ಕರ್ನಾಟಕ

karnataka

By

Published : May 5, 2020, 4:39 PM IST

ETV Bharat / state

ಕೊರೊನಾ ವಿಷಯದಲ್ಲಿ ಡಿಕೆಶಿ ರಾಜಕೀಯ: ಸಚಿವ ಬಿ.ಸಿ.ಪಾಟೀಲ್​

ಮಹಾಮಾರಿಯಂತೆ ವಿಶ್ವದ ಅಸಂಖ್ಯಾತ ವರ್ಗದ ಜನರನ್ನು ಕಾಡುತ್ತಿರುವ ಕೊರೊನಾ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಜಕೀಯ ಮಾಡುತ್ತಿದ್ದಾರೆ ಎಂದರೆ ಅವರ ಚಿಂತನೆ ಎಂಥದ್ದು ಎಂದು ನೀವೇ ವಿಚಾರ ಮಾಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

minister B.C.Patil
ಕೃಷಿ ಸಚಿವ ಬಿ.ಸಿ.ಪಾಟೀಲ್

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋವಿಡ್-19 ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರೆ ಅವರ ಚಿಂತನೆ ಎಂಥದ್ದು ಎಂದು ಜನರೇ ವಿಚಾರ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟುವಾಗಿ ಟೀಕಿಸಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್

ಡಿ.ಕೆ.ಶಿವಕುಮಾರ್ ಮೂದಲಿಸುವಷ್ಟು ಬಡತನ ಸರ್ಕಾರಕ್ಕೆ ಬಂದಿಲ್ಲ. ನಮ್ಮ ಸರ್ಕಾರ ಸದೃಢವಾಗಿದೆ. ರಾಜ್ಯ ಸರ್ಕಾರವೇ ಎಲ್ಲಾ ಪ್ರಯಾಣ ವೆಚ್ಚ ಭರಿಸಿ, ವಲಸೆ ಕಾರ್ಮಿಕರನ್ನು ಗುರುವಾರದವರೆಗೆ ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ ಎಂದು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದರು.

ಈಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭಿಕ್ಷೆ ಬೇಡಿಯಾದರೂ ವಸಲೆ ಕಾರ್ಮಿಕರಿಗೆ ಸಹಾಯ ಮಾಡುತ್ತೇನೆ. ಪ್ರಯಾಣ ದರ ಭರಿಸಲು 1 ಕೋಟಿ ನೀಡುತ್ತೇನೆ ಎಂದು ಸರ್ಕಾರದ ವಿರುದ್ಧ ಕೆಂಡಕಾರಿದ್ದರು.

ಸೋಂಕಿನ ಹಿನ್ನೆಲೆ ಲಾಕ್​ಡೌನ್ ಜಾರಿಗೊಳಿಸಿದ ಸಂದರ್ಭ ಕೃಷಿ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಆದೇಶ ನೀಡಿವೆ. ಈ ಹಿನ್ನೆಲೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಸಭೆಗಳನ್ನು ನಡೆಸುತ್ತಿದ್ದೇನೆ. ಮಂಗಳೂರಿನಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಎಲ್ಲರನ್ನೂ ಕರೆಸಿ ಸಭೆ ನಡೆಸಿ, ರೈತರು ಯಾವುದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಿಲ್ಲಿಸದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಮುಂಗಾರು ಪ್ರಾರಂಭ ಆಗಿರುವುದರಿಂದ ಸರ್ಕಾರದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಯಾವ ರೀತಿ ಒದಗಿಸಬೇಕು, ಎಷ್ಟು ಸಂಗ್ರಹವಿದೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇನೆ. ಈಗಾಗಲೇ 28 ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು, ದಕ್ಷಣ ಕನ್ನಡ ಜಿಲ್ಲೆಯಲ್ಲಿಯೂ ಇಂದು ಸಭೆ ನಡೆಲಾಗಿದೆ. ಇಲ್ಲಿನ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಲಾಗಿದೆ ಎಂದರು.

ಕೃಷಿ ಚಟುವಟಿಕೆ ಕುರಿತು ಸಾಕಷ್ಟು ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿ, ಹೆಚ್ಚಿನ ನೆರವು ಹಾಗೂ ಸಹಾಯ ಕೇಳುತ್ತೇನೆ ಎಂದು ಬಿ.ಸಿ.ಪಾಟೀಲ್​ ಭರವಸೆ ನೀಡಿದರು.

ABOUT THE AUTHOR

...view details