ಕರ್ನಾಟಕ

karnataka

ಫುಟ್ಬಾಲ್, ಕ್ರಿಕೆಟ್, ದೇವರ ಸೇವೆ ಎಲ್ಲದಕ್ಕೂ ಸೈ ಅಂತಾಳೆ ಮಹಾಲಕ್ಷ್ಮಿ: ಪೈಪ್ ಹಿಡಿದು ನಿಂತರೆ ಅರ್ಧ ಗಂಟೆ ಸ್ನಾನ!

By

Published : Mar 21, 2023, 1:49 PM IST

Updated : Mar 21, 2023, 2:32 PM IST

ಕಟೀಲು ದೇವಳದ ಆನೆ ಮಹಾಲಕ್ಷ್ಮೀ ಪೈಪ್​ ಹಿಡಿದು ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗುತ್ತಿದೆ.

Elephant Mahalakshmi is taking bath
ಸ್ನಾನ ಮಾಡುತ್ತಿರುವ ಆನೆ ಮಹಾಲಕ್ಷ್ಮಿ

ಫುಟ್ಬಾಲ್, ಕ್ರಿಕೆಟ್, ದೇವರ ಸೇವೆ ಎಲ್ಲದಕ್ಕೂ ಸೈ ಅಂತಾಳೆ ಮಹಾಲಕ್ಷ್ಮಿ

ಮಂಗಳೂರು:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ಮಹಾಲಕ್ಷ್ಮಿ ಎಂಬ ಆನೆ ಇತ್ತೀಚೆಗೆ ವಿವಿಧ ವಿಚಾರಗಳಲ್ಲಿ ಮೆಚ್ಚುಗೆಗೆ ಪಾತ್ರಳಾಗುತ್ತಿದ್ದಾಳೆ. ಫುಟ್​ಬಾಲ್ ಅಂದರೆ ಇಷ್ಟಪಡುವ, ಕ್ರಿಕೆಟ್ ಅಂದರೆ ತುಸು ಹೆಚ್ಚೇ ಪ್ರೀತಿಸುವ ಈ ಆನೆ ಸ್ನಾನಕ್ಕಿಳಿದರೆ ಅರ್ಧ ಗಂಟೆ ನೀರಲ್ಲೇ ಕಾಲ ಕಳೆಯುತ್ತದೆ. ಗಂಟೆ ಬಡಿದು ದೇವರ ಧ್ಯಾನ ಮಾಡುವ ಆನೆ ಎಲ್ಲರಿಗೂ ಅಚ್ಚುಮೆಚ್ಚು. ಕಟೀಲು ಪರಿಸರದಲ್ಲಿ ಇದೀಗ ಮಹಾಲಕ್ಷ್ಮಿಯದ್ದೇ ಮಾತು.

ಇದು ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನದ ಹೆಣ್ಣಾನೆಯ ಕಥೆ. ಕಳೆದ 3 ದಶಕಗಳಿಂದ ಕಟೀಲು ದೇವಳದಲ್ಲಿ ಅಶ್ರಯ ಪಡೆದ ಮಹಾಲಕ್ಷ್ಮಿಗೆ ಈಗ 36ರ ಹರೆಯ. ಪ್ರತೀ ದಿನ ಆಟ, ತುಂಟಾಟದಲ್ಲಿ ಕಾಲ ಕಳೆಯುವ ಮಹಾಲಕ್ಷ್ಮಿ ಕಳೆದ ಕೆಲ ತಿಂಗಳುಗಳಿಂದ ಫುಟ್​ಬಾಲ್, ಕ್ರಿಕೆಟ್ ಆಟಗಳನ್ನು ಆಡುತ್ತಿದ್ದಾಳೆ. ಸ್ವತಃ ಸ್ನಾನವನ್ನೂ ಮಾಡುತ್ತಾಳೆ.

ಹೆಚ್ಚಿನ ಎಲ್ಲಾ ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವಂತೆ ಕಟೀಲು ದೇವಳದಲ್ಲಿಯೂ ಆನೆ ಸಾಕಲಾಗುತ್ತಿದೆ. ಕಟೀಲು ದೇವಳದಲ್ಲಿ ಈ ಹಿಂದೆ ನಾಗರಾಜ ಎಂಬ ಗಂಡಾನೆ ಇತ್ತು. ಈ ಆನೆಯ ಸಾವಿನ ನಂತರ 1994ರಲ್ಲಿ ಹೆಣ್ಣು ಮರಿಯಾನೆಯನ್ನು ತಂದು ಅದಕ್ಕೆ ಮಹಾಲಕ್ಷ್ಮಿ ಎಂದು ಹೆಸರಿಡಲಾಗಿತ್ತು. ಇದೀಗ ಕಳೆದ 8 ತಿಂಗಳಿಂದ ಬಂದ ಮೂರು ಮಾವುತರಾದ ಫೈರೋಜ್, ಅಲ್ತಾಪ್ ಮತ್ತು ಮುಜಾಹಿದ್ ಆನೆಗೆ ಪ್ರತೀ ದಿನ ಆಟವನ್ನು ಕಲಿಸುತ್ತಿದ್ದಾರೆ.

