ಬಂಟ್ವಾಳ:ಸಾಮಾನ್ಯವಾಗಿ ಕಿಂಡಿ ಅಣೆಕಟ್ಟುಗಳನ್ನು ಕೇವಲ ಜಲಸಮೃದ್ಧಿಗೆ ಅಂದರೆ ಅಂತರ್ಜಲ ವೃದ್ಧಿಗೆ ಹಾಗೂ ಸ್ಥಳೀಯ ಕೃಷಿ ಅಗತ್ಯಗಳಿಗೆ ನೀರಿನ ಸೆಲೆಯನ್ನು ಕ್ರೋಢೀಕರಿಸುವ ಸಲುವಾಗಿ ನಿರ್ಮಿಸಲಾಗುತ್ತದೆ. ಆದರೆ, ಬ್ರಿಡ್ಜ್ ಕಂ ಬ್ಯಾರೇಜ್ ಹಾಗಲ್ಲ. ಇದರಿಂದ ಜಲಸಮೃದ್ಧಿಯಷ್ಟೇ ಅಲ್ಲ, ಎರಡು ಗ್ರಾಮ, ಸಂಪರ್ಕವೇ ಅಸಾಧ್ಯವಾಗಿರುವ ಎರಡು ಪ್ರದೇಶಗಳನ್ನು ಬೆಸೆಯುವ ಕಾರ್ಯವನ್ನೂ ಮಾಡಲಾಗುತ್ತದೆ.
ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಕೃಷ್ಣಾಪುರ, ಸಜಿಪಮೂಡ ಗ್ರಾಮದ ಕಲ್ಲಗುಂಡಿ, ಸಂಗಬೆಟ್ಟು ಅಂಗರಕುಮೇರು, ಕುಕ್ಕಿಪ್ಪಾಡಿ ಗ್ರಾಮದ ಈಜಪಲ, ರಾಯಿ ಗ್ರಾಮದ ಸಾಲುಕೋಡಿ, ಕರೋಪಾಡಿ ಗ್ರಾಮದ ಪಾಲಿಗೆ, ಮಣಿನಾಲ್ಕೂರು ಗ್ರಾಮದ ಅಡ್ಡತಡ್ಕ, ಸಜಿಪಮುನ್ನೂರು ಗ್ರಾಮದ ಶಂಕರಲಚ್ಚಿಲ ಮಂಜಲ್ಪಾದೆ, ಅಜ್ಜಿಬೆಟ್ಟು ಗ್ರಾಮದಲ್ಲಿ ಇಂಥ ಬ್ರಿಡ್ಜ್ ಕಂ ಬ್ಯಾರೇಜ್ಗಳಿವೆ.
ಜಲಸಂರಕ್ಷಣೆಗೆ ನೆರವು:ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಉಳಿಯತ್ತಡ್ಕ, ಕೊಳ್ನಾಡು ಗ್ರಾಮದ ನೆಕ್ಕರೆಕಾಡಗಳಲ್ಲಿ ದೊಡ್ಡ ಪ್ರಮಾಣದ ಕಿಂಡಿ ಅಣೆಕಟ್ಟುಗಳು ಕಾರ್ಯಾಚರಿಸುತ್ತಿದ್ದರೆ, ಮಾರ್ನಬೈಲ್ ನಿಂದ ಪಣೋಲಿಬೈಲ್ ರಸ್ತೆಯಲ್ಲಿ ಸಾಗಿ ಎಡಕ್ಕೆ ಚಲಿಸಿದಾಗ ಎದುರಾಗುತ್ತಿದ್ದ ತೋಡಿಗೆ ನಿರ್ಮಿಸಲಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಗ್ರಾಮಗಳನ್ನೇ ಸಂಪರ್ಕಿಸುತ್ತದೆ.
2019-20ರಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಶಾಸಕರ ಪ್ರದೇಶಾಭಿವೃದ್ಧಿ ವಿಶೇಷ ಘಟಕ ಯೋಜನೆಯಡಿ ನಿರ್ಮಾಣಗೊಂಡ 1 ಕೋಟಿ ರೂ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಇದು. ಇದು ಸುಮಾರು 27.10 ಮೀಟರ್ ಅಗಲದ ತೋಡಿಗೆ ನಿರ್ಮಿಸಲಾಗಿದ್ದು, 3.25 ಮೀಟರ್ ಎತ್ತರದಲ್ಲಿ ಪಿಲ್ಲರ್ ಗಳನ್ನು ಹಾಕಲಾಗಿದೆ. 3 ಮೀಟರ್ ಡೆಕ್ ಸ್ಲ್ಯಾಬ್ ಅದರ ಮೇಲ್ಭಾಗದಲ್ಲಿದ್ದು, ಫೈಬರ್ ತಂತ್ರಜ್ಞಾನದ (ಎಫ್.ಆರ್.ಸಿ.) ಹಲಗೆಯನ್ನು ಅಳವಡಿಸಲಾಗಿದೆ.