಮ ಮದುವೆಯನ್ನು ರಕ್ತದಾನ, ನೇತ್ರದಾನ ಹಾಗೂ ಮದುವೆಯ ಸಂಪ್ರದಾಯಗಳ ಆಧ್ಯಾತ್ಮಿಕ, ವೈಜ್ಞಾನಿಕ ಹಿನ್ನೆಲೆಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಆಮಂತ್ರಣ ಪತ್ರಿ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದವರಾದ ಶಾಂತಪ್ಪ ಅವರು ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಮದುವೆ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಎಂಬ ನಿಟ್ಟಿನಲ್ಲಿ ಇವರು ವಿಶಿಷ್ಟವಾದ ಮದುವೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಇದರಲ್ಲಿ ಮದುವೆಯ ಹಿಂದಿರುವ ಸಂಪ್ರದಾಯದ ಹಿನ್ನೆಲೆಯನ್ನು ವಿವರವಾಗಿ ಹೇಳಿದ್ದಾರೆ. ಕರಿಮಣಿ, ಮೆಹಂದಿ, ಕಾಲುಂಗುರ, ಕನ್ಯಾದಾನ, ಅಕ್ಷತೆ ಇವುಗಳ ಮಹತ್ವಗಳ ಬಗ್ಗೆ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ತಿಳಿಸಿದ್ದಾರೆ. ಮುಖ್ಯವಾಗಿ ನೇತ್ರದಾನ ಹಾಗೂ ರಕ್ತದಾನಗಳ ಬಗೆಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.