ಪುತ್ತೂರು (ದಕ್ಷಿಣ ಕನ್ನಡ): ರಾಜ್ಯ ಸರಕಾರ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟೋಪಚಾರಕ್ಕಾಗಿ ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟೀನ್ ಆರಂಭಿಸಿದೆ. ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಎಲ್ಲ ಇಂದಿರಾ ಕ್ಯಾಂಟೀನ್ನಲ್ಲಿ ಅಗತ್ಯವಿರುವ ಬಡವರಿಗೆ ಹಾಗೂ ಕಾರ್ಮಿಕರಿಗೆ ಉಚಿತವಾಗಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟವನ್ನು ನೀಡಲು ನಿರ್ಧಾರ ಕೈಗೊಂಡಿದೆ.
ಕೊರೊನಾ ಕಾರಣಕ್ಕಾಗಿ ಈ ಕ್ಯಾಂಟೀನ್ಗಳಲ್ಲಿ ಆಹಾರವನ್ನು ಗ್ರಾಹಕರಿಗೆ ಪಾರ್ಸಲ್ ಮೂಲಕ ನೀಡಲಾಗುತ್ತಿದೆ. ಸರಕಾರ ಯಾವಾಗ ಉಚಿತ ಆಹಾರ ಪೂರೈಕೆಯ ನಿರ್ಧಾರ ಕೈಗೊಂಡಿದೆಯೋ, ಅಂದಿನಿಂದ ಇಂದಿರಾ ಕ್ಯಾಂಟೀನ್ಗಳಲ್ಲಿ ನಿತ್ಯ 300 ಪಾರ್ಸಲ್ಗಳ ಲೆಕ್ಕ ಕಾಣಲಾರಂಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲೂ ಇದೇ ರೀತಿ ಲೆಕ್ಕಾಚಾರ ಕಾಣಲಾರಂಭಿಸಿದ್ದು, ಈ ಬಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಕ್ಯಾಂಟೀನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕ್ಯಾಂಟೀನ್ ಸಿಬ್ಬಂದಿ ನಡೆಸುತ್ತಿರುವ ಗೋಲ್ ಮಾಲ್ ಬೆಳಕಿಗೆ ಬಂದಿದೆ.
ಸರಕಾರದ ಆದೇಶದ ಪ್ರಕಾರ ಇಂದಿರಾ ಕ್ಯಾಂಟೀನ್ನಲ್ಲಿ ನಿತ್ಯ 300 ಜನರಿಗೆ ಉಚಿತ ಆಹಾರ ನೀಡಲು ಅವಕಾಶ ನೀಡಲಾಗಿದೆ. ಆಹಾರವನ್ನು ಪಾರ್ಸಲ್ ಕೊಂಡೊಯ್ಯುವ ಗ್ರಾಹಕ ತನ್ನ ಮೊಬೈಲ್ ನಂಬರ್ ಅಥವಾ ಅಧಾರ್ ಕಾರ್ಡ್ ತೋರಿಸಿ ಆಹಾರವನ್ನು ಪಡೆದುಕೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಪುತ್ತೂರು ಇಂದಿರಾ ಕ್ಯಾಂಟೀನ್ನಲ್ಲೂ ಇದೇ ರೀತಿ ಪಾರ್ಸಲ್ ವ್ಯವಸ್ಥೆ ಮಾಡಲಾಗಿದ್ದರೂ, ಕ್ಯಾಂಟೀನ್ ದಾಖಲೆ ಪುಸ್ತಕದಲ್ಲಿ ಗ್ರಾಹಕರಿಗಿಂದ ಪಾರ್ಸಲ್ಗಳ ಸಂಖ್ಯೆಯೇ ಹೆಚ್ಚಾಗಿರುವುದು ಶಾಸಕರ ಗಮನಕ್ಕೆ ಬಂದಿದೆ.