ಮಂಗಳೂರು:ವಿಶ್ವಹಿಂದೂ ಪರಿಷತ್ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜನೆಗೊಂಡಿದೆ.
ವಿಶ್ವಹಿಂದು ಪರಿಷತ್ನ ಅಂತಾರಾಷ್ಟ್ರೀಯ ಸಭೆ ಮಂಗಳೂರಿನ ಸಂಘ ನಿಕೇತನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾರತದ ಎಲ್ಲ ರಾಜ್ಯಗಳಿಂದ ಹಾಗೂ ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ, ಮಲೇಶಿಯಾ, ಇಟಲಿ, ಥಾಯ್ಲೆಂಡ್, ಸೌತ್ ಆಫ್ರಿಕಾ, ಬಾಂಗ್ಲಾದೇಶ ಮುಂತಾದ 32 ದೇಶಗಳ 350ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಅಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹಕ ಭಯ್ಯಾಜಿ ಜೋಶಿ, ವಿಶ್ವಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ, ವಿಶ್ವಹಿಂದು ಪರಿಷತ್ನ ಅಂತರ್ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ವಿಶ್ವಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ವಿಶ್ವಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಚಂಪತ್ ರಾಯ್ ಮುಂತಾದ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಬೈಠಕ್ ನಲ್ಲಿ ದೇಶದ ಪ್ರಮುಖ ಪ್ರಸ್ತುತ ವಿಷಯಗಳಾದ ರಾಮ ಮಂದಿರ ನಿರ್ಮಾಣ, ಎನ್ಆರ್ಸಿ, ಸಿಎಎ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಗೋಸಂರಕ್ಷಣೆ, ಮತಾಂತರ, ಘರ್ ವಾಪಸಿ, ಸ್ತ್ರೀಯರ ಮೇಲಿನ ದೌರ್ಜನ್ಯಗಳ ಕುರಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನೇಕ ಪ್ರಮುಖರು ಸೇರಿ ಚರ್ಚೆ ನಡೆಸಲಿದ್ದಾರೆ.
ಈ ಕಾರ್ಯಕ್ರಮದ ಆತಿಥ್ಯವನ್ನು ವಿಎಚ್ಪಿ ಕರ್ನಾಟಕ ಹಾಗೂ ಮಂಗಳೂರು ವಿಭಾಗ ವಹಿಸಿಕೊಳ್ಳಲಿದ್ದು, ಆರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಗಳ ಪ್ರತಿನಿಧಿಗಳ ಭತ್ಯೆ, ವಸತಿ, ಊಟೋಪಚಾರ ಸೇರಿದಂತೆ ಸುಮಾರು 60 ಲಕ್ಷ ರೂ. ವೆಚ್ಚ ತಗುಲಲಿದೆ.