ಕರ್ನಾಟಕ

karnataka

By

Published : Dec 7, 2019, 6:59 PM IST

ETV Bharat / state

ಕೆಲವು ಐಪಿಸಿ ಸೆಕ್ಷನ್‌ನ ಬದಲಾವಣೆ ಅಗತ್ಯ: ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ

ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಪೋಕ್ಸೋ ಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

Law Minister JC Madhuswamy
ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ

ಮಂಗಳೂರು :ದೊಡ್ಡಮಟ್ಟದ ಅಪರಾಧ ಪ್ರಕರಣಗಳಿಗೆ ಸಂಬಂದಿಸಿದಂತೆ ಇಂಡಿಯನ್ ಪ್ಯಾನಲ್ ಕೋಡ್‌ನಲ್ಲಿ ಕೇವಲ 1 ಸಾವಿರ ದಂಡ ಕಟ್ಟಿದರೆ ಸಾಕು ಎಂಬ ಉಲ್ಲೇಖ ಇದೆ. ಇದರಿಂದ ಬಹುತೇಕ ಪ್ರಕರಣಗಳು ದಂಡಕ್ಕೆ ಮಾತ್ರ ಸೀಮಿತವಾಗಿದ್ದು, ಅಂತಹ ಕೆಲವು ಐಪಿಸಿ ಸೆಕ್ಷನ್‌ನ ಬದಲಾವಣೆ ಅಗತ್ಯ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.

ಪೋಕ್ಸೋ ಕಾಯ್ದೆ ಕಾರ್ಯಾಗಾರ

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಅಭಿಯೋಗ ಮತ್ತು ಸರ್ಕಾರಿ ವ್ಯಾಜಗಳ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪುತ್ತೂರು ವಕೀಲರ ಸಂಘ ಹಾಗೂ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಪೋಕ್ಸೋಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

150 ನಿಮಿಷಕ್ಕೆ 1 ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುವ ಭಾರತದಲ್ಲಿ ಐಪಿಸಿ, ಸಿಆರ್‌ಪಿಸಿ ಕಾನೂನಿನ ಅಡಿಯಲ್ಲಿ ತ್ವರಿತಗತಿಯ ವಿಚಾರಣೆ ಅಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆ ಹಾಗೂ ಮಕ್ಕಳ ರಕ್ಷಣೆಗೆ ಹಾಗೂ ತ್ವರಿತಗತಿಯ ನ್ಯಾಯದಾನಕ್ಕೆ ಪೋಕ್ಸೋಕಾಯ್ದೆಯಂತಹ ಕಠಿಣ ಕಾನೂನು ಜಾರಿಗೊಳಿಸಲಾಗಿದೆ. ಈ ಸಮಾಜಕ್ಕೆ ದೇಶದ ಕಾನೂನು ಸುವ್ಯವಸ್ಥೆ, ಕೋರ್ಟ್​ಗಳ ಮೇಲೆ ನಂಬಿಕೆ ಇರದಿದ್ದಾಗ ಮಾತ್ರ ಯಾವುದೇ ಪ್ರಕರಣದ ಆರೋಪಿಗಳನ್ನು ವಿಚಾರಣೆಗೂ ಮುನ್ನ ಎನ್‌ಕೌಂಟರ್ ನಡೆಸಿದಾಗ ನ್ಯಾಯ ಸಿಕ್ಕಿದೆ ಎಂಬುದಾಗಿ ಸಂಭ್ರಮಿಸುವ ಕಾಲಘಟ್ಟಕ್ಕೆ ನಾವು ತಲುಪಿದ್ದೇವೆ . ಈ ಕಾರಣಕ್ಕಾಗಿ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡಲೂರು ಸತ್ಯನಾರಾಯಣ ಆಚಾರ್ಯ ಮಾತನಾಡಿ, ಪ್ರಪಂಚದ ಯಾವ ರಾಷ್ಟ್ರದಲ್ಲೂ ಇರದ ಹಾಗೂ ಅವರ ಯೋಜನೆಗೂ ನಿಲುಕದಂತಹ ವಿಶೇಷ ಕಾನೂನು ನ್ಯಾಯಾಂಗ ವ್ಯವಸ್ಥೆ ಭಾರತದಲ್ಲಿದೆ. ಆದರೆ ಕಾನೂನಿನ ಶಿಕ್ಷಣ ಜ್ಞಾನ ಭಾರತೀಯರಲ್ಲಿ ತೀರಾ ಕಡಿಮೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲೇ ಕಾನೂನು ಅಧ್ಯಯನ ಅಗತ್ಯವಾಗಿ ಬೇಕಾಗಿದೆ. ಯಾವ ಸಮಾಜಕ್ಕೆ ಕಾನೂನಿನ ಸ್ಪಷ್ಟ ಅರಿವಿರುತ್ತದೋ ಅಲ್ಲಿನ ಜನರು ಸಂಸ್ಕಾರಯುತ ಹಾಗೂ ಸುಭದ್ರ ಜೀವನ ನಡೆಸಲು ಸಾಧ್ಯ ಎಂದರು.

ಕಾರ್ಯಾಗಾರದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿ ಹೆಚ್.ಕೆ. ಜಗದೀಶ್, ಕಾನೂನು ವಿ.ವಿ.ಯ ಉಪಕುಲಪತಿ ಡಾ. ಪಿ. ಈಶ್ವರ್ ಭಟ್, ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ABOUT THE AUTHOR

...view details