ಮಂಗಳೂರು: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಸಮರ ಮುಂದುವರೆದಿದೆ. ಈಗಾಗಲೇ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಇಸ್ರೇಲ್ನಲ್ಲಿ ನೆಲೆಸಿರುವ ಭಾರತೀಯರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ. ಅಲ್ಲಿನ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ. ರಾಕೆಟ್ ದಾಳಿ ನಡೆಯುತ್ತಿದ್ದು ಹೊರಗಡೆ ತೆರಳದಂತೆ ಹೇಳಲಾಗಿದ್ದು, ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸಲಹೆ ನೀಡಲಾಗಿದೆ.
ಉದ್ಯೋಗ ನಿಮಿತ್ತ ಸಾವಿರಾರು ಭಾರತೀಯರು ಇಸ್ರೇಲ್ನಲ್ಲಿ ನೆಲೆಸಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳಿಂದಲೂ ಸಾಕಷ್ಟು ಮಂದಿ ವಿವಿಧ ಕೆಲಸದ ಕಾರಣಕ್ಕೆ ಇಸ್ರೇಲಿನಲ್ಲಿ ಬದುಕು ಕಂಡುಕೊಂಡಿದ್ದಾರೆ. ಇದೀಗ ಭೀಕರ ಯುದ್ಧ ನಡೆಯುತ್ತಿರುವುದರಿಂದ ಅವರ ಕುಟುಂಬಸ್ಥರಿಗೆ ಆತಂಕ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಹೋಮ್ ನರ್ಸ್ ಆಗಿ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ಯುದ್ಧಪೀಡಿತ ಪ್ರದೇಶದ ಸುತ್ತಮುತ್ತಲಿದ್ದರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಪುರುಷರು, ಮಹಿಳೆಯರು ಸಮಾನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ 16 ವರ್ಷಗಳಿಂದ ಟಲ್ ಅವೀವ್ನಲ್ಲಿ ಮಂಗಳೂರಿನ ದಾಮಸ್ ಕಟ್ಟೆಯ ನಿವಾಸಿಯಾಗಿರುವ ಪ್ರವೀಣ್ ಪಿಂಟೋ ಕುಟುಂಬ ವಾಸಿಸುತ್ತಿದೆ. ಅದೇ ರೀತಿ ಲೆನಾರ್ಡ್ ಫರ್ನಾಂಡೀಸ್ ಅವರು ಕಳೆದ 14 ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದಾರೆ. ದೂರವಾಣಿ ಮೂಲಕ ಇವರುಗಳ ಸುರಕ್ಷತೆಯ ಬಗ್ಗೆ ಕುಟುಂಬ ವಿಚಾರಣೆ ನಡೆಸುತ್ತಲೇ ಇದೆ. ಈ ಇಬ್ಬರೂ ಬಂಕರ್ಗಳಲ್ಲಿ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಮನೆಯಿಂದ ಹೊರಬಾರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.