ಮಂಗಳೂರು: ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲ ಎಂಬಲ್ಲಿ ಚೂರಿ ಇರಿತವಾಗಿ ಗಂಭೀರ ಸ್ಥಿತಿಯಲ್ಲಿರುವ ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದು ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.
ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿನಿ ನೃತ್ಯ ತರಬೇತುದಾರನಾದ ಸುಶಾಂತ್(22) ಎಂಬಾತ ಈ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆ ಪ್ರೇಮ ನಿರಾಕರಣೆ ಮಾಡಿರುವುದರಿಂದ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಸುಮಾರು ಆರು ವರ್ಷಗಳಿಂದ ಪರಿಚಯ ಹೊಂದಿರುವ ಈತನಿಂದ ಯುವತಿ ನೃತ್ಯ ತರಬೇತಿ ಪಡೆಯುತ್ತಿದ್ದಳು. ಆದರೆ, ಅವಳು ಕೆಲವು ದಿನಗಳಿಂದ ಸುಶಾಂತ್ ನಿಂದ ದೂರ ಇರಲು ಪ್ರಯತ್ನಿಸುತ್ತಿದ್ದಳು. ಅಲ್ಲದೇ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದ ಆಕೆ ಎಂಬಿಎ ಪದವಿಗೆ ದೂರದ ಕಾರ್ಕಳದ ಕಾಲೇಜಿಗೆ ಸೇರಿದ್ದಳು. ಆದರೆ, ಈತ ಕಾರ್ಕಳದ ಕಾಲೇಜು ಹಾಗೂ ಆಕೆಯ ಮನೆಯ ಪಕ್ಕ ಬಂದು ತೊಂದರೆ ನೀಡುತ್ತಿದ್ದ ಕಾರಣ ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ಸಹ ದಾಖಲಿಸಿದ್ದಳು.
ಪ್ರಕರಣದ ಹಿನ್ನೆಲೆ: ದೀಕ್ಷಾ ಕಾಲೇಜಿನಿಂದ ಎಂದಿನಂತೆ ಬಸ್ ನಿಂದ ಇಳಿದು ಮನೆಗೆ ಬರುತ್ತಿರುವ ವೇಳೆ ಕಾದು ಕುಳಿತು, ಹಿಂದಿನಿಂದ ಸ್ಕೂಟರ್ ನಲ್ಲಿ ಬಂದು ಸುಶಾಂತ್ ಚೂರಿಯಿಂದ ಇರಿದಿದ್ದ. ಸ್ಥಳೀಯರು ತಡೆಯಲು ಯತ್ನಿಸಿದ್ದರೂ ಆತ ಯುವತಿಗೆ ಸುಮಾರು ಹನ್ನೆರಡು ಬಾರಿ ಇರಿದಿದ್ದ. ಸುಮಾರು ಐದು ಬಾರಿ ಇರಿದಾಗಲೇ ಆಕೆ ಕುಸಿದು ಬಿದ್ದಿದ್ದು, ಬಳಿಕವೂ ಇರಿಯುತ್ತಲೇ ಇದ್ದ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ.
ಸ್ಥಳದಲ್ಲಿದ್ದ ಜನರು ಆಕೆಯನ್ನು ರಕ್ಷಿಸಲು ಯತ್ನಿಸಿದರೂ, ಯಾರನ್ನೂ ಹತ್ತಿರ ಬರದಂತೆ ಬೆದರಿಸುತ್ತಿದ್ದ. ಅಲ್ಲದೆ ತನ್ನ ಕತ್ತನ್ನು ತಾನೇ ಕುಯ್ದುಕೊಳ್ಳುತ್ತಿದ್ದ. ಬಳಿಕ ಆಕೆಯ ಮೇಲೆಯೇ ಕುಸಿದು ಬಿದ್ದಿದ್ದಾನೆ. ಈ ಸಂದರ್ಭ ಅಲ್ಲೇ ಪಕ್ಕದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆ್ಯಂಬುಲೆನ್ಸ್ ತಕ್ಷಣ ಅಲ್ಲಿಗೆ ಧಾವಿಸಿದ್ದು, ಅದರಲ್ಲಿದ್ದ ನರ್ಸ್ ಒಬ್ಬರು ಸುಶಾಂತ್ ನನ್ನು ಎಳೆದುಹಾಕಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವೆಲ್ಲ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ.
ಗಂಭೀರ ಸ್ಥಿತಿಯಲ್ಲಿರುವ ಆಕೆಗೆ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ. ಕತ್ತು ಕೊಯ್ದುಕೊಂಡಿದ್ದ ಸುಶಾಂತ್ಗೂ ಚಿಕಿತ್ಸೆ ಕೊಡಿಸಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.