ಮಂಗಳೂರು:ಕೊರೊನಾ ಸೋಂಕಿಗೆ ಒಳಗಾಗಿದ್ದ ಕುಟುಂಬಕ್ಕೆ ಬಾವಿಯ ನೀರು ಸೇದಿ ಉಪಯೋಗಿಸಲು ಎದುರಾಗಿದ್ದ ಸಮಸ್ಯೆಯನ್ನು ಗ್ರಾ.ಪಂ ಸದಸ್ಯರುಗಳೇ ಸೇರಿಕೊಂಡು ಪರಿಹರಿಸಿದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರ್ನಲ್ಲಿ ನಡೆದಿದೆ.
ಕೊರೊನಾ ಸೋಂಕಿತರಿಗೆ ಎದುರಾದ ಕುಡಿಯುವ ನೀರಿನ ಸಮಸ್ಯೆ: ಡ್ರಮ್ ನೀಡಿ ಸಮಸ್ಯೆ ಪರಿಹಾರ - ಗ್ರಾಮ ಪಂಚಾಯಿತ ಸದಸ್ಯರು
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಸೋಂಕಿತ ಕುಟುಂಬವೊಂದಕ್ಕೆ ಸ್ಥಳೀಯರೇ ಸೇರಿಕೊಂಡು ಅದಕ್ಕೆ ಪರಿಹಾರ ನೀಡಿದ್ದಾರೆ.

ಗುತ್ತಿಗಾರ್ ಬಳ್ಳಕ ಎಂಬಲ್ಲಿ ಕುಟುಂಬವೊಂದರ ಸದಸ್ಯರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಹಿಂದಿನಿಂದಲೂ ಈ ಕುಟುಂಬದವರು ಸನಿಹದ ಮನೆಯೊಂದರಿಂದ ಬಾವಿಯ ನೀರನ್ನು ಉಪಯೋಗಿಸುತ್ತಿದ್ದರು. ಆದರೆ, ಇತ್ತೀಚೆಗೆ ಅವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಬಾವಿ ನೀರು ತರುವುದು ಸಮಸ್ಯೆಯಾಗಿತ್ತು. ಊರಿನವರಿಗೂ ಸಹ ಇದರಿಂದ ಆತಂಕ ಎದುರಾಗಿತ್ತು. ಇತ್ತೀಚೆಗೆ ಪತ್ರಕರ್ತ ಮಹೇಶ್ ಪುಚ್ಚೆಪ್ಪಾಡಿ ಅವರ ಜೊತೆಗೆ ಗ್ರಾಪಂ ಸದಸ್ಯರು ಇಲ್ಲಿಗೆ ಭೇಟಿ ನೀಡಿದಾಗ ಈ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದರು.
ಆಗ ಗ್ರಾ.ಪಂ ಸದಸ್ಯರಾದ ಲತಾಕುಮಾರಿ, ಶಾರದಾ ಎಂ.ಕೆ, ವಸಂತ ಮೊಗ್ರ, ಭರತ ಕಮಿಲ ಮತ್ತು ಪಿಡಿಒ ಶ್ಯಾಮ ಪ್ರಸಾದ್ ಅವರು ದೊಡ್ಡ ಡ್ರಮ್ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆ ಪರಿಹರಿಸಿದ್ದಾರೆ. ಈ ದೊಡ್ಡ ಡ್ರಮ್ಗೆ ಊರಿನವರು ನೀರು ತಂದು ಹಾಕಬೇಕು, ಅಲ್ಲಿಂದ ಕೊರೊನಾ ಸೋಂಕಿತ ಮನೆಯವರು ನೀರು ಕೊಂಡೋಗಲು ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆಯಿಂದ ಕೊರೊನಾ ಸೋಂಕಿತರಿಗೆ ಎದುರಾದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ.