ಕರ್ನಾಟಕ

karnataka

ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ: ಮನೆಗಳಲ್ಲಿ ದೀಪೋತ್ಸವ ಆಚರಿಸಲು ವಿ.ಹಿಂ.ಪ ಕರೆ

By

Published : Aug 3, 2020, 3:22 PM IST

ಆ.5ರಂದು ಬೆಳಗ್ಗೆ 11:30 ರಿಂದ12:30ರ ತನಕ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ವೇಳೆ ಮನೆ, ದೇವಾಲಯಗಳಲ್ಲಿ ರಾಮನಾಮ ಜಪ, ತಪ ವಿಶೇಷ ಪೂಜೆಗಳನ್ನು ಆಚರಿಸಬೇಕೇಂದು ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ.

ಹಿಂದೂ ಪರಿಷತ್ ಪತ್ರಿಕಾಗೋಷ್ಠಿ
ಹಿಂದೂ ಪರಿಷತ್ ಪತ್ರಿಕಾಗೋಷ್ಠಿ

ಪುತ್ತೂರು:ಆ.5ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿದೆ. ಆ ದಿನ ಮನೆಗಳಲ್ಲಿ ದೀಪೋತ್ಸವ ಆಚರಿಸಲು ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ ಎಂದು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ತಿಳಿಸಿದರು.

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ಶತಮಾನಗಳಿಂದ ಕಾಯುತ್ತಿದ್ದ ಹಿಂದೂಗಳ, ರಾಮಭಕ್ತರ ಕನಸು ನನಸಾಗಲಿದೆ. ಇಂತಹ ಸಂದರ್ಭದಲ್ಲಿ ಎಲ್ಲರ ಮನೆಗಳಲ್ಲಿ ಭಗವಾಧ್ವಜ, ತಳಿರು ತೋರಣ ಸಿಂಗರಿಸಿ, ದೀಪಗಳನ್ನು ಹಚ್ಚಿ ದೀಪೋತ್ಸವ ರೀತಿ ಸಂಭ್ರಮಿಸಲು ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ ಎಂದರು.

ಆ.5ರಂದು ಬೆಳಗ್ಗೆ 11:30ರಿಂದ 12:30ರ ತನಕ ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಲಿದೆ. ಈ ವೇಳೆ ರಾಮನಾಮ ಜಪ, ತಪ ವಿಶೇಷ ಪೂಜೆಗಳನ್ನು ಆಚರಿಸಬೇಕು. ಮನೆಗಳಲ್ಲಿ, ದೇಗುಲ, ಮಠ ಮಂದಿರಗಳಲ್ಲಿ ಪೂಜೆ ನೆರವೇರಿಸುವಂತೆ ಭಕ್ತರಲ್ಲಿ ವಿನಂತಿ ಮಾಡಿದರು.

ತಾಲೂಕಿನ ಎಲ್ಲಾ ಮಠಮಂದಿರ, ದೈವಸ್ಥಾನ, ಭಜನಾ ಮಂದಿರಗಳನ್ನು ತಳಿರು ತೋರಣದಿಂದ ಅಲಂಕರಿಸಿ, ಭಜನೆ ಸಂಕೀರ್ತನೆ, ಜಪ, ಪೂಜೆ, ದೀಪ ನೈವೇದ್ಯಗಳಿಂದ ಶ್ರೀರಾಮನನ್ನು ಆರಾಧಿಸುವಂತೆ ವಿನಂತಿಸಿದ ಅವರು, ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಾಲಯ ವಜ್ರ ಸಂಜೀವಿನಿಯಲ್ಲಿ ಕರಸೇವಕರನ್ನು ಗುರುತಿಸಿ ಸನ್ಮಾನಿಸುವ ಮತ್ತು ಅವರೊಂದಿಗೆ ನೇರಪ್ರಸಾರ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.

ABOUT THE AUTHOR

...view details