ಕರ್ನಾಟಕ

karnataka

By

Published : Nov 16, 2022, 6:42 AM IST

ETV Bharat / state

ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿ ಪೂರ್ವಭಾವಿ ಸಭೆ: ಎಡೆಸ್ನಾನಕ್ಕೆ ಅವಕಾಶ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಎಡೆಸ್ನಾನ ಈ ಬಾರಿಯೂ ನಡೆಯಲಿದೆ. ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ‌ಸಭೆ ನಡೆಯಿತು.

Kukke Subramanya Temple
ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ನವೆಂಬರ್ 21ರಿಂದ ನಡೆಯಲಿರುವ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದಿದೆ.

ಎಡೆ ಸ್ನಾನಕ್ಕೆ ಅವಕಾಶ:ಸಭೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದ್ದ ಎಡೆಸ್ನಾನ ಸೇವೆಗೆ ಈ ಸಲ ಅವಕಾಶ ನೀಡಲಾಗಿದೆ. ಚೌತಿ, ಪಂಚಮಿ, ಷಷ್ಠಿ ದಿನದಂದು ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತಾಧಿಗಳು ಸ್ವ-ಇಚ್ಛೆಯಿಂದ ಜಿಲ್ಲಾಧಿಕಾರಿಗಳ ನಿರ್ದೇಶನ ಪಾಲಿಸಿಕೊಂಡು ಸೇವೆಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಬೀದಿ ಉರುಳು ಸೇವೆ ಮಾಡುವವರಿಗೆ ಲಕ್ಷ ದಿಪೋತ್ಸವ ದಿನದಂದು ರಾತ್ರಿ ರಥೋತ್ಸವದ ಬಳಿಕ ಸಂಜೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಬ್ರಹ್ಮರಥೋತ್ಸವಕ್ಕೆ 100 ಸೇವಾ ರಶೀದಿ:ಈ ವರ್ಷ ಬ್ರಹ್ಮರಥೋತ್ಸವ ಸೇವೆಯಲ್ಲಿ ಭಕ್ತರಿಗೆ ಗರಿಷ್ಠ 100 ಸೇವಾ ರಶೀದಿಗಳನ್ನು ನೀಡಲು ಮತ್ತು ಸೇವಾರ್ಥಿಗಳಿಗೆ ವಸತಿ, ಊಟೋಪಚಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಯಿತು. ಉಳಿದಂತೆ, ವಿವಿಐಪಿಗಳಿಗೆ ನೀಡುವ ಗುರುತಿನ ಚೀಟಿಯಲ್ಲಿ ಮೊದಲೇ ಅಂದಾಜು ಲೆಕ್ಕ ಪಡೆದು ವಿಭಾಗಿಸಿ ಅವಕಾಶ ನೀಡಲು ಸಲಹೆ ವ್ಯಕ್ತವಾಯಿತು. ಬ್ರಹ್ಮರಥ ಎಳೆಯುವಾಗ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಹಾಗೂ ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸೂಚಿಸಲಾಯಿತು.

ಜಾನುವಾರು, ಬೀದಿ ನಾಯಿಗಳ ನಿಯಂತ್ರಣ:ದೇಗುಲದಲ್ಲಿ ಅಲೆಮಾರಿ ಜಾನುವಾರು ಹಾಗೂ ಬೀದಿ ನಾಯಿಗಳ ಹಾವಳಿ ವ್ಯಾಪಕವಾಗಿರುವ ಬಗ್ಗೆ ದೂರು ವ್ಯಕ್ತವಾಯಿತು. ಜಾತ್ರಾ ಸಮಯದಲ್ಲಿ ಅನಾಹುತ ಸಂಭವಿಸುವ ಬಗ್ಗೆ ಮುನ್ನಚ್ಚರಿಕೆಯಾಗಿ ಪೂರಕ ಕ್ರಮಕ್ಕೆ ಆಗ್ರಹ ಕೇಳಿ ಬಂತು. ಅಲೆಮಾರಿ ಜಾನುವಾರುಗಳ ಸಂಖ್ಯೆಗಳ ಬಗ್ಗೆ ಪಟ್ಟಿ ಮಾಡಿ ಕೂಡಲೇ ಅವುಗಳನ್ನು ಗೋ ಶಾಲೆಗೆ ಸಾಗಿಸಲು ಸಚಿವರು ಹೇಳಿದರು.

ಪೊಲೀಸ್ ಇಲಾಖೆ, ಪಶುಸಂಗೋಪನಾ ಇಲಾಖೆ, ಸ್ಥಳೀಯಾಡಳಿತ ಒಟ್ಟಾಗಿ ಸಭೆ ನಡೆಸಿ, ಬೀದಿನಾಯಿಗಳನ್ನು ಇಲ್ಲಿಂದ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದ ಡಿಸಿ ರವಿಕುಮಾರ್ ಅವರು ಜಿಲ್ಲಾಡಳಿತದಿಂದ ವಾಹನ ಕಲ್ಪಿಸುವ ಬಗ್ಗೆ ತಿಳಿಸಿದರು.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಸಂಭ್ರಮ: ಎಡೆಸ್ನಾನ ಹರಕೆ ತೀರಿಸಿದ ಭಕ್ತರು

ಸ್ವಚ್ಚತೆ, ಕುಡಿಯುವ ನೀರಿಗೆ ಆದ್ಯತೆ:ಚಂಪಾ ಷಷ್ಠಿ ಮಹೋತ್ಸವ ಸುಸೂತ್ರವಾಗಿ ನಡೆಯಲು ಎಲ್ಲರ ಸಹಕಾರ ಬೇಕು ಎಂದು ಜಿಲ್ಲಾಧಿಕಾರಿ ಕೋರಿದರು. ಜನತೆಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಎಲ್ಲೆಲ್ಲಿ ನೀರಿನ ವ್ಯವಸ್ಥೆ ಬೇಕೋ ಅಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಕಲ್ಪಿಸುವಂತೆಯೂ ನಿರ್ದೇಶನ ನೀಡಿದರು.

ಸಂಚಾರಿ ಹಾಗೂ ತಾತ್ಕಾಲಿಕ ಆಸ್ಪತ್ರೆ:ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಭಕ್ತಾಧಿಗಳಿಗೆ ಸೇವೆ ನೀಡಲು ದೇವಸ್ಥಾನದ ಬಳಿ ತಾತ್ಕಾಲಿಕ ಹಾಗೂ ಸಂಚಾರಿ ಆಸ್ಪತ್ರೆ ತೆರೆಯಲಾಗುವುದು ಎಂದು ವೈದಾಧಿಕಾರಿಗಳು ಮಾಹಿತಿ ನೀಡಿದರು. ಈ ಸಮಯದಲ್ಲಿ ವೈದ್ಯರು, ಸಿಬ್ಬಂದಿ ಸದಾ ಕರ್ತವ್ಯದಲ್ಲಿರುವಂತೆ ಹಾಗೂ ಎಲ್ಲಾ ಸಮಯದಲ್ಲೂ ಔಷಧಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪೇಟೆಯಲ್ಲಿ ಸೂಕ್ತ ರೀತಿಯಲ್ಲಿ ಬೀದಿ ದೀಪ, ವಿಶೇಷ ಬಸ್ ವ್ಯವಸ್ಥೆ, ಕುಡಿಯುವ ನೀರು, ಪಾರ್ಕಿಂಗ್, ಒಳಚರಂಡಿ ದುರಸ್ತಿ ಹಾಗೂ ಜಾತ್ರಾ ವೇಳೆ ರಸ್ತೆ ಬದಿಯ ತಾತ್ಕಾಲಿಕ ಅಂಗಡಿಗಳನ್ನು ತೆರೆವು ಮಾಡುವಂತೆ ತಿಳಿಸಲಾಗಿದೆ.

ಸಹಾಯಕ ಆಯುಕ್ತ ಗಿರೀಶ್ ನಂದನ್ ಸೇರಿದಂತೆ ಇತರರು ಸಭೆಯಲ್ಲಿದ್ದರು.

ಇದನ್ನೂ ಓದಿ:ಕುಕ್ಕೆಯಲ್ಲಿ ವಾರ್ಷಿಕ ಜಾತ್ರಾ ಉತ್ಸವಾಧಿಗಳಿಗೆ ಸಿದ್ಧತೆ

ABOUT THE AUTHOR

...view details