ಪೈಪ್​ ಹಿಡಿದು ಸ್ನಾನ: ಫುಟ್​ಬಾಲ್, ಕ್ರಿಕೆಟ್ ಆಟಗಳನ್ನು ಸದ್ಯಕ್ಕೆ ಕಲಿಸಲಾಗಿದ್ದು, ಆನೆಯೂ ಖುಷಿಯಿಂದ ಆಟ ಆಡುತ್ತಿದೆ. ಪ್ರತಿನಿತ್ಯ ಒಂದೆರಡು ಗಂಟೆ ಆನೆಗೆ ಅಭ್ಯಾಸವನ್ನು ನಡೆಸಲಾಗುತ್ತಿದೆ. ಅಲ್ಲದೇ ಪೈಪ್ ಮೂಲಕ ನೀರು ಕೊಟ್ಟರೆ ಪೈಪ್ ಹಿಡಿದು ಮಹಾಲಕ್ಷ್ಮಿಯೇ ಸ್ನಾನಕ್ಕಿಳಿಯುತ್ತಾಳೆ. ಪೈಪ್ ಮತ್ತು ಸೊಂಡಿಲ ಮೂಲಕ ತನ್ನ ಬೆನ್ನು, ಮೈ ಕೈಗೆ ನೀರು ಹಾಕಿ ಸ್ನಾನ ಮಾಡುತ್ತದೆ. ಅಲ್ಲದೆ ಪ್ರತೀ ದಿನ ದೇವಸ್ಥಾನಕ್ಕೆ ಬಂದು ಗಂಟೆ ಬಡಿದು ನಮಸ್ಕಾರ ಮಾಡಿ ಹೋಗುತ್ತದೆ.

ಮಹಾಲಕ್ಷ್ಮಿಯ ದಿನಚರಿ..: ಪ್ರತೀ ದಿನ ಬೆಳಗ್ಗೆ 7 ಗಂಟೆಗೆ ಆನೆ ಲಾಯ ಸ್ವಚ್ಛ ಮಾಡಿ 9 ಗಂಟೆಗೆ ಆನೆಗೆ ಸ್ನಾನ ಮಾಡಿಸಲಾಗುತ್ತದೆ. 10.30ಕ್ಕೆ ಬೈಹುಲ್ಲು, ಬೆಳ್ತಿಗೆ ಅಕ್ಕಿ, ಬೆಲ್ಲ, ಬಾಳೆ ಹಣ್ಣು, ಬೀಟ್ ರೋಟ್, ಸೌತೆಕಾಯಿಯನ್ನು ಆಹಾರದ ರೂಪದಲ್ಲಿ ಕೊಡಲಾಗುತ್ತದೆ. ಮಧ್ಯಾಹ್ನ 1.30 ಕ್ಕೆ ಬೇಳೆಕಾಳಿನ ಮುದ್ದೆ, 2.45 ಕ್ಕೆ ಸೊಪ್ಪು ನೀಡಲಾಗುತ್ತದೆ. 3.30ರಿಂದ 6.30ರವರೆಗೆ ಆನೆಗೆ ವಿಶ್ರಾಂತಿ.

ರಾತ್ರಿ ಬೈಹುಲ್ಲು, ಬಾಳೆ ಹಣ್ಣು ನಂತರ ಸೊಪ್ಪು ನೀಡಲಾಗುತ್ತದೆ. ಹೀಗೆ ದಿನಕ್ಕೆ ಸರಿಸುಮಾರು 250 ಕಿಲೋ ನಷ್ಟು ಆಹಾರ ಆನೆಗೆ ಬೇಕು. 6 ತಿಂಗಳಿಗೊಂದು ಸಲ ಆನೆಯ ಆರೋಗ್ಯ ತಪಾಸಣೆಗೆ ಸಕ್ರೆಬೈಲಿನಿಂದ ವೈದ್ಯರು ಆಗಮಿಸಿದರೆ, ತಿಂಗಳಿಗೊಮ್ಮೆ ಸ್ಥಳೀಯ ಪಶುವೈದ್ಯರು ಬಂದು ತಪಾಸಣೆ ಮಾಡುತ್ತಾರೆ. ಶಿವಮೊಗ್ಗದ ಸಕ್ರೆಬೈಲಿನಿಂದ ಬಂದ ಮೂವರು ಮಾವುತರು ಆನೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು, ಬೇಕುಬೇಕಾದವುಗಳನ್ನು ನೀಡುತ್ತಾರೆ. ಸಕ್ರೆಬೈಲಿನಲ್ಲಿ ಆನೆ ಪಳಗಿಸುವ ವಿದ್ಯೆಯನ್ನು ಇವರು ಬಾಲ್ಯದಿಂದಲೇ ಕಲಿತಿದ್ದು, ಕಟೀಲಿನ ಆನೆಗೂ ಕಲಿಸುತ್ತಿದ್ದಾರೆ.

ಇದನ್ನೂ ಓದಿ:ಶ್ರೀರಂಗಂ ರಂಗನಾಥ ದೇವಾಲಯದಲ್ಲಿನ ಭಕ್ತರಿಂದ ಆನೆಗೆ ಹುಟ್ಟುಹಬ್ಬ ಆಚರಣೆ

Last Updated : Mar 21, 2023, 2:32 PM IST

ABOUT THE AUTHOR

...view details