ಕಾಸರಗೋಡು:ಮಲಯಾಳಿ ದಂತ ವೈದ್ಯರೊಬ್ಬರು ಕರ್ನಾಟಕದ ಕುಂದಾಪುರ ಎಂಬಲ್ಲಿ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ತನ್ನ ಕ್ಲಿನಿಕ್ಗೆ ಚಿಕಿತ್ಸೆಗಾಗಿ ಬಂದಿದ್ದ ಯುವತಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಈ ವೈದ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ವೈದ್ಯರ ಶವ ಪತ್ತೆಯಾಗಿರುವುದು ಸಂಶಯಗಳಿಗೆ ಕಾರಣವಾಗಿದೆ.
ಮೃತರನ್ನು ಎಸ್. ಕೃಷ್ಣಮೂರ್ತಿ (52) ಎಂದು ಗುರುತಿಸಲಾಗಿದ್ದು, ಇವರು ಕಾಸರಗೋಡು ಜಿಲ್ಲೆ ಬದಿಯಡ್ಕ ನಿವಾಸಿಯಾಗಿದ್ದಾರೆ. ದಂತವೈದ್ಯರ ವಿರುದ್ಧ ಮಹಿಳೆಯ ಆರೋಪದ ನಂತರ, ಮಹಿಳೆಯ ಸಂಬಂಧಿಕರು ಕ್ಲಿನಿಕ್ಗೆ ಬಂದು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದರು.
ನವೆಂಬರ್ 8 ರಂದು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೈದ್ಯರು ತಮ್ಮ ಮೊಬೈಲ್ ಫೋನ್ ತೆಗೆದುಕೊಳ್ಳದೆ ಮಧ್ಯಾಹ್ನ ಕ್ಲಿನಿಕ್ನಿಂದ ಹೊರಟ ನಂತರ ಅವರು ಯಾರೊಂದಿಗೂ ಸಂಪರ್ಕಕ್ಕೆ ಬಂದಿಲ್ಲ. ನಂತರ ಅವರ ಬೈಕ್ ಕುಂಬಳೆಯಲ್ಲಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.