ಪುತ್ತೂರು: ದ.ಕ ಜಿಲ್ಲೆ ಆಯುಷ್ ಇಲಾಖೆ ವತಿಯಿಂದ ಜನಪ್ರತಿನಿಧಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಮಾತ್ರೆಗಳನ್ನು ವಿತರಿಸಲಾಯಿತು.
ಪುತ್ತೂರು ತಾ.ಪಂ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿ.ಪಂ ಮತ್ತು ತಾ.ಪಂ ಸದಸ್ಯರು ಹಾಗೂ ಸಿಬ್ಬಂದಿಗೆ ಸಾಂಕೇತಿಕವಾಗಿ ಮಾತ್ರೆಗಳನ್ನು ವಿತರಿಸಿ ಮಾತನಾಡಿದ ಅವರು, ನಾವು ಹಲವಾರು ಕಾಯಿಲೆಗಳನ್ನು ನೋಡಿದ್ದೇವೆ. ಅದಕ್ಕೆಲ್ಲ ಮದ್ದು ಇದೆ. ಆದರೆ ಕೊರೊನಾ ಮದ್ದು ಇಲ್ಲದ ಕಾಯಿಲೆ. ಇದು ವೈದ್ಯ ಲೋಕಕ್ಕೆ ಸವಾಲಾದ ಕಾಯಿಲೆ. ಕೊರೊನಾದಿಂದ ಜನ ಭಯದಲ್ಲಿ ಬದುಕುತ್ತಿದ್ದು, ಈ ಸಂದರ್ಭದಲ್ಲಿ ಕಾಯಿಲೆಯನ್ನು ಎದುರಿಸಲು ಮುಂಜಾಗ್ರತೆಯಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಯನ್ನು ಆಯುಷ್ ಇಲಾಖೆ ಸಾರ್ವಜನಿಕವಾಗಿ ಕೆಲಸ ಮಾಡುವ ಜನಪ್ರತಿನಿಧಿಗಳಿಗೆ, ತಾ.ಪಂ ಮತ್ತು ಗ್ರಾ.ಪಂ ಸಿಬ್ಬಂದಿಗೆ ವಿತರಿಸುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವುದು ಅಗತ್ಯ ಎಂದರು.
ಪ್ರತಿಯೊಬ್ಬರಿಗೆ 9 ಮಾತ್ರೆಗಳನ್ನು ನೀಡಲಾಗುತ್ತದೆ. ಇದನ್ನು ತಿಂಗಳಿಗೆ 3ರಂತೆ 3 ತಿಂಗಳು ಸೇವಿಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಾತ್ರೆಯನ್ನು ಸೇವಿಸಬೇಕು. ಮಾತ್ರೆ ಸೇವಿಸಿ ಅರ್ಧ ಗಂಟೆಯ ಬಳಿಕ ಆಹಾರ ತೆಗೆದುಕೊಳ್ಳಬೇಕು ಎಂದು ಆಯಷ್ ಇಲಾಖೆ ಆಧಿಕಾರಿ ಸಹನಾ ಮಾಹಿತಿ ನೀಡಿದರು.