ಬಂಟ್ವಾಳ(ದಕ್ಷಿಣ ಕನ್ನಡ):ಕೆಲವು ತಪ್ಪು ಮಾಹಿತಿಗಳಿಂದಾಗಿ ಈ ಹಿಂದೆ ನಾನು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಟೀಕಿಸಿದ್ದೆ. ಆದರೆ ಈಗ ನನಗೆ ಅವರು ಏನು ಎಂಬುದರ ಅರಿವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ರಾತ್ರಿ ಹೊನಲು ಬೆಳಕಿನ ಕ್ರೀಡೋತ್ಸವ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುಕುಲ ಪರಂಪರೆಯನ್ನು ನೆನಪಿಸುವ ಶಿಕ್ಷಣ ರಾಜ್ಯದ ಎಲ್ಲ ಕಡೆಗಳಲ್ಲೂ ಕಾರ್ಯರೂಪಕ್ಕೆ ಬರಬೇಕು. ಸರ್ಕಾರವನ್ನು ಕಣ್ತೆರೆಸುವಂತಹ ಶಿಕ್ಷಣ ಸಂಸ್ಥೆಯನ್ನು ಕಲ್ಲಡ್ಕ ಪ್ರಭಾಕರ ಭಟ್ ನಡೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಕ್ರೀಡೋತ್ಸವವು ಉತ್ತರಾಧಿ ಮಠದ ಪರಿಸರದಲ್ಲಿ ಕಳೆದ ನನ್ನ ಬಾಲ್ಯದ ಜೀವನವನ್ನು ನೆನಪಿಸುವಂತೆ ಮಾಡಿತು ಎಂದರು.
ಕೆಲವು ಮಾಹಿತಿಗಳಿಂದ ತಪ್ಪು ಅಭಿಪ್ರಾಯ: ಕಲ್ಲಡ್ಕ ಡಾ.ಪ್ರಭಾಕರ ಭಟ್ ಬಗ್ಗೆ ನಾನು ಬೇರೆ ಏನೋ ತಿಳಿದುಕೊಂಡಿದ್ದೆ. ಇಲ್ಲಿಗೆ ಬರುವುದಕ್ಕೂ ಮೊದಲು ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಕೆಲವೊಮ್ಮೆ ನನಗೆ ಸಿಗುವ ಮಾಹಿತಿಗಳು ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತವೆ. ಸೌಹಾರ್ದತೆಯ ಬದುಕಿಗೆ ಇಲ್ಲಿನ ಮಾದರಿ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ಇಲ್ಲಿಗೆ ಬಾರದೇ ಇದ್ದಿದ್ದರೆ ನನ್ನ ಜೀವನದಲ್ಲಿ ನಷ್ಟವಾಗುತಿತ್ತು. ಈ ಶಾಲೆಯ ಸಂಸ್ಥಾಪಕರಾದ ಪ್ರಭಾಕರ ಭಟ್ ಅವರು ಸಮಾಜ ಶಿಕ್ಷಣಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಬಾಲ್ಯದಲ್ಲಿ ನಾನು ಶ್ರೀರಾಮನ ಭಜನೆ ಮಾಡುತ್ತಿದ್ದ ದಿನಗಳನ್ನು ಕ್ರೀಡೋತ್ಸವ ಮತ್ತೆ ನೆನಪಿಸಿತು. ಬಾಂಧವ್ಯದ ಕೊರತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದದ ದಿನಗಳನ್ನು ಕಾಣಲು ಸಂಸ್ಕೃತಿಯ ಬದುಕನ್ನು ಶಿಕ್ಷಣದ ಮೂಲಕ ಕೊಡುತ್ತಿರುವ ಹಾಗೂ ಸರಕಾರದ ಕಣ್ತೆರಸುವ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಡಾ.ಭಟ್ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.