ಬಂಟ್ವಾಳ: ವಿಟ್ಲದ ಕಾನತ್ತಡ್ಕದ ಮನೆಯೊಂದರಲ್ಲಿ ಒಂಟಿ ಮಹಿಳೆ ಇದ್ದಿದ್ದನ್ನು ಮನಗಂಡ ಖದೀಮನೊಬ್ಬ ಹಾಡಹಗಲೇ ನುಗ್ಗಿ ಆಕೆಯ ಕೈ ಕಟ್ಟಿ ಹಾಕಿ, ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಾನತ್ತಡ್ಕದ ಬಾಡಿಗೆ ಮನೆಯಲ್ಲಿ ಆಟೋ ಚಾಲಕ ರಫೀಕ್ ವಾಸ ಮಾಡುತ್ತಿದ್ದು, ತನ್ನ 10 ವರ್ಷದ ಮಗನ ಜತೆಗೆ ಶುಕ್ರವಾರದ ಪ್ರಾರ್ಥನೆಗೆಂದು ಮನೆಯ ಮುಂಭಾಗದಲ್ಲಿರುವ ಜುಮಾ ಮಸೀದಿಗೆ ತೆರಳಿದ್ದರು. ಪತ್ನಿ ಜೈನಾಬ ಒಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡಿರುವ ವ್ಯಕ್ತಿಯೊಬ್ಬ ಮನೆಯೊಳಗಡೆ ನುಗ್ಗಿ ಹಿಂದಿನಿಂದ ಬಂದು ಮಹಿಳೆಯ ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಒಂದು ಜತೆ ಕಿವಿಯೋಲೆ, ಉಂಗುರ ಹಾಗೂ ಚೈನ್ ಕಿತ್ತುಕೊಂಡು ಮುಂಬಾಗಿಲಿಗೆ ಚಿಲಕ ಹಾಕಿ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.