ಕರ್ನಾಟಕ

karnataka

ಸಾರ್ವಜನಿಕರಿಗೆ ಕಿರಿಕಿರಿ: ಕುದುರೆಸಮೇತ ಪೊಲೀಸ್‌ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಟ್ಟ ಮಾಲೀಕ

By

Published : Jul 3, 2023, 10:36 AM IST

Updated : Jul 3, 2023, 12:49 PM IST

ಕುದುರೆ ಮಾಲೀಕ ಉಡಾಫೆ ಉತ್ತರ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಕಡಬ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

Horse is tied
ಕುದುರೆಯನ್ನು ಕಟ್ಟಿ ಹಾಕಿರುವುದು

ಕುದುರೆಯನ್ನು ಕಟ್ಟಿ ಹಾಕಿದ ಸಾಮಾಜಿಕ ಕಾರ್ಯಕರ್ತ

ಕಡಬ (ದಕ್ಷಿಣ ಕನ್ನಡ): ಮುಖ್ಯ ರಸ್ತೆಗಳಲ್ಲಿ ಅಲೆದಾಡುತ್ತಾ ಕುದುರೆಯೊಂದು ವಾಹನ ಸವಾರರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕುದುರೆಯನ್ನು ಕಟ್ಟಿ ಹಾಕಿ ಠಾಣೆಗೆ ದೂರು ನೀಡಿದ್ದರು. ನಂತರ ಯಜಮಾನ ಠಾಣೆಗೆ ಬಂದು ಮುಂದೆ ತಪ್ಪಾಗದಂತೆ ಮುಚ್ಚಳಿಕೆ ಬರೆದುಕೊಟ್ಟು ಕುದುರೆಯೊಂದಿಗೆ ಹೊರಟು ಹೋದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಭಾನುವಾರ ನಡೆಯಿತು.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಲೆಕ್ಕಾಡಿಯ ವ್ಯಕ್ತಿಯೊಬ್ಬರಿಗೆ ಸೇರಿರುವ ಕುದುರೆ ಯಜಮಾನನ ಅಸಡ್ಡೆಯಿಂದ ಹಲವು ದಿನಗಳಿಂದ ಪ್ರಮುಖ ರಸ್ತೆಯಲ್ಲೇ ತಿರುಗಾಡುತ್ತಿತ್ತು. ಆಹಾರ ಅರಸುತ್ತಾ ರಸ್ತೆಯಲ್ಲಿ ಸಂಚರಿಸುವಾಗ ಹಲವಾರು ಬೈಕ್ ಸವಾರರೂ ಅಪಘಾತಕ್ಕೊಳಗಾದ ಘಟನೆಗಳೂ ನಡೆದಿವೆ. ಭಾನುವಾರ ರಸ್ತೆ ಬದಿಯಲ್ಲಿ ತೊಂದರೆ ಕೊಡುತ್ತಿದ್ದಂತೆ ಕುದುರೆಯನ್ನು ವಾಹನ ಸವಾರರೊಬ್ಬರು ಬದಿಗೆ ಓಡಿಸಿದ್ದಾರೆ. ಈ ವೇಳೆ ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಎಂಬವರಿಗೆ ಸೇರಿದ ಕೃಷಿ ತೊಟ್ಟಕ್ಕೆ ಬಂದು ಹೈನುಗಾರಿಕೆ ಸಲುವಾಗಿ ನೆಟ್ಟ ಹಸಿರು ಹುಲ್ಲು ನಾಶಪಡಿಸಿದೆ. ತೋಟದ ಪೈಪ್‌ಗೂ ಹಾನಿ ಮಾಡಿದೆ.

ಹೀಗಾಗಿ ಇನ್ನಷ್ಟು ಸಾರ್ವಜನಿಕರಿಗೆ ಉಪಟಳ ಕೊಡಬಹುದೆಂದು ರಾಘವ ಅವರು ಕುದುರೆ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಇದಕ್ಕೆ ಆತ ಉಡಾಫೆ ಉತ್ತರ ನೀಡಲು ಆರಂಭಿಸಿದರು ಎನ್ನಲಾಗಿದೆ. ಹೀಗಾಗಿ ಕುದುರೆಯನ್ನು ಗದ್ದೆಯ ತೆಂಗಿನ ಮರಕ್ಕೆ ಕಟ್ಟಿಹಾಕಿ, ಕಡಬ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಕುದುರೆಯ ವಾರಸುದಾರನನ್ನು ಕುದುರೆಯೊಂದಿಗೆ ಠಾಣೆಗೆ ಕರೆಸಿ ರಸ್ತೆಗೆ ಬಿಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ. ಅಂತೂ ಮಾಲೀಕರ ಅಸಡ್ಡೆಯಿಂದಾಗಿ ಮೂಕ ಪ್ರಾಣಿ ಕೂಡಾ ಠಾಣೆಗೆ ಬರುವಂತಾಯಿತು.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯರಸ್ತೆಗಳಲ್ಲಿ ದಿನಂಪ್ರತಿ ಸಾಕು ಪ್ರಾಣಿಗಳಾದ ಆಡು, ದನ, ನಾಯಿಗಳು ಅಲೆದಾಡಿ ವಾಹನಗಳಿಗೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು, ಇದಕ್ಕೆ ಈಗ ಕುದುರೆ ಹೊಸ ಸೇರ್ಪಡೆಯಾಗಿದೆ. ಸಾಕು ಪ್ರಾಣಿಗಳನ್ನು ಬೇಕಾಬಿಟ್ಟಿ ಬಿಟ್ಟು ಸಾರ್ವಜನಿಕರಿಗೆ ಪರೋಕ್ಷ ತೊಂದರೆ ಕೊಡುತ್ತಿರುವ ಇಂತಹ ಮಾಲೀಕರ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ರಾಘವ ಪೊಲೀಸರನ್ನು ಆಗ್ರಹಿಸಿದ್ದಾರೆ.

ನವಿಲಿನ ವಿರುದ್ಧ ದೂರು ನೀಡಿದ ಮಹಿಳೆ:ಮನೆ ಹತ್ತಿರವಿದ್ದ ಕಳೆದ ನಾಲ್ಕೈದು ವರ್ಷಗಳಿಂದ ವಾಸವಿದ್ದ ನವಿಲೊಂದು, ತಾನು ಕೆಲಸ ಮಾಡುತ್ತಿದ್ದ ತನ್ನ ಮೇಲೆ ದಾಳಿ ನಡೆಸಿ, ಮಾರಣಾಂತಿಕ ಹಲ್ಲೆ ಮಾಡಿದೆ ಎಂದು ಮಹಿಳೆಯೊಬ್ಬರು ಅರರ್ಣಯ ಇಲಾಖೆ ದೂರು ನೀಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ. ಈ ಸುದ್ದಿ ಇದೀಗ ಜಿಲ್ಲೆಯಾದ್ಯಂದ ಚರ್ಚೆಗೆ ಗ್ರಾಸವಾಗಿದೆ.

ನವಿಲಿನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದು, ಗ್ರಾಮಸ್ಥರು ಕೂಡ ಮಹಿಳೆಯ ಪರ ನಿಂತಿದ್ದಾರೆ. ಆದರೆ ಪ್ರಾಣಿ ಪಕ್ಷಿಗಳ ಹಾವಳಿಗೆ, ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಕಾನೂನುಗಳು ಇಲ್ಲದೇ ಇರುವುದರಿಂದ ಅರಣ್ಯ ಇಲಾಖ ಎ ಸಿಬ್ಬಂದಿ ಫಚೀತಿಗೆ ಸಿಲುಕಿದ್ದಾರೆ.

ಇದನ್ನೂ ಓದಿ:ಅಪರೂಪದ ಕಾಯಿಲೆಗೆ ತುತ್ತಾಗಿರುವ ಶೌರ್ಯ ಹುಲಿಗೆ ಸೂಕ್ತ ಚಿಕಿತ್ಸೆ

Last Updated : Jul 3, 2023, 12:49 PM IST

ABOUT THE AUTHOR

...view details