ಮಂಗಳೂರು: ದೇಶ ವಿದೇಶ ಸುತ್ತುವುದೆಂದರೆ ಕೆಲವರಿಗೆ ಫ್ಯಾಶನ್. ವಿಮಾನ, ರೈಲು, ವಾಹನಗಳ ಮೂಲಕ ಟೂರ್ ಮಾಡಿ ಬರುವ ಸಾಕಷ್ಟು ಜನ ಇದ್ದಾರೆ. ಆದರೆ, ಇಲ್ಲೊಬ್ಬ ಯುವಕ ಸೈಕಲ್ನಲ್ಲಿ ಕೇರಳದಿಂದ ಈಜಿಪ್ಟ್ಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಗ್ರಾಮದ ಬೈರಿಕಟ್ಟೆಯ ಹಾಫಿಲ್ ಅಹ್ಮದ್ ಸಾಬಿತ್ ಈ ಸಾಧನೆ ಮಾಡಲು ಹೊರಟವರು. 21 ವರ್ಷದ ಇವರು ಅಕ್ಟೋಬರ್ 20 ರಂದು ಕೇರಳದಿಂದ ಈಜಿಪ್ಟ್ಗೆ ಸೈಕಲ್ ಪ್ರಯಾಣ ಆರಂಭಿಸಲಿದ್ದಾರೆ. ಕೇರಳದಿಂದ ಆರಂಭವಾಗುವ ಇವರ ಸೈಕಲ್ ಯಾತ್ರೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್ ಹೋಗಿ ಅಲ್ಲಿಂದ ಪಾಕಿಸ್ತಾನ, ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ, ಯುಎಇ, ಒಮಾನ್, ಜೋರ್ಡನ್, ಇಸ್ರೆಲ್ ಆಗಿ ಈಜಿಪ್ಟ್ ದೇಶದಲ್ಲಿ ಕೊನೆಯಾಗಲಿದೆ. ಕೇರಳದ ತಿರುವನಂತಪುರಂನಿಂದ ಆರಂಭವಾಗುವ ಈ ಸೈಕಲ್ ಯಾತ್ರೆ ಎರಡು ಖಂಡಗಳು, ಹತ್ತು ದೇಶಗಳ ಮೂಲಕ ಸುಮಾರು 15 ಸಾವಿರ ಕಿಲೋಮೀಟರ್ ಸಾಗಲಿದೆ.
ಹಾಫಿಲ್ ಅಹ್ಮದ್ ಸಾಬಿತ್ ಅವರು ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಪಡೆಯುುತ್ತಿದ್ದಾರೆ. ಮೂರನೇ ತರಗತಿಯವರೆಗೆ ಬೈರಿಕಟ್ಟೆಚ ಮವೂನತ್ ಇಸ್ಲಾಂ ಮದ್ರಸದಲ್ಲಿ ಕಲಿತ ಇವರು, ತಮ್ಮ 9 ನೇ ವಯಸ್ಸಿನಲ್ಲಿ ಮಂಜೇಶ್ವರದ ದಾರುಲ್ ಕುರ್ ಅನ್ ಹಿಪ್ಲ್ ಕಾಲೇಜಿನಲ್ಲಿ ಕುರ್ ಅನ್ ಕಂಠಪಾಠ ಆರಂಭಿಸಿದರು. ಅದನ್ನು ಪೂರ್ತಿಗೊಳಿಸಿ ಹಾಫಿಲ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:ಪರಿಸರ ಜಾಗೃತಿಗಾಗಿ ಕೇರಳದಿಂದ ಸಿಂಗಪುರಕ್ಕೆ ಉಡುಪಿಯ ಹರ್ಷೇಂದ್ರ ಸೈಕಲ್ ಯಾತ್ರೆ
ಮೂರುವರೆ ವರ್ಷದ ಶಿಕ್ಷಣದ ಬಳಿಕ ಕಾಸರಗೋಡು ಕುಂಬಳೆ ಇಮಾಂ ಶಾಫಿ ಅಕಾಡೆಮಿಯಲ್ಲಿವ ಹಿಫ್ಲ್ ದಲ್ಲಿ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಮುಂದುವರಿಸಿದ್ದಾರೆ. ಇವರು ಇಂಗ್ಲಿಷ್ನಲ್ಲಿ ಬಿಎ ಪದವಿ ಶಿಕ್ಷಣ, ಉರ್ದು ಹಾಗೂ ಇಕ್ನೋ ವಿಶ್ವವಿದ್ಯಾಲಯದಿಂದ ಮನಶಾಸ್ತ್ರ ವಿಷಯದಲ್ಲಿ ಡಿಪ್ಲೋಮಾ ಕೋರ್ಸ್ ಅಧ್ಯಯನ ಮಾಡಿದ್ದಾರೆ. ಒಂದು ವರ್ಷಗಳ ಕಾಲ ಅಡ್ಯಾರ್ ಕಣ್ಣೂರಿನಲ್ಲಿ ದರ್ಸ್ ಶಿಕ್ಷಣ ಪಡೆದಿದ್ದಾರೆ. ಜೊತೆಗೆ sabi inspires ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಮೂಲಕ ಸ್ಪೂರ್ತಿದಾಯಕ ಸಂದೇಶಗಳ ವಿಡಿಯೋ ಮಾಡಿ ಗಮನ ಸೆಳೆಯುತ್ತಿದ್ದಾರೆ.
ಈಜಿಪ್ಟ್ಗೆ ಸೈಕಲ್ ಯಾತ್ರೆ ಮಾಡುತ್ತಿರುವುದು ಉನ್ನತ ಧಾರ್ಮಿಕ ಶಿಕ್ಷಣ ಕಲಿಯುವ ಉದ್ದೇಶದಿಂದ. ಇವರಿಗೆ ಈಜಿಪ್ಟ್ನ ಅಲ್ ಅಝ್ಹರ್ ಯುನಿವರ್ಸಿಟಿಯಲ್ಲಿ ಉನ್ನತ ಧಾರ್ಮಿಕ ಶಿಕ್ಷಣಕ್ಕಾಗಿ ಅವಕಾಶ ಸಿಕ್ಕಿದ್ದು, ಮುಂದಿನ ವರ್ಷ ಅಲ್ಲಿ ಹಾಜರಾಗಬೇಕಿದೆ. ಅದಕ್ಕಾಗಿ ಅವರು ಈಜಿಪ್ಟ್ಗೆ ಸೈಕಲ್ನಲ್ಲಿ ತೆರಳಲು ನಿರ್ಧರಿಸಿದ್ದಾರೆ. ಈ ಹಿಂದೆ ಸೈಕಲ್ನಲ್ಲಿ ಕೇರಳ ರಾಜ್ಯ ಸುತ್ತಿದ ಅನುಭವ ಹೊಂದಿರುವ ಇವರು, ಈಜಿಪ್ಟ್ಗೆ ಸೈಕಲ್ನಲ್ಲಿ ತೆರಳಲು ನಿರ್ಧರಿಸಿದ್ದಾರೆ. ಈಜಿಪ್ಟ್ ತೆರಳುವ ಮುನ್ನ ಮಕ್ಕಾ, ಮದೀನ ತೆರಳಲಿದ್ದಾರೆ.