ಪುತ್ತೂರು: ಪುತ್ತೂರಿನಲ್ಲಿ ಕಳೆದ 4 ವರ್ಷಗಳಿಂದ ಬಡವರಿಗೆ ಪ್ರಯೋಜನಕಾರಿಯಾಗಿದ್ದ 'ಇಂದಿರಾ ಕ್ಯಾಂಟೀನ್' ಬುಧವಾರ ಬಂದ್ ಆಗಿದೆ. ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೇ ಬಂದ್ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ 2019ನೇ ಮಾರ್ಚ್ 1ರಂದು ಪುತ್ತೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡು ಕಾರ್ಯಾರಂಭಿಸುತ್ತಿತ್ತು. ಇಲ್ಲಿ ಅಡುಗೆಯವರು, ಕ್ಲೀನರ್ ಮತ್ತು ಸಫ್ಲಾಯರ್ ಸೇರಿ ಒಟ್ಟು 4 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 6 ತಿಂಗಳಿನಿಂದ ನಮಗೆ ವೇತನ ಪಾವತಿಯಾಗಿಲ್ಲ. ಹಾಗಾಗಿ ನಾವು ಬುಧವಾರದಿಂದ ಇಂದಿರಾ ಕ್ಯಾಂಟೀನ್ ಬಂದ್ ಮಾಡುತ್ತೇವೆ ಎಂಬ ಮಾಹಿತಿಯನ್ನು ಅಲ್ಲಿನ ಸಿಬ್ಬಂದಿ ಪುತ್ತೂರಿನ ಇಂದಿರಾ ಕ್ಯಾಂಟೀನ್ ಮೇಲುಸ್ತುವಾರಿ ಜವಾಬ್ದಾರಿ ಹೊಂದಿರುವ ಪುತ್ತೂರು ನಗರಸಭೆಯ ಅಧಿಕಾರಿಗಳಿಗೆ ತಿಳಿಸಿ, ಬುಧವಾರ ಇಂದಿರಾ ಕ್ಯಾಂಟೀನ್ ಬಂದ್ ಮಾಡಿ ತೆರಳಿದ್ದಾರೆ.
ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಅಳಲು: ಇದರಿಂದಾಗಿ ಇಂದಿರಾ ಕ್ಯಾಂಟೀನ್ ಆಶ್ರಯಿಸಿಕೊಂಡಿದ್ದ ಬಡಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ನಮಗೆ ವೇತನವೇ ಬಂದಿಲ್ಲ. ಇಷ್ಟರತನಕ ಹೇಗಾದರೂ ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಇನ್ನು ಮುಂದೆ ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಅಳಲು ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗ್ಗೆ 500 ಮಂದಿಗೆ ಉಪಹಾರ, ಮಧ್ಯಾಹ್ನ 500 ಮಂದಿಗೆ ಊಟ ಹಾಗೂ ರಾತ್ರಿ 150ರಷ್ಟು ಮಂದಿಗೆ ಊಟದ ವ್ಯವಸ್ಥೆ ಇತ್ತು. ಸಾರ್ವಜನಿಕರು ಮಾತ್ರವಲ್ಲದೇ ಹೆಚ್ಚಾಗಿ ಇಂದಿರಾ ಕ್ಯಾಂಟೀನ್ ಬಳಿಯೇ ಇರುವ ಸರ್ಕಾರಿ ಆಸ್ಪತ್ರೆಗೆ ಬರುವವರು ಉಪಹಾರ ಮತ್ತು ಊಟದ ಪ್ರಯೋಜನ ಪಡೆಯುತ್ತಿದ್ದರು.