ಕೋವಿಡ್-19 ಸೋಂಕು: ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಏಳು ಮಂದಿ ಅರೆಸ್ಟ್ - corona in Mangalore
ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಲಾಕ್ ಡೌನ್ ಇದ್ದರೂ, ಅಧಿಕಾರಿಗಳ ಆದೇಶ ಉಲ್ಲಂಘಿಸಿದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
![ಕೋವಿಡ್-19 ಸೋಂಕು: ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಏಳು ಮಂದಿ ಅರೆಸ್ಟ್ mangalore](https://etvbharatimages.akamaized.net/etvbharat/prod-images/768-512-6527561-thumbnail-3x2-mng.jpg)
ಮಂಗಳೂರು:ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳ ಆದೇಶ ಮತ್ತು ನಿರ್ದೇಶನಗಳನ್ನು ಹಾಗೂ 144 ಸೆಕ್ಷನ್ ಅನ್ವಯ ವಿಧಿಸಿರುವ ನಿರ್ಬಂಧಕಾಜ್ಞೆಯನ್ನು ಉಲ್ಲಂಘಿಸಿರುವುದಕ್ಕೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ಪ್ರಸ್ತುತ ನಗರದ ಪ್ರಭಾತ್ ಟಾಕೀಸ್ನಲ್ಲಿ ವಾಚ್ಮ್ಯಾನ್ ಆಗಿರುವ ಜೇಮ್ಸ್(45), ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ, ಪ್ರಸ್ತುತ ಜೀವನ ದೀಪ್ ಪಬ್ಲಿಕೇಷನ್ಲ್ಲಿರುವ ವಿಮೇಶ್(30), ಉತ್ತರ ಪ್ರದೇಶ ರಾಜ್ಯದ ಮಹದಯಾ ಬರ್ಲಾಪುರ ಮೂಲದ ಪ್ರಸ್ತುತ ಕುದ್ರೋಳಿ ಜೆ.ಎಂ. ರೋಡ್ನ ನಿವಾಸಿ ಅಮೀರ್ ಹಾಜು ಅನ್ಸಾರಿ, ರಾಜಸ್ಥಾನ ಮೂಲದ ಪ್ರಸ್ತುತ ಕುದ್ರೋಳಿ ದೇವಾಲಯದ ಮುಂಭಾಗ ನಿವಾಸಿ ಬಲರಾಮ ಚೌಧರಿ(32), ಅಸ್ಸೋಂ ರಾಜ್ಯದ ಮಜೂರಿ ಮೂಲದ ಪ್ರಸ್ತುತ ಬಂದರ್ನಲ್ಲಿರುವ ಅಜಾದಿ ಸ್ಟೀಲ್ನಲ್ಲಿ ಉದ್ಯೋಗಿಯಾಗಿರುವ ರಾಹುಲ್ ಪಾಂಡೆ(18), ಉಳ್ಳಾಲ ಇನ್ಲ್ಯಾಂಡ್ ಇಂಫಾಲದ ಸಿದ್ದೀಕ್, ತೊಕ್ಕೊಟ್ಟು ಕೃಷ್ಣ ನಗರದ ವಿನಯ್ ಬಂಧಿತ ಆರೋಪಿಗಳು.
ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರೋದರಿಂದ ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಆದರೆ ಆದೇಶವನ್ನು ಉಲ್ಲಂಘಿಸಿರೋದರಿಂದ ಕೇಂದ್ರ ಉಪ ವಿಭಾಗ ಹಾಗೂ ಪಶ್ಚಿಮ ಉಪ ವಿಭಾಗದ ಪೊಲೀಸರು ಈ ಏಳು ಮಂದಿಯನ್ನು ಬಂಧಿಸಿದ್ದಾರೆ